ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಜೊತೆ ಭಾರತೀಯ ಸಂಸ್ಕಾರಗಳನ್ನು ಬೆಳೆಸುವುದೇ ನಮ್ಮ ಸಂಸ್ಥೆಯ ಮುಖ್ಯ ಗುರಿಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ವಿನಯ್ ಶುಕ್ಲಾ ಹೇಳಿದರು.
ನಗರದ ಶಹಬಜಾರ್ ನಾಕಾದಲ್ಲಿರುವ ಶುಕ್ಲಾ ಇಂಗ್ಲಿಷ್ ಮೀಡಿಯಂ ಶಾಲೆಯ ಒಂಬತ್ತನೇ ವರ್ಷದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ʼಜಾತಿ-ಭೇದ ಮರೆತು ಪ್ರತಿಯೊಬ್ಬ ಮಗು ವಿಶ್ವಮಾನವನಾಗಿ ಬೆಳೆಯಬೇಕು. ಪಾಲಕರು ಮಕ್ಕಳಲ್ಲಿನ ಬದಲಾವಣೆಗಳ ಬಗ್ಗೆ ಗಮನ ಹರಿಸಬೇಕು. ಶಿಕ್ಷಕರು ಮತ್ತು ಪಾಲಕರು ಒಟ್ಟಾಗಿ ಯೋಜನೆ ರೂಪಿಸಿದರೆ ಮಕ್ಕಳ ಉತ್ತಮ ಬೆಳವಣಿಗೆ ಸಾಧ್ಯವಾಗುತ್ತದೆʼ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ವರ್ಷಾ ಶುಕ್ಲಾ ಮಾತನಾಡಿ, ʼಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅವರಿಗೆ ವೇದಿಕೆ ಒದಗಿಸಬೇಕು. ಇಂದಿನ ಮಕ್ಕಳು ಮುಂದಿನ ಸಮಾಜದ ಉತ್ತಮ ನಾಗರಿಕರಾಗಿ ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕುʼ ಎಂದು ತಿಳಿಸಿದರು.
ರಜಪೂತ ಸಮಾಜದ ಜಿಲ್ಲಾಧ್ಯಕ್ಷ ಸಂಜಯ್ ಸಿಂಗ್ ಮಾತನಾಡಿ, ʼಇಂದಿನ ಮಕ್ಕಳಲ್ಲಿ ಮೊಬೈಲ್ ವ್ಯಾಮೋಹ ಹೆಚ್ಚುತ್ತಿರುವುದು ಓದಿನ ಮೇಲೆ ಪರಿಣಾಮ ಬೀರುತ್ತಿದೆ. ಪಾಲಕರು ಮಕ್ಕಳ ಮೊಬೈಲ್ ಬಳಕೆಯ ಮೇಲೆ ನಿಯಂತ್ರಣ ವಹಿಸಬೇಕುʼ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿಕೊಟ್ಟರು. ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಸತ್ಕರಿಸಲಾಯಿತು.
ಇದನ್ನೂ ಓದಿ : ಬೀದರ್ | ಕಾರಂಜಾ ಕಾಲುವೆಗೆ ಬಿದ್ದು ತಂದೆ–ಮಗ ಸಾವು
ಕಾರ್ಯಕ್ರಮದಲ್ಲಿ ಪ್ರಮುಖರಾದ ಪ್ರಮೋದ್ ತಿವಾರಿ, ರಾಜೇಶ್ ಪಾಂಡೆ, ಮುಖ್ಯಗುರು ವಸಂತರಾವ ಹಾಗೂ ಶಾಲೆಯ ಸಿಬ್ಬಂದಿಗಳಾದ ಸ್ವರೂಪ ರಾಣಿ, ಕವಿತಾ ಘನಾತೆ, ಅಶ್ವಿನಿ, ಸಂಗೀತಾ, ಶಿವಾನಿ, ಪೂಜಾ ಪಾಟೀಲ್, ಸ್ನೇಹ, ಸುಷ್ಮಾ, ಭಾಗ್ಯಶ್ರೀ, ಸೌಮ್ಯ, ಗಿರಿಜಾ, ಶೀತಲ್, ಶೀಲಾ ಸೇರಿದಂತೆ ಸಾವಿರಾರು ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.





