ವಿದ್ಯಾರ್ಥಿಗಳೇ ಸಮಾಜದ ಭವಿಷ್ಯವಾಗಿದ್ದು, ಶೈಕ್ಷಣಿಕ ಸಾಧನೆ ದೇಶಕ್ಕೆ ನೀಡುವ ಬಹುದೊಡ್ಡ ಕೊಡುಗೆ ಎಂದು ಡಾ. ಅನೀಲ್ ಟೆಂಗಳಿ ಹೇಳಿದರು.
ನಗರದ ಸೇಂಟ್ ಮೇರಿ ಪಿ.ಯು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 2025–26ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಿಯುಸಿ ಹಂತದಲ್ಲಿ ವಯಸ್ಸಿನ ಕಾರಣದಿಂದ ವಿಚಲಿತವಾಗುವುದು ಸಹಜವಾದರೂ, ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಗುರು ಆಧಾರಿತ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಗುರಿ ತ್ಯಾಗ ಮತ್ತು ಪರಿಶ್ರಮವನ್ನು ಬಯಸುತ್ತದೆ. ತಂದೆ-ತಾಯಿಗಳ ಕನಸು ನನಸು ಮಾಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಜೊತೆಗೆ ಸಮಾಜದ ಸುಧಾರಣೆ ಹಾಗೂ ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಹೆಚ್ಚು ಅಂಕ ಗಳಿಸುವುದಕ್ಕಿಂತಲೂ ಜೀವನದ ಮೌಲ್ಯಗಳು, ಸಾಮಾಜಿಕ ಮೌಲ್ಯಗಳು, ತಂದೆ-ತಾಯಿ, ಭೂಮಿ ಹಾಗೂ ದೇಶವನ್ನು ಪ್ರೀತಿಯಿಂದ ಕಾಣುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು. ವಿಷಯದ ಬಗ್ಗೆ ಆಳವಾದ ಜ್ಞಾನ ಮತ್ತು ಪಾಂಡಿತ್ಯ ಹೊಂದಿದಾಗ ಮಾತ್ರ ಸಾಧನೆ ಸಾಧ್ಯವಾಗುತ್ತದೆ. ಶೈಕ್ಷಣಿಕ ಸಾಧನೆ ದೇಶಕ್ಕೆ ನೀಡುವ ಮಹತ್ವದ ಕೊಡುಗೆ ಎಂದು ತಿಳಿಸಿದರು.

ಪ್ರೋ. ಸಂಜಯ್ ಮ್ಯಾಕಲ್ ಮಾತನಾಡಿ, ದೇಶದಲ್ಲಿ ಇಂಜಿನಿಯರ್ಗಳು, ವೈದ್ಯರು ಹಾಗೂ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ನಿರುದ್ಯೋಗದ ಪ್ರತಿಯೊಬ್ಬರಲ್ಲೂ ಯಾವುದಾದರೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಅದೇ ದಾರಿಯಲ್ಲಿ ಸಾಗಿದರೆ ಗುರಿ ತಲುಪಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳನ್ನು ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಿ ಪ್ರತಿಭೆಗಳನ್ನು ಬೆಳೆಸುತ್ತಿರುವ ಸೇಂಟ್ ಮೇರಿ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಈ ವೇಳೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಲೇಜು, ಶಿಕ್ಷಕರು ಹಾಗೂ ತಮ್ಮ ಅನುಭವಗಳ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು.
ಫಾದರ್ ಸಂತೋಷ ಬಾಪು ಮಾತನಾಡಿ, ಜೀವನದಲ್ಲಿ ಶಿಸ್ತು ಅತ್ಯಂತ ಮುಖ್ಯ. ಶಿಸ್ತನ್ನು ಅಳವಡಿಸಿಕೊಂಡು ತಮ್ಮ ಪ್ರತಿಭೆಯನ್ನು ಗುರುತಿಸಿ ಅದರ ಅನುಸಾರವಾಗಿ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಬೈಕ್ ಅಪಘಾತ : ಗಾಯಗೊಂಡ ಅಧ್ಯಾಪಕ ಸಾವು
ಫಾದರ್ ಆರನ್ ವಾಸ್, ರೋಸ್ ಆನ್ ಹಾಗೂ ಫಾದರ್ ಪ್ರವೀಣ್ ಜೋಸೆಫ್ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





