ಯುಗಾದಿ ಮತ್ತು ರಂಜಾನ್ ಹಬ್ಬಗಳನ್ನು ಒಂದೇ ವೇದಿಕೆಯಲ್ಲಿ ಸಂಭ್ರಮಿಸುವ ಮೂಲಕ ಸಮಾಜದಲ್ಲಿ ಸೌಹಾರ್ದತೆ, ಏಕತೆ ಮತ್ತು ಸಹಬಾಳ್ವೆಯನ್ನು ಬಲಪಡಿಸುವ ಉದ್ದೇಶದಿಂದ ನಗರದಲ್ಲಿ ಗುರುವಾರ ಅರ್ಥಪೂರ್ಣ ಹಾಗೂ ಭಾವಪೂರ್ಣ ಕಾರ್ಯಕ್ರಮ ಆಯೋಜಿಸಲಾಯಿತು.
ನಗರದ ಜಗತ್ ವೃತ್ತದಲ್ಲಿ ಸೌಹಾರ್ದ ಕರ್ನಾಟಕ ಹಾಗೂ ಸಮುದಾಯ ಕಲಬುರಗಿ ವತಿಯಿಂದ ನಡೆದ ಸೌಹಾರ್ದ ಯುಗಾದಿ–ರಂಜಾನ್ ಕಾರ್ಯಕ್ರಮದಲ್ಲಿ ವಿವಿಧ ಧರ್ಮ, ಸಮುದಾಯಗಳ ಜನರು ಒಂದಾಗಿ ಸೇರಿ ಹಬ್ಬದ ಸಂಭ್ರಮ ಹಂಚಿಕೊಂಡರು. ಪರಸ್ಪರ ಸಿಹಿ ಹಂಚಿಕೊಳ್ಳುವ ಮೂಲಕ ಸೌಹಾರ್ದತೆಯ ಸಂಕೇತವಾಗಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಯುಗಾದಿಯ ಬೇವು–ಬೆಲ್ಲದ ತಾತ್ಪರ್ಯ ಮತ್ತು ರಂಜಾನ್ ಹಬ್ಬದ ಮೌಲ್ಯಗಳನ್ನು ಒಟ್ಟುಗೂಡಿಸಿ, ಜೀವನದಲ್ಲಿ ಸಿಹಿ–ಕಹಿ ಅನುಭವಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂಬ ಸಂದೇಶ ನೀಡಲಾಯಿತು. ಸಹನೆ, ದಾನಧರ್ಮ, ಆತ್ಮಶುದ್ಧೀಕರಣ ಮತ್ತು ಮಾನವೀಯ ಮೌಲ್ಯಗಳು ಪ್ರತಿಯೊಬ್ಬರ ಜೀವನದಲ್ಲಿ ಅವಿಭಾಜ್ಯವಾಗಿರಬೇಕು ಎಂದು ಸೌಹಾರ್ದ ಕರ್ನಾಟಕ ಸಂಘಟಕರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸೌಹಾರ್ದ ಕರ್ನಾಟಕದ ಕೆ. ನೀಲಾ ಮಾತನಾಡಿ, ಇಂದಿನ ಜಾಗತಿಕ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. “ಜಗತ್ತಿನ ಹಲವೆಡೆ ಯುದ್ಧ ವಾತಾವರಣ ನಿರ್ಮಾಣವಾಗಿದ್ದು, ಸ್ವಾರ್ಥಪರ ರಾಜಕೀಯ ಹಾಗೂ ಅಧಿಕಾರದ ಪೈಪೋಟಿಯ ಪರಿಣಾಮವಾಗಿ ಮಾನವಕುಲವೇ ಸಂಕಷ್ಟಕ್ಕೆ ಸಿಲುಕುತ್ತಿದೆ. ಆದರೆ ಸಾಮಾನ್ಯ ಜನತೆ ಯುದ್ಧವನ್ನು ಒಪ್ಪುವುದಿಲ್ಲ. ಅವರು ಶಾಂತಿ, ಪ್ರೀತಿ ಮತ್ತು ಸಹಬಾಳ್ವೆಯ ದಾರಿಯನ್ನೇ ಆರಿಸುತ್ತಾರೆ,” ಎಂದು ಹೇಳಿದರು.

ಅವರು ಮುಂದುವರಿಸಿ, “ಯುಗಾದಿ ಮತ್ತು ರಂಜಾನ್ ಒಂದೇ ಸಮಯದಲ್ಲಿ ಬಂದಿರುವುದು ಅತ್ಯಂತ ವಿಶೇಷವಾಗಿದೆ. ಯುಗಾದಿ ಹೊಸ ಚಿಗುರು, ಹೊಸ ಜೀವನ ಮತ್ತು ಹೊಸ ಆಲೋಚನೆಗಳ ಸಂಕೇತವಾಗಿದ್ದು, ಕೃಷಿ ಸಂಸ್ಕೃತಿಗೆ ಆಧಾರವಾದ ಈ ಹಬ್ಬ ಜನರಲ್ಲಿ ಹೊಸ ಚೈತನ್ಯ ಮತ್ತು ಆಶಾವಾದ ಮೂಡಿಸುತ್ತದೆ. ರಂಜಾನ್ ಹಬ್ಬ ಆತ್ಮಶುದ್ಧೀಕರಣ, ಸಹನೆ ಮತ್ತು ಬಡವರ ಸಂಕಷ್ಟಗಳನ್ನು ಅರಿಯುವ ಮೌಲ್ಯಗಳನ್ನು ಸಾರುತ್ತದೆ” ಎಂದು ವಿವರಿಸಿದರು.
“ಸೌಹಾರ್ದ ಯುಗಾದಿ–ರಂಜಾನ್ ನಮ್ಮ ದೇಶದ ದೊಸ್ತರಹೋದ್ಧೀನ್ ಸಂಸ್ಕೃತಿಯ ಪ್ರತೀಕವಾಗಿದೆ. ಶರಣರು ಮತ್ತು ಸೂಫಿ ಸಂತರು ಸಾರಿದ ಪ್ರೀತಿ, ಮಹೋಬತ್ ಮತ್ತು ಮಾನವೀಯ ಮೌಲ್ಯಗಳು ಎಂದಿಗೂ ನಶಿಸುವುದಿಲ್ಲ. ನಾವು ಆ ಪರಂಪರೆಯನ್ನು ಮುಂದುವರಿಸುವ ಹೊಣೆ ಹೊತ್ತಿದ್ದೇವೆ,” ಎಂದು ಅವರು ತಿಳಿಸಿದರು.
ಸಮುದಾಯದ ಮುಖಂಡ ಶ್ರೀಶೈಲ ಘೊಳಿ ಮಾತನಾಡಿ, “ಜನರಲ್ಲಿ ಪ್ರೀತಿ ಬೆಳೆಸಬೇಕೇ ಹೊರತು ಯುದ್ಧವಲ್ಲ. ಯುದ್ಧಗಳು ಯಾವತ್ತೂ ವಿನಾಶವನ್ನೇ ತರುತ್ತವೆ. ಮಾನವೀಯ ಮೌಲ್ಯಗಳು ಕುಸಿಯುತ್ತವೆ. ಆದರೆ ಪ್ರೀತಿ ಮಾತ್ರ ಎಲ್ಲರನ್ನು ಮತ್ತೆ ಒಂದಾಗಿಸುತ್ತದೆ. ಸೌಹಾರ್ದ ಯುಗಾದಿ–ರಂಜಾನ್ ಮೂಲಕ ಜನರನ್ನು ಒಗ್ಗೂಡಿಸಿ ಸಮಾಜದಲ್ಲಿ ಏಕತೆ ಬೆಳೆಸುವುದು ನಮ್ಮ ಗುರಿ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿಕ್ಷಕಿ ಸುಲ್ತಾನ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಬ್ಬಗಳ ಮೂಲ ಉದ್ದೇಶಗಳು ಮಸುಕಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. “ಹಿಂದೆ ಹಬ್ಬಗಳು ಬಂದರೆ ಎಲ್ಲರೂ ಒಟ್ಟಾಗಿ ಸಂಭ್ರಮಿಸುತ್ತಿದ್ದೆವು. ಆದರೆ ಈಗ ಧರ್ಮದ ಹೆಸರಿನಲ್ಲಿ ಮನುಷ್ಯರ ನಡುವೆ ಗೋಡೆಗಳು ನಿರ್ಮಾಣವಾಗುತ್ತಿವೆ. ಹಿಂಸೆಯಿಂದ ನಿರಪರಾಧಿಗಳ ಜೀವ ಕಳೆದುಕೊಳ್ಳುತ್ತಿರುವುದು ನೋವಿನ ಸಂಗತಿ,” ಎಂದು ಹೇಳಿದರು.
“ಮಾನವಧರ್ಮವೇ ಅತ್ಯಂತ ಮುಖ್ಯ. ನಾವು ಬೆಳೆದು ಬಂದ ಭಾವೈಕ್ಯತೆ, ಸೌಹಾರ್ದತೆ ಮತ್ತು ಸಮಾನತೆಯ ಪರಂಪರೆಯನ್ನು ಮುಂದಿನ ಪೀಳಿಗೆಗೂ ಹಂಚಬೇಕು. ಅದೇ ನಿಜವಾದ ಹಬ್ಬದ ಅರ್ಥ,” ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಪದ್ಮಿನಿ ಪಾಟೀಲ್ ಕಿರಣಗಿ, ಮೆಹಬೂಬ್ ಮುಖಾದಮ್ ಸೇರಿದಂತೆ ಹಲವರು ಮಾತನಾಡಿ, ಹಬ್ಬಗಳ ಮಹತ್ವವು ಕೇವಲ ಆಚರಣೆಯಲ್ಲಿ ಮಾತ್ರವಲ್ಲ, ಪರಸ್ಪರ ಪ್ರೀತಿ, ಗೌರವ ಮತ್ತು ಒಗ್ಗಟ್ಟನ್ನು ಬೆಳೆಸುವುದಲ್ಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಮುಸ್ಲಿಂ ಬಾಂಧವರು ರೋಜಾ ಮುಕ್ತಾಯ ಮಾಡುವ ಸಂದರ್ಭದಲ್ಲಿ ಖರ್ಜೂರ, ಬಾಳೆಹಣ್ಣು, ದ್ರಾಕ್ಷಿ ಹಂಚಿ ಇಫ್ತಾರ್ ನೆರವೇರಿಸಿದರು. ಜೊತೆಗೆ ಯುಗಾದಿಯ ಅಂಗವಾಗಿ ಬೇವು–ಬೆಲ್ಲ ಮತ್ತು ಪಾನಕವನ್ನು ಪರಸ್ಪರ ಹಂಚಿಕೊಂಡು ಸಾಂಸ್ಕೃತಿಕ ಸೌಹಾರ್ದತೆಯ ಜೀವಂತ ಉದಾಹರಣೆಯಾಗಿ ಆಚರಣೆ ನಡೆಯಿತು.
ಇದನ್ನು ಓದಿದ್ದೀರಾ? ಕಲಬುರಗಿ | ಬಲಗೈ ಸಮುದಾಯಕ್ಕೆ ಅನ್ಯಾಯ ಆರೋಪ: ಮಾ. 25ರಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟಕ್ಕೆ ಕರೆ
ಈ ಕಾರ್ಯಕ್ರಮದಲ್ಲಿ ದತ್ತಾತ್ರೇಯ ಇಕ್ಕಳಕಿ, ಅಶೋಕ ಶಟ್ಟಕಾರ್, ನಾಗೇಂದ್ರ, ಕೋದಂಡರಾಮಪ್ಪ, ಧನರಾಜ್, ಮೀನಾಕ್ಷಿ ಬಾಳಿ, ಡಾ. ಜಯದೇವಿ ಗಾಯಕವಾಡ್, ಗವಿಸಿದ್ದಪ್ಪ ಪಾಟೀಲ್, ರಾಜಕುಮಾರ್ ಮಾಳಗೆ, ಸಿದ್ದಪ್ಪ ಹೊಸಮನಿ, ಸಾಜೀದ್, ಲವಿತ್ರ, ಸುಜಾತ, ಮೈಬೂಬಿ ಸೇರಿದಂತೆ ವಿವಿಧ ಸಮುದಾಯದ ಮುಖಂಡರು, ಮಹಿಳೆಯರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶಾಂತಿ, ಪ್ರೀತಿ ಮತ್ತು ಸಹಬಾಳ್ವೆಯ ಸಂದೇಶವನ್ನು ಬಲವಾಗಿ ಸಾರಿದರು.





