ಸೇಡಂ ತಾಲೂಕಿನ ಭೊಂದೇಮಪಲ್ಲಿ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಸ್ಥಾಪನೆ ವಿಚಾರದಲ್ಲಿ ಹೊಸ ವಿವಾದ ಉಂಟಾಗಿದ್ದು, ಗ್ರಾಮದಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಮೂರ್ತಿ ಸ್ಥಾಪನೆಗೆ ಅಡ್ಡಿಪಡಿಸುತ್ತಿದ್ದಾರೆ. ಎಂದು ಬಹುಜನ ಸಮಾಜ ಪಕ್ಷದ ಮುಖಂಡ ರೇವಣಸಿದ್ದಪ್ಪ ಎಸ್ ಸಿಂಧೆ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿ ಅವರು ‘ಕೆಲವು ದಿನಗಳ ಹಿಂದೆ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತ್ ಪಿಡಿಒ ಅವರ ಸಮ್ಮುಖದಲ್ಲಿ ಅಂಬೇಡ್ಕರ್ ಮೂರ್ತಿ ಸ್ಥಾಪನೆಗೆ ಸಂಬಂಧಿಸಿದಂತೆ ಜಿಪಿಎಸ್ ಫೋಟೋ ತೆಗೆದು ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ಆದರೆ ಈಗ ಮೂರ್ತಿ ಸ್ಥಾಪನೆ ಮಾಡಿದರೆ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ ಎಂಬ ಕಾರಣ ನೀಡಿ ಕೆಲವು ವ್ಯಕ್ತಿಗಳು ಅಧಿಕಾರಿಗಳಿಗೆ ಹಾಗೂ ಸೇಡಂ ಶಾಸಕರಿಗೆ ಮನವಿ ಸಲ್ಲಿಸಿ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೇಡಂ ಶಾಸಕರು ರಸ್ತೆ ಮಧ್ಯದಲ್ಲಿ ಇರುವ ಅಂಬೇಡ್ಕರ್ ಮೂರ್ತಿ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಮುಂದುವರಿಸಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರೆಂದು ಗ್ರಾಮಸ್ಥರು ತಿಳಿಸಿದ್ದಾರೆ’ ಎಂದು ಅವರು ಹೇಳಿದರು.

‘ಈ ವಿಷಯ ತಿಳಿದು ಬಹುಜನ ಸಮಾಜ ಪಕ್ಷದ ಸೇಡಂ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು ಭೊಂದೇಮಪಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, “ಸೇಡಂ ತಾಲೂಕಿನ ಮೇದಕ್, ಕೋನಪೂರ್, ದುಗ್ಗನೂರು, ಸುಲೇಪೇಟೆ ಸೇರಿದಂತೆ ಹಲವೆಡೆ ರಸ್ತೆ ಮಧ್ಯದಲ್ಲೇ ವಿವಿಧ ಮೂರ್ತಿಗಳು ಇದ್ದರೂ ಅವುಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿಲ್ಲ. ಆದರೆ ಭೊಂದೇಮಪಲ್ಲಿ ಗ್ರಾಮದ ಅಂಬೇಡ್ಕರ್ ಮೂರ್ತಿ ಮಾತ್ರ ಶಾಸಕರ ಕಣ್ಣಿಗೆ ಕಾಣುತ್ತಿರುವುದು ಏಕೆ?” ಎಂದು ಪ್ರಶ್ನಿಸಿದರು.
‘ನಿಜವಾಗಿಯೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಗೌರವ ಇದ್ದರೆ ಸ್ಥಗಿತಗೊಂಡಿರುವ ಮೂರ್ತಿ ಕಾಮಗಾರಿಯನ್ನು ಕೂಡಲೇ ಪುನರಾರಂಭ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸೇಡಂ ತಾಲೂಕಿನ ದಲಿತ ಸಮುದಾಯದವರು ಭೊಂದೇಮಪಲ್ಲಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಹೋರಾಟ ಆರಂಭಿಸಲಾಗುತ್ತದೆ,’ ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಮಹಿಳೆಯರ ಮತ್ತು ಮಕ್ಕಳ ಸಮಸ್ಯೆಗಳ ಪರಿಹಾರಕ್ಕೆ ಬಲಿಷ್ಠ ಮಹಿಳಾ ಆಂದೋಲನ ಅಗತ್ಯ: ಗುಂಡಮ್ಮ ಮಡಿವಾಳ್
ಈ ಸಂದರ್ಭದಲ್ಲಿ ಭೀಮ ಮುಧೋಳ, ವಿಶ್ವನಾಥ ಉಡಗಿ, ಜಗನ್ನಾಥ ಇಮಾಡಪೂರ್, ಲಾಲಪ್ಪ, ವೆಂಕಟಪ್ಪ, ನರಸಿಂಹ ಸೇರಿದಂತೆ ಹಲವರು ಉಪಸ್ಥಿತರಿದ್ದರು.





