ಕಮಲಾಪುರ : ಬಸವಾದಿ ಶರಣರು ಮಾಡಿರುವ ತ್ಯಾಗ–ಬಲಿದಾನಗಳ ಸಂದೇಶವನ್ನು ಮನೆ-ಮನೆಗೆ ತಲುಪಿಸುವುದು ಹಾಗೂ ಶರಣ ಹರಳಯ್ಯ–ಕಲ್ಯಾಣಮ್ಮ ದಂಪತಿ ಚಮ್ಮಾವುಗೆಗಳಿರುವ ಸೇಡಂ ತಾಲೂಕಿನ ಬಿಜನಳ್ಳಿ ಗ್ರಾಮ, ಬಸವಕಲ್ಯಾಣದ ತ್ರಿಪುರಾಂತ ಕೆರೆ ಸಮಗ್ರ ಅಭಿವೃದ್ಧಿ ಆಗಬೇಕೆಂಬ ಸದಾಶಯದೊಂದಿಗೆ ಬೀದರ್ನ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದಿಂದ ಹಮ್ಮಿಕೊಂಡಿರುವ ‘ಕಲ್ಯಾಣ ನಡಿಗೆ ಮತ್ತು ಹರಳಯ್ಯ ಜ್ಯೋತಿಯಾತ್ರೆ’ ಸೋಮವಾರ ಕಮಲಾಪುರ ತಾಲೂಕಿನ ಜೀವಣಗಿ ಗ್ರಾಮಕ್ಕೆ ತಲುಪಿತು.
ಫೆ.15ರಿಂದ ಮಾರ್ಚ್ 1ರವರೆಗೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಸುಕ್ಷೇತ್ರ ಬಿಜನಳ್ಳಿಯ ಶರಣಭೂಮಿ ಬಸವಕಲ್ಯಾಣದವರೆಗೆ ಪಾದಯಾತ್ರೆ ನಡೆಯುತ್ತಿದ್ದು, 9ನೇ ದಿನ ಜೀವಣಗಿ ಗ್ರಾಮ ತಲುಪಿತು.

ಸೋಮವಾರ ಬೆಳಿಗ್ಗೆ ಕಾಳಗಿ ತಾಲೂಕಿನ ರಟಕಲ್ ಸಾಮೂಹಿಕ ಇಷ್ಟಲಿಂಗ ಪೂಜೆ ಜರುಗಿತು. ಬಳಿಕ ಕಲ್ಯಾಣ ನಡಿಗೆ ಮತ್ತು ಹರಳಯ್ಯಾ ಜ್ಯೋತಿ ಯಾತ್ರೆಯು ಕಾಲ್ನಡಿಗೆ ಮುಖಾಂತರ ಮಧ್ಯಾಹ್ನ ಜೀವಣಗಿ ಗ್ರಾಮಕ್ಕೆ ತಲುಪಿತು. ಯಾತ್ರೆಗೆ ಗ್ರಾಮದ ಮಹಿಳೆಯರು, ಮುಖಂಡರು ಆರತಿ ಬೆಳಗಿ, ಪೂಜೆ ಸಲ್ಲಿಸಿ ಸ್ವಾಗತಿಸಿದರು. ತದನಂತರ ಗ್ರಾಮದಲ್ಲಿ ಮೆರವಣಿಗೆ ನಡೆಯಿತು.
ಮಧ್ಯಾಹ್ನ 2 ಗಂಟೆಗೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳೊಂದಿಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಹಾಗೂ ನೈತಿಕ ಮೌಲ್ಯಗಳ ಕುರಿತು ಸಂವಾದ ನಡೆಯಿತು. ವಿದ್ಯಾರ್ಥಿಗಳಿಗೆ ಬಸವಣ್ಣನವರ ‘ವಚನ ಸುಧೆ’ ಎಂಬ ಕಿರುಹೊತ್ತಿಗೆ ಉಚಿತವಾಗಿ ವಿತರಿಸಲಾಯಿತು.

ಕಲ್ಯಾಣ ನಡಿಗೆಯ ನೇತೃತ್ವದ ವಹಿಸಿರುವ ಬಸವಕುಮಾರ್ ಪಾಟೀಲ್ ಅವರು ಮಾತನಾಡಿ, ‘ವಿದ್ಯಾರ್ಥಿಗಳೇ ನಾಳಿನ ಪ್ರಬುದ್ಧ ನಾಗರಿಕರು. ವಿದ್ಯಾರ್ಥಿಗಳು ದೇಶಭಕ್ತಿ, ಸಂಸ್ಕಾರ, ಸಂಸ್ಕೃತಿ ಹಾಗೂ ಉನ್ನತ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪರೀಕ್ಷೆಯನ್ನು ಯಾವುದೇ ಭಯವಿಲ್ಲದೆ ಆತ್ಮವಿಶ್ವಾದಿಂದ ಎದುರಿಸಬೇಕುʼ ಎಂದು ಸಲಹೆ ನೀಡಿದರು.
ಸಂಜೆ 6ಕ್ಕೆ ‘ದುರ್ಗುಣ–ದುಶ್ಚಟಗಳ ಭಿಕ್ಷೆ, ಸದ್ಗುಣ–ಸನ್ನಡತೆಯ ದೀಕ್ಷೆ’ ಎಂಬ ಸಂಕಲ್ಪದೊಂದಿಗೆ ಸಾರ್ವಜನಿಕ ಉಪನ್ಯಾಸ ನಡೆಯಿತು. ರಾತ್ರಿ 8ಕ್ಕೆ ಬಳ್ಳಾರಿಯ ಧಾತ್ರಿ ರಂಗಸಂಸ್ಥೆಯ ಕಲಾ ತಂಡದಿಂದ ಪ್ರದರ್ಶನಗೊಂಡ ‘ಕಲ್ಯಾಣ ಕ್ರಾಂತಿ’ ನಾಟಕ ಮೈನವಿರೇಳಿಸಿತು.

ಫೆ.24ರಂದು 10ನೇ ದಿನದ ಕಲ್ಯಾಣ ನಡಿಗೆಯು ಮಂಗಳವಾರ ಮಧ್ಯಾಹ್ನ ಕಮಲಾಪುರ ಪಟ್ಟಣಕ್ಕೆ ತಲುಪಿದೆ. ಫೆ.25ಕ್ಕೆ ಬಸವಕಲ್ಯಾಣ ತಾಲೂಕಿನ ಕಲಕೋರಾ, ಫೆ.26ಕ್ಕೆ ಮುಡಬಿ, ಫೆ.27ರಂದು ಯರಂಡಗಿ, ಫೆ.28 ಬಸವಕಲ್ಯಾಂಣ ಹಾಗೂ ಮಾ.1ರಂದು ಬಸವಕಲ್ಯಾಣದಲ್ಲಿ ಸಮಾರೋಪ ನಡೆಯಲಿದೆ.
ಇದನ್ನೂ ಓದಿ : ಔರಾದ್ | ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಮನೆ-ಮನೆಗೆ ಭೇಟಿ ನೀಡಿದ ಗ್ರಾ.ಪಂ.ಅಧಿಕಾರಿಗಳು
ಪಾದಯಾತ್ರೆಯಲ್ಲಿ ಪ್ರಮುಖರಾದ ಪಂಡರಿ ಬಾಳೂರೆ, ನಾಗಯ್ಯ ಸ್ವಾಮಿ ಮುಧೋಳ, ಶಂಕರಲಿಂಗ ಸ್ವಾಮೀಜಿ, ಮಂಜುನಾಥ ರೆಡ್ಡಿ, ವೀರಣ್ಣ ಕೊರಲಳ್ಳಿ, ಮನೋಜಕುಮಾರ್ ಬುಕ್ಕಾ, ರೇವಣಸಿದ್ದಪ್ಪ ಭಂಕೂರ, ರಾಮಶೆಟ್ಟಿ ಹಂಗನಳ್ಳಿ, ಕಲ್ಯಾಣರಾವ ಬೆನಕನಳ್ಳಿ, ಸತ್ಯಕ್ಕ ಬೆಂಗಳೂರು, ಜ್ಯೋತಿ ಸದಾನಂದ, ಮಲ್ಲಮ್ಮ ಆರ್.ಪಾಟೀಲ್, ಓಂಪ್ರಕಾಶ್ ರೊಟ್ಟೆ, ಸುನೀತಾ ಚಂದ್ರಶೇಖರ್ ಭದ್ರಾವತಿ, ಸಂತೋಷ ಕೆ.ಉಜಳಂಬೆ, ಕೆ.ಬಾಳಪ್ಪ ಶಿವಮೊಗ್ಗ, ಮಲ್ಲಿನಾಥ ಪಾಟೀಲ್, ಸೋಮಶೇಖರ ಮಾಲಿಪಾಟೀಲ, ಶರಣು ಜೀವಣಗಿ, ರಾಜಕುಮಾರ ಕೋಟಿ, ವೀರೇಶ ಮಾಲಿಪಾಟೀಲ, ಸುಭಾಷ ಬಿರಾದರ್ ಸೇರಿದಂತೆ ಜೀವಣಗಿ ಗ್ರಾಮಸ್ಥರು ಪಾಲ್ಗೊಂಡಿದ್ದರು.





