ಕಲಬುರಗಿ ಜಿಲ್ಲೆಯಲ್ಲಿ ಫೆಬ್ರುವರಿ 21 ರಿಂದ 28 ರವರೆಗೆ ‘ಕಲಬುರಗಿ ನಾಟಕೋತ್ಸವ 26’ ಅನ್ನು ಆಯೋಜನೆ ಮಾಡಲಾಗುತ್ತಿದೆ. ಭಾನುವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾರ್ಯಕ್ರಮದ ಲೋಗೋ ಬಿಡುಗಡೆಗೊಳಿಸಿದರು.
ಬಳಿಕ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ʼರಂಗ ಚಟುವಟಿಕೆಗಳನ್ನು ಅಭಿವೃದ್ದಿಪಡಿಸಲು ಐದು ವರ್ಷಗಳ ಕಾಲ ನಿರಂತರ ನಾಟಕೋತ್ಸವ ಆಯೋಜಿಸಲಾಗುತ್ತಿದೆ. ಅದರ ಮೊದಲ ಪ್ರಯತ್ನವಾಗಿ ನಾಟಕೋತ್ಸವ ಆಯೋಜಿಸಲಾಗುತ್ತಿದೆ.
ʼಕಲಬುರಗಿ ಜಿಲ್ಲೆ ಶರಣರ, ಸಂತರ, ಸೂಫಿಗಳ ನಾಡಾಗಿದ್ದು ನಾಟಕೋತ್ಸವ ಆಯೋಜನೆ ಮಾಡುವುದರಿಂದ ಅವರ ತತ್ವಗಳನ್ನು ನಾಟಕಗಳ ಮೂಲಕ ಪ್ರೇಕ್ಷಕರಿಗೆ ನುರಿತ ಹಾಗೂ ಪರಿಣಿತ ನಾಟಕ ತಂಡಗಳ ಹಾಗೂ ರಂಗಕರ್ಮಿಗಳ ಮೂಲಕ ತಲುಪಿಸುವ ಕ್ರಿಯೆ ಮುಂದಿನ ಐದು ವರ್ಷಗಳ ಕಾಲ ನಡೆಯಲಿದೆ. ಸದ್ಯಕ್ಕೆ ಈಗ ಏರ್ಪಡಿಸುತ್ತಿರುವ ನಾಟಕೋತ್ಸವವನ್ನು ರಂಗಶಂಕರದೊಂದಿಗೆ ಸಹಭಾಗಿತ್ವ ಇದ್ದು ಸಾರ್ವಜನಿಕರು ಮಕ್ಕಳೊಂದಿಗೆ ನಾಟಕಗಳನ್ನು ನೋಡುವ ಮೂಲಕ ಪ್ರೋತ್ಸಾಹಿಸಬೇಕುʼ ಎಂದು ಕೋರಿದರು.
ʼಇಷ್ಟು ವರ್ಷಗಳ ಕಾಲ ನಗರದಲ್ಲಿ ರಂಗ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿರಲಿಲ್ಲ. ಆದ್ದರಿಂದ ನಿರಂತರ ಚಟುವಟಿಕೆ ನಡೆಸುವ ಉದ್ದೇಶದಿಂದ ಐದು ವರ್ಷಗಳ ಕಾಲದ ಯೋಜನೆ ಹಾಕಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಸ್ಥಳೀಯ ಕಲಾವಿದರಿಗೆ, ರಂಗಕರ್ಮಿಗಳಿಗೆ ಹೆಚ್ಚಿನ ಅವಕಾಶ ನೀಡಲಾಗುವುದುʼ ಎಂದರು.
ಇದನ್ನೂ ಓದಿ : ಬೀದರ್ | ಕನ್ನಡ ಸಾಹಿತ್ಯ ಪ್ರತಿಪಾದಿಸುವುದು ಸಮಾನತೆ, ಸೌಹಾರ್ದತೆ : ಬರಗೂರು ರಾಮಚಂದ್ರಪ್ಪ
ಈ ಸಂದರ್ಭದಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ್, ಜಗದೇವ ಗುತ್ತೇದಾರ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸೇರಿದಂತೆ ಮತ್ತಿತರರಿದ್ದರು.





