‘ಸ್ಲಂ ಜನಾಂದೋಲನ ಕರ್ನಾಟಕದ 16ನೇ ಸಂಸ್ಥಾಪನಾ ದಿನದ ಅಂಗವಾಗಿ “ಕಾರ್ಪೋರೇಟ್ ಜಾತಿವಾದಿ ನವ-ನಗರಗಳಲ್ಲಿ ಸಾಮಾಜಿಕ ನ್ಯಾಯ ಮತ್ತು ಸ್ಲಂ ಜನರ ಸವಾಲು” ವಿಷಯದ ರಾಜ್ಯ ಸಮಾವೇಶವನ್ನು ಜನವರಿ 6, 2026ರಂದು ಕಲಬುರಗಿಯ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ರಾಜ್ಯ ಸಂಚಾಲಕ ಎ ನರಸಿಂಹಮೂರ್ತಿ’ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಸ್ಲಂ ನಿವಾಸಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಪ್ರಗತಿಪರ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸುದ್ದಿಗೋಷ್ಠಿಯ ಮೂಲಕ ಕರೆ ನೀಡಿದೆ.
ಮುಂದುವರೆದು ಮಾತನಾಡಿದ ಅವರು ‘ದೇಶ ಹಾಗೂ ರಾಜ್ಯಗಳಲ್ಲಿ ಜಾರಿಯಾಗುತ್ತಿರುವ ಕಾರ್ಪೋರೇಟ್ ಆಧಾರಿತ ಅಭಿವೃದ್ಧಿ ಮಾದರಿಗಳು ಬಡ–ಶ್ರೀಮಂತರ ನಡುವಿನ ಅಂತರವನ್ನು ಹೆಚ್ಚಿಸುತ್ತಿದ್ದು, ಜಾತಿ ಹಾಗೂ ಧರ್ಮ ಆಧಾರಿತ ಅಸಮಾನತೆಗಳನ್ನು ತೀವ್ರಗೊಳಿಸುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ನಗರೀಕರಣ ಹಾಗೂ ಕಾರ್ಪೋರೇಟಿಕರಣದ ನೀತಿಗಳ ಪರಿಣಾಮ ಜನರು ಪ್ರಜೆಗಳಾಗಿ ಅಲ್ಲದೆ ಗ್ರಾಹಕರಾಗಿ ಪರಿವರ್ತಿತರಾಗಿದ್ದಾರೆ. ಇದರಿಂದ ಸಂವಿಧಾನದ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಮಾಪಾಲು ಮೌಲ್ಯಗಳು ಹೀನಾಯ ಸ್ಥಿತಿಗೆ ತಲುಪಿವೆ. 2030ರ ಅಪಾಯವನ್ನು ತಪ್ಪಿಸಲು ಕಾರ್ಪೋರೇಟ್ ಜಾತಿವಾದಿ ನವ-ನಗರಗಳ ಅಭಿವೃದ್ಧಿಗೆ ವಿರೋಧವಾಗಿ ನಗರ ವಂಚಿತ ಸಮುದಾಯಗಳು ಸಂಘಟಿತರಾಗಿ ನಗರಗಳ ಮೇಲೆ ಹಕ್ಕು ಸ್ಥಾಪಿಸಬೇಕಾಗಿದೆ’ ಎಂದು ಅವರು ಹೇಳಿದರು.

‘ನವ ಭಾರತ–ನವ ಕರ್ನಾಟಕ ವಿಜನ್ 2030’ ಹೆಸರಿನಲ್ಲಿ ಸರ್ಕಾರಗಳು ತಮ್ಮ ಜವಾಬ್ದಾರಿಗಳನ್ನು ಖಾಸಗಿ ವಲಯಕ್ಕೆ ಒಪ್ಪಿಸುತ್ತಿದ್ದು, ಇದರ ಪರಿಣಾಮವಾಗಿ ಬಡಜನರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಿದೆ. ಶಿಕ್ಷಣ, ಆರೋಗ್ಯ, ವಸತಿ, ಭೂಮಿ ಮತ್ತು ಸಾಮಾಜಿಕ ಭದ್ರತೆಗಾಗಿ ಹೋರಾಟ ಕಟ್ಟಿದಾಗ ಮಾತ್ರ ಸ್ಲಂ ಜನರು ಘನತೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವೆಂದು’ ಅಭಿಪ್ರಾಯಪಟ್ಟರು.
ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಬೆಲೆ ಏರಿಕೆ, ನಿರುದ್ಯೋಗ, ದ್ವೇಷ ರಾಜಕಾರಣ ಹೆಚ್ಚಾಗಿದ್ದು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಹಾಗೂ ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಅಸಮಾನತೆಯನ್ನು ಗಟ್ಟಿಗೊಳಿಸುತ್ತಿವೆ. ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೋರೇಟ್ ಲಾಭಕ್ಕೆ ಅನುಕೂಲವಾಗುವ ನೀತಿಗಳು ಯುವಜನರ ಕನಸುಗಳನ್ನು ಭಗ್ನಗೊಳಿಸುತ್ತಿವೆ’ ಎಂದು ಅವರು ಟೀಕಿಸಿದರು.
‘ಸ್ಲಂ ನಿವಾಸಿಗಳನ್ನು ಅಕ್ರಮ ವಲಸಿಗರಂತೆ ನೋಡುವ ಮನೋಭಾವ ಬದಲಾಗಬೇಕು. ನಗರ ಭೂಮಿಯಲ್ಲಿ ಸ್ಲಂ ಜನರಿಗೆ ಪಾಲು ನೀಡಬೇಕು. ಪ್ರತಿ ಕುಟುಂಬಕ್ಕೆ ಕನಿಷ್ಠ 30×40 ಅಳತೆಯ ನಿವೇಶನ, ರಾಷ್ಟ್ರಮಟ್ಟದ ನಗರ ಲ್ಯಾಂಡ್ ಬ್ಯಾಂಕ್ ನೀತಿ ಜಾರಿ, ವಸತಿ ಹಕ್ಕು ಕಾಯ್ದೆ, ಉಚಿತ ಆರೋಗ್ಯ, ಸಮಾನ ಶಿಕ್ಷಣ, ಆಹಾರ ಭದ್ರತೆ, ಉದ್ಯೋಗ ಖಾತ್ರಿ ಹಾಗೂ ಸಾಮಾಜಿಕ ಭದ್ರತಾ ಪಿಂಚಣಿ ಹೆಚ್ಚಳ ಸೇರಿದಂತೆ’ ಹಲವು ಬೇಡಿಕೆಗಳನ್ನು ಅವರು ಮುಂದಿಟ್ಟರು.
ಇದನ್ನು ಓದಿದ್ದೀರಾ? ಕಲಬುರಗಿ | ಯುವಕರಲ್ಲಿ ನಾಯಕತ್ವದ ಗುಣ ಬೆಳೆಸುವ ಕ್ರೀಡೆ ಕ್ರಿಕೆಟ್: ಮಿಲಿಂದ ಸಾಗರ
ಬಳಿಕ ಸುದ್ದಿ ಗೋಷ್ಠಿಯಲ್ಲಿ 6 ಜನವರಿ 2026ರಂದು ಎಸ್ ಎಂ ಪಂಡಿತ್ ರಂಗಮಂದಿರ ಕಲಬುರಗಿನಲ್ಲಿ ನಡೆಯಲ್ಲಿರು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಮಾವೇಶದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಜನಾರ್ಧನ ಹಳ್ಳಿಬೆಂಚಿ, ಜಿಲ್ಲಾಧ್ಯಕ್ಷೆ ಗೌರಮ್ಮ ಮಾಕಾ, ಕಾರ್ಯದರ್ಶಿ ಶರಣು ಕಣ್ಣಿ, ಸಂಚಾಲಕಿ ರೇಣುಕಾ ಸರಡಗಿ, ಶರಣು ಹಂಗರಗಿ, ಸುನೀತಾ ಎಂ. ಕೊಲ್ಲೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





