ಹೆಚ್ಚಿನ ಹಣ ಗಳಿಸಬಹುದೆಂಬ ಆಮಿಷವೊಡ್ಡಿ ಆನ್ಲೈನ್ ಹೂಡಿಕೆಗೆ ಪ್ರಚೋದಿಸಿದ ಸೈಬರ್ ವಂಚಕರು, ಜೆಸ್ಕಾಂನ ನಿವೃತ್ತ ನೌಕರರೊಬ್ಬರಿಂದ ₹2.24 ಕೋಟಿ ಮೊತ್ತವನ್ನು ವಂಚಿಸಿರುವ ಘಟನೆ ಕಲಬುರಗಿ ನಗರದಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ನಗರದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಗಂಭೀರ ಆತಂಕ ಮೂಡಿಸಿದೆ.
ನಗರದ ಅಕ್ಕಮಹಾದೇವಿ ಕಾಲೊನಿಯ ನಿವಾಸಿ ಹಾಗೂ ಜೆಸ್ಕಾಂನ ನಿವೃತ್ತ ನೌಕರರಾದ 63 ವರ್ಷದ ದತ್ತಪ್ಪ ಸುರಪುರ ಅವರು ವಂಚನೆಗೆ ಒಳಗಾದವರು ಎಂದು ಪೊಲೀಸರು ತಿಳಿಸಿದ್ದಾರೆ.
ದೂರುದಾರರ ಮಾಹಿತಿ ಪ್ರಕಾರ, ಕಳೆದ ವರ್ಷದ ಜೂನ್ 11ರಂದು ಅವರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ರೀಲ್ಸ್ ವೀಕ್ಷಿಸುತ್ತಿರುವ ವೇಳೆ ‘ಆಟೋ ಟ್ರೇಡಿಂಗ್’ ಸಂಬಂಧಿಸಿದ ಆಕರ್ಷಕ ಜಾಹೀರಾತೊಂದು ಕಾಣಿಸಿಕೊಂಡಿದೆ. ಹೆಚ್ಚಿನ ಲಾಭದ ಭರವಸೆ ನೀಡಿದ ಆ ಜಾಹೀರಾತಿನಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ ಅವರು, ತಮ್ಮ ಹೆಸರು, ಮೊಬೈಲ್ ಸಂಖ್ಯೆ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ನಮೂದಿಸಿದ್ದಾರೆ.
ಈ ಮಾಹಿತಿಯ ಆಧಾರದ ಮೇಲೆ ಕೆಲವೇ ಸಮಯದಲ್ಲಿ ಅರುಣ ಜೋಶಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ಸಂಪರ್ಕಿಸಿ, ‘ಕ್ವಾಂಟಾ ಪಲ್ಸ್’ ಎಂಬ ಆನ್ಲೈನ್ ಟ್ರೇಡಿಂಗ್ ವೇದಿಕೆಯಲ್ಲಿ ಹೂಡಿಕೆ ಮಾಡಿದರೆ ದಿನನಿತ್ಯ ಖಚಿತ ಲಾಭ ದೊರೆಯುತ್ತದೆ ಎಂದು ನಂಬಿಸುವ ಪ್ರಯತ್ನ ನಡೆಸಿದ್ದಾನೆ.
ಆರಂಭದಲ್ಲಿ ನಂಬಿಕೆ ಮೂಡಿಸುವ ಉದ್ದೇಶದಿಂದ ದತ್ತಪ್ಪ ಸುರಪುರ ಅವರಿಗೆ ₹12 ಸಾವಿರ ಹೂಡಿಕೆ ಮಾಡುವಂತೆ ಪ್ರೇರೇಪಿಸಲಾಗಿದೆ. ಹೂಡಿಕೆಯ ನಂತರ ದಿನನಿತ್ಯ ಆಟೋ ಟ್ರೇಡಿಂಗ್ ಲಾಭವಾಗಿ ₹500ರಿಂದ ₹1,000ವರೆಗೆ ಹಣವು ಅವರ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದ್ದುದರಿಂದ, ಅವರು ವಂಚಕರ ಮಾತಿಗೆ ನಂಬಿಕೆ ಇಟ್ಟಿದ್ದಾರೆ.
ನಂತರ ಸೈಬರ್ ವಂಚಕರು ವಿವಿಧ ಹಂತಗಳಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಪ್ರಚೋದಿಸಿ, ಲಾಭ ಹೆಚ್ಚಾಗುತ್ತದೆ, ತೆರಿಗೆ ಮತ್ತು ಪ್ರೊಸೆಸಿಂಗ್ ಶುಲ್ಕ ಪಾವತಿಸಬೇಕಿದೆ ಎಂಬ ನೆಪ ಹೇಳಿ ಹಲವು ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಈ ರೀತಿಯಾಗಿ ಕೆಲ ತಿಂಗಳುಗಳ ಅವಧಿಯಲ್ಲಿ ದತ್ತಪ್ಪ ಸುರಪುರರಿಂದ ಹಂತ ಹಂತವಾಗಿ ಒಟ್ಟು ₹2.24 ಕೋಟಿ ಮೊತ್ತವನ್ನು ವಂಚಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ನಸುಕಿನ ಜಾವ ಕಳ್ಳರ ಕೈಚಳಕ : ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
ಲಾಭದ ಹಣವನ್ನು ವಾಪಸ್ ಪಡೆಯಲು ಯತ್ನಿಸಿದಾಗ ವಂಚಕರು ಸಂಪರ್ಕ ಕಡಿತಗೊಳಿಸಿದ್ದು, ಆ ನಂತರವೇ ತಮಗೆ ವಂಚನೆ ಆಗಿರುವುದು ತಿಳಿದುಬಂದಿದೆ. ತಕ್ಷಣವೇ ದತ್ತಪ್ಪ ಸುರಪುರ ಅವರು ಸಂಬಂಧಿಸಿದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸೈಬರ್ ಅಪರಾಧ ವಿಭಾಗದ ಮೂಲಕ ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗೆ ಬ್ಯಾಂಕ್ ಖಾತೆಗಳು, ಮೊಬೈಲ್ ಸಂಖ್ಯೆಗಳು ಹಾಗೂ ಆನ್ಲೈನ್ ವ್ಯವಹಾರಗಳ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.





