ಕರ್ನಾಟಕ ಪ್ರತಿಭಾ ಅಕಾಡೆಮಿ ಕಲಬುರಗಿ ಘಟಕದ ವತಿಯಿಂದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬುಧವಾರ ನಗರದ ಬಸವ ಮಂಟಪದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ತೃಪ್ತಿ ಎಸ್. ಲಾಖೆ ಅವರು ಮಾತನಾಡಿ, ‘ಧೈರ್ಯದಿಂದ ಮುಂದುವರಿದರೆ ಎಲ್ಲವೂ ಸಾಧ್ಯ. ಸೋಲನ್ನು ಎಂದಿಗೂ ಒಪ್ಪಿಕೊಳ್ಳಬಾರದು” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಉತ್ತಮ ವಿದ್ಯಾಭ್ಯಾಸದಿಂದ ಜೀವನದಲ್ಲಿ ಉನ್ನತ ಸ್ಥಾನಮಾನ ಗಳಿಸಲು ಸಾಧ್ಯವಾಗುತ್ತದೆ. ಘನತೆ ಹಾಗೂ ಗೌರವದ ಬದುಕು ಕಟ್ಟಿಕೊಳ್ಳಲು ಶಿಕ್ಷಣವೇ ಪ್ರಮುಖ ಸಾಧನ’ ಎಂದು ತಿಳಿಸಿದರು.
ಇದೆ ವೇಳೆ ಹುಲಿಗೆಪ್ಪ ಕನಕಗಿರಿ ಅವರು ಮಾತನಾಡಿ, ‘ಓದಿನ ಜೊತೆಗೆ ನಮ್ಮ ಆಚಾರ-ವಿಚಾರ ಮತ್ತು ಸಂಸ್ಕೃತಿಗಳನ್ನು ಉಳಿಸುವ ಜವಾಬ್ದಾರಿ ನಮ್ಮದಾಗಬೇಕು ಎಂದರು. 371(ಜೆ) ಕಲಂ ಜಾರಿಯಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉನ್ನತ ಹುದ್ದೆಗಳನ್ನು ಸಾಧಿಸಬೇಕು’ ಎಂದು ಸಲಹೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ಡಾ. ಶಿವರಂಜನ್ ಸತ್ಯಂಪೇಟ್ ಅವರು, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಅತ್ಯಂತ ಅಗತ್ಯ ಎಂದು ಹೇಳಿದರು. ‘ಶಿಕ್ಷಣವೇ ನಮ್ಮ ನಿಜವಾದ ಸಂಪತ್ತು. ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರು ಓದು ಮತ್ತು ಚಿಂತನೆಯ ಮೂಲಕ ಸಮಾಜದಲ್ಲಿ ಕ್ರಾಂತಿಕಾರಿ ವಿಚಾರಗಳನ್ನು ಬಿತ್ತಿದರು. ತಲೆ ತಗ್ಗಿಸಿ ಪುಸ್ತಕ ಓದಿದರೆ, ಅದು ತಲೆ ಎತ್ತಿ ಬದುಕುವ ಶಕ್ತಿಯನ್ನು ನೀಡುತ್ತದೆ’ ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವದ ಅತ್ಯಂತ ಪ್ರತಿಭಾವಂತ ಚಿಂತಕರಲ್ಲಿ ಪ್ರಮುಖರಾಗಿದ್ದು, ಅವರನ್ನು ಇಡೀ ಜಗತ್ತು ವಿಶ್ವಜ್ಞಾನಿ ಎಂದು ಕರೆಯುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಕಲಬುರಗಿ ಮಹಾನಗರ ಪಾಲಿಕೆ ವಲಯ ಕಚೇರಿ–1ರ ಆಯುಕ್ತ ಗೌತಮ ಕಾಂಬಳೆ, ವಸತಿ ನಿಲಯ ಮೇಲ್ವಿಚಾರಕರ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಧರ ಕಾಂಬಳೆ ಹಾಗೂ ಹಿರಿಯ ವಕೀಲ ಸೈಯಾದ್ ಮಜರ್ ಹುಸೇನ್ ಮಾತನಾಡಿದರು. ಈ ವೇಳೆ ರೇಣುಕಾ ಸರಡಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಮಾಣಪತ್ರ ಹಾಗೂ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.
ಇದನ್ನು ಓದಿದ್ದೀರಾ? ಯಾದಗಿರಿ | ಮರ್ಯಾದೆ ಹತ್ಯೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ದಸಂಸ ಪ್ರತಿಭಟನೆ
ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ನಾಗೇಂದ್ರ ಕೆ. ಜವಳಿ ಅಧ್ಯಕ್ಷತೆ ವಹಿಸಿದ್ದರು. ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ಸುನಿಲ್ ಮಾನಪಡೆ ಪ್ರಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರವಣಕುಮಾರ ಮೋಸಲಗಿ, ಮೈಲಾರಿ ದೊಡ್ಡಮನಿ, ಮಂಜುನಾಥ ಗಂಗಕರ್, ಮಲ್ಲಿಕಾರ್ಜುನ ಬೋಳಣಿ, ಕಾಶಿನಾಥ ಸಿಂಧೆ, ಭಗವಂತ ಆರ್. ವಗ್ಗೆ, ಆಕಾಶ ನಂದಾ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





