“ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕೇವಲ ಮತದಾರರ ಪಟ್ಟಿಯ ನವೀಕರಣ ಕ್ರಮವಲ್ಲ; ಇದು ಪ್ರಜಾಸತ್ತಾತ್ಮಕ ಹಾಗೂ ನಾಗರಿಕ ಹಕ್ಕುಗಳ ಹತ್ಯೆ,” ಎಂದು ಪ್ರಗತಿಪರ ಚಿಂತಕ ಶಿವಸುಂದರ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತು ಸುವರ್ಣ ಸಭಾ ಭವನದಲ್ಲಿ ಸಂವಿಧಾನ ರಕ್ಷಣಾ ಸಮಿತಿ ಕಲಬುರಗಿ ಹಾಗೂ ಎದ್ದೇಳು ಕರ್ನಾಟಕ ಅವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್): ಪರಿಣಾಮ ಮತ್ತು ಸವಾಲುಗಳು’ ವಿಷಯದ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಎಸ್ಐಆರ್ ಕ್ರಮವು ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆ ಎಂಬ ಹೆಸರಿನಲ್ಲಿ ನಡೆಯುತ್ತಿದ್ದರೂ, ಅದು ನಾಗರಿಕರ ಹಕ್ಕುಗಳನ್ನು ಪ್ರಶ್ನಿಸುವ ಮಟ್ಟಕ್ಕೆ ಹೋಗಿದೆ ಎಂದು ಆರೋಪಿಸಿದರು. ‘ನಮ್ಮನ್ನು ಬೌದ್ಧಿಕವಾಗಿ ಎದುರಿಸಲಾಗದೆ ನಾಗರಿಕವಾಗಿ ಸಾಯಿಸುವ ಹುನ್ನಾರ ನಡೆಯುತ್ತಿದೆ. ನಮ್ಮನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಬದುಕುವಂತೆ ಮಾಡುವ ಸಂಚು ರೂಪುಗೊಂಡಿದೆ,’ ಎಂದು ಅವರು ಹೇಳಿದರು.

‘ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನಿಕ ಸಂಸ್ಥೆಗಳನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಎಸ್ಐಆರ್ ಪ್ರಕ್ರಿಯೆ ಮತದಾರರ ಪಟ್ಟಿಯನ್ನು ನವೀಕರಿಸುವುದಕ್ಕಿಂತ ಹೆಚ್ಚಾಗಿ ನಾಗರಿಕತ್ವವನ್ನು ಪ್ರಶ್ನಿಸುವ ಕ್ರಮವಾಗಿ ಪರಿಣಮಿಸಿದೆ’ ಎಂದು ಅಭಿಪ್ರಾಯಪಟ್ಟರು.
‘ಸಾಮಾನ್ಯ ಪರಿಷ್ಕರಣೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಮೃತರು, ಸ್ಥಳಾಂತರಗೊಂಡವರು ಹಾಗೂ ಹೊಸ ಮತದಾರರ ಅರ್ಹತೆ ಪರಿಶೀಲಿಸುತ್ತಾರೆ. ಆದರೆ ಎಸ್ಐಆರ್ನಲ್ಲಿ ‘ನೀವು ಭಾರತೀಯ ನಾಗರಿಕರೇ?’ ಎಂಬ ಪ್ರಶ್ನೆ ಕೇಳಲಾಗುತ್ತಿದೆ. ಅಗತ್ಯ ದಾಖಲೆಗಳ ಕೊರತೆಯಿಂದ ಅನೇಕ ಬಡವರು ಮತ್ತು ಅಂಚಿನ ಸಮುದಾಯದವರು ಮತಹಕ್ಕು ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಧಕ್ಕೆಯಾಗಿದೆ,’ ಎಂದು ಹೇಳಿದರು.
‘ಇತರೆ ರಾಜ್ಯಗಳ ಅಂಕಿಅಂಶಗಳನ್ನು ಉಲ್ಲೇಖಿಸಿದ ಅವರು, ಬಿಹಾರದಲ್ಲಿ 65 ಲಕ್ಷ, ತಮಿಳುನಾಡಿನಲ್ಲಿ 74 ಲಕ್ಷ ಹಾಗೂ ಉತ್ತರ ಪ್ರದೇಶದಲ್ಲಿ ಸುಮಾರು ಮೂರು ಕೋಟಿ ಮತದಾರರನ್ನು ಹೊರಗಿಡಲಾಗಿದೆ ಎಂದು ಹೇಳಿದರು. ಒಟ್ಟು 31 ರಾಜ್ಯಗಳಲ್ಲಿ 15ರಿಂದ 20 ಕೋಟಿ ಜನರನ್ನು ಎಸ್ಐಆರ್ ಮೂಲಕ ಹೊರಗಿಡಲಾಗಿದೆ’ ಎಂದು ಅವರು ಆರೋಪಿಸಿದರು.
‘ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಘನತೆಯಿಂದ ಬದುಕುವ ಹಕ್ಕು ನೀಡಿದೆ. ಆದರೆ ಆ ಹಕ್ಕನ್ನೇ ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಎಸ್ಐಆರ್ ಕ್ರಮವು ದೇಶದ ವಂಚಿತ, ಅನಾಕ್ಷರಸ್ಥ ಹಾಗೂ ಅಂಚಿನ ಸಮುದಾಯಗಳಾದ ಮುಸ್ಲಿಮರು, ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಬಡವರ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿರುವ “ಮಹಾಯುದ್ಧ” ಎಂದು ಹೇಳಿದರು.
‘ಇದರಲ್ಲಿ ರಕ್ತ ಸುರಿಯದೇ ಇರಬಹುದು; ಆದರೆ ನಾಗರಿಕರ ಹಕ್ಕುಗಳು ಕುಸಿಯುವ ಅಪಾಯ ಹೆಚ್ಚಿದೆ. ಆದ್ದರಿಂದ ಎಸ್ಐಆರ್ ವಿರುದ್ಧ ಬೃಹತ್ ಹೋರಾಟ ಕಟ್ಟಬೇಕು. ಅದಕ್ಕೆ ಸಾಧ್ಯತೆ ನಮ್ಮಲ್ಲಿದೆ,’ ಎಂದು ಹೇಳಿದರು.

ಹಿಂದಿನ ಎನ್ಆರ್ಸಿ ಹಾಗೂ ಇತರ ವಿವಾದಾತ್ಮಕ ಕಾಯ್ದೆಗಳ ವಿರುದ್ಧ ದೇಶದಾದ್ಯಂತ ನಡೆದ ಹೋರಾಟಗಳನ್ನು ಉಲ್ಲೇಖಿಸಿದ ಅವರು, ‘ದೆಹಲಿಯಲ್ಲಿ 375 ದಿನಗಳ ಕಾಲ ಲಕ್ಷಾಂತರ ಜನರು ತೀವ್ರ ಚಳಿ, ಮಳೆ ಹಾಗೂ ಕೋವಿಡ್ ಸಂಕಷ್ಟದ ನಡುವೆಯೂ ಹೋರಾಟ ನಡೆಸಿದರು. ನೂರಾರು ಜನರು ಪ್ರಾಣ ಕಳೆದುಕೊಂಡರೂ ಹೋರಾಟ ನಿಲ್ಲಿಸಲಿಲ್ಲ. ಒಗ್ಗಟ್ಟಿನಿಂದ ನಿಂತರೆ ಮಾತ್ರ ಇಂತಹ ಹೋರಾಟ ಸಾಧ್ಯ,’ ಎಂದು ಅಭಿಪ್ರಾಯಪಟ್ಟರು.
‘ಶಾಂತಿಯ ಸಮಯದಲ್ಲಿ ಹೆಚ್ಚು ಬೆವರು ಸುರಿಸಿದರೆ, ಯುದ್ಧದ ಸಮಯದಲ್ಲಿ ಕಡಿಮೆ ರಕ್ತ ಸುರಿಯಬೇಕಾಗುತ್ತದೆ. ಈಗ ಶಾಂತಿಯ ಸಮಯ. ಪ್ರತಿ ಮನೆ, ಗಲಿ, ಶಾಲೆ-ಕಾಲೇಜುಗಳಲ್ಲಿ ಎಸ್ಐಆರ್ ಕುರಿತು ಜಾಗೃತಿ ಅಭಿಯಾನಗಳು ನಡೆಯಬೇಕು. ಎಸ್ಐಆರ್ ರದ್ದಾಗಬೇಕು; ಇಲ್ಲವಾದರೆ ಅದು ದೇಶದ ಪ್ರಜಾತಂತ್ರವನ್ನೇ ರದ್ದು ಮಾಡುವ ಅಪಾಯ ಇದೆ,’ ಎಂದು ಎಚ್ಚರಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | “ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದು”: ಶರಣಪ್ಪ ಸಲಾದಪುರ್
ಕಾರ್ಯಕ್ರಮದ ಸಮನ್ವಯಕರಾದ ಹಣಮಂತ ಭೋದನಕರ್ ಮಾತನಾಡಿ, ಎಸ್ಐಆರ್ ಕುರಿತ ಆತಂಕಗಳು ಜನರಲ್ಲಿ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದರು. ಗೋಷ್ಠಿಯ ಅಧ್ಯಕ್ಷತೆಯನ್ನು ಟಿ.ಟಿ. ಭೀಮರಾವ್ ವಹಿಸಿಕೊಂಡಿದ್ದು, ‘ಸಂವಿಧಾನ ಜಾರಿಯಾದ ಬಳಿಕ ದೇಶದಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸಿದ್ದರೂ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ’ ಎಂದು ಅಭಿಪ್ರಾಯಪಟ್ಟರು.
ಸುನೀಲ್ ಮಾಲ್ಪಡೆ ಸ್ವಾಗತಿಸಿ ವಂದಿಸಿದರು. ಮುಬ್ಬಿನ್ ಅಹ್ಮದ್, ರೇಣುಕಾ ಸಿಂಗೆ, ಲಕ್ಷ್ಮಣ ಮಂಡಲಗೇರ, ರಾಜೇಂದ್ರ ರಾಜವಾಳ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಹೋರಾಟಗಾರರು ಗೋಷ್ಠಿಯಲ್ಲಿ ಭಾಗವಹಿಸಿದ್ದರು.





