ಅಲೆಮಾರಿಗಳಾಗಿ ಜೀವನ ನಡೆಸುತ್ತಿದ್ದ ಬಂಜಾರ ಸಮುದಾಯಕ್ಕೆ ಒಂದೇ ಸ್ಥಳದಲ್ಲಿ ನೆಲೆಸಿ ಸ್ವಾಭಿಮಾನದಿಂದ ದುಡಿದು ಬದುಕುವ ಮಾರ್ಗವನ್ನು ತೋರಿದ ಮಹಾನ್ ಸಮಾಜಗುರು ಸೇವಾಲಾಲ್ ಮಹಾರಾಜ್ ಅವರ ಕೊಡುಗೆ ಅಪಾರವಾಗಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಡಾ. ಮಹೇಶಕುಮಾರ ರಾಠೋಡ ಹೇಳಿದರು.
ಜೇವರ್ಗಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ರವಿವಾರ ಆಯೋಜಿಸಲಾದ ಸೇವಾಲಾಲ್ ಮಹಾರಾಜ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಬ್ರಿಟಿಷ್ ಸರ್ಕಾರದ ಕಾಲದಲ್ಲಿ ಬಂಜಾರ ಸಮುದಾಯವನ್ನು “ಅಪರಾಧಿಕ ಬುಡಕಟ್ಟು” ಎಂದು ಗುರುತಿಸಿ ಅಲೆಮಾರಿ ಬದುಕಿಗೆ ತಳ್ಳಲಾಗಿತ್ತು ಎಂದು ತಿಳಿಸಿದರು. ಸಮುದಾಯ ಅತಂತ್ರ ಸ್ಥಿತಿಯಲ್ಲಿ ಇದ್ದಾಗ, ಒಂದೇ ಸ್ಥಳದಲ್ಲಿ ನೆಲೆಸಿ ದುಡಿದು ಬದುಕುವ ಮಾರ್ಗವನ್ನು ತೋರಿದವರು ಸೇವಾಲಾಲ್ ಮಹಾರಾಜ್’ ಎಂದು ಅವರು ಹೇಳಿದರು.
“ರಾಬತೋ ಚಾಬೆನ್ ಮಳಚ್” (ದುಡಿದರೆ ಮಾತ್ರ ಉಣ್ಣಲು ಸಿಗುತ್ತದೆ) ಎಂಬ ಸಂದೇಶದ ಮೂಲಕ ಕಾಯಕದ ಮಹತ್ವವನ್ನು ಸಾರಿದ ಸೇವಾಲಾಲ್ ಮಹಾರಾಜ್ ಸಮಾಜದಲ್ಲಿ ಸ್ವಾಭಿಮಾನ ಹಾಗೂ ಸಂಘಟಿತ ಬದುಕಿನ ಅರಿವು ಮೂಡಿಸಿದರು ಎಂದು ರಾಠೋಡ ಅಭಿಪ್ರಾಯಪಟ್ಟರು. 18ನೇ ಶತಮಾನದಲ್ಲೇ ಸಮಾಜ ಪರಿವರ್ತನೆಯ ದಿಕ್ಕು ತೋರಿದ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ತಹಸೀಲ್ದಾರ್ ಮಲ್ಲಣ್ಣ ಯಲಗೋಡ ಅವರು ಸೇವಾಲಾಲ್ ಮಹಾರಾಜ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಗೋರ್ ಸಮಾಜದ ಪರಂಪರೆಯಂತೆ ಸಮಾಜದ ಪಂಚರು ಭೋಗ ಹಚ್ಚುವ ಮೂಲಕ ಗೌರವ ಸಲ್ಲಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ವೃದ್ಧ ದಂಪತಿಯನ್ನು ಮಧ್ಯದಲ್ಲೇ ಇಳಿಸಿದ ಬಸ್ ನಿರ್ವಾಹಕ ಅಮಾನತು
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ದಾನಪ್ಪ ಗೌಡ ಮಾತನಾಡಿ, ಸಮಾಜದ ಏಕತೆ, ಶಿಕ್ಷಣ ಮತ್ತು ಸಂಘಟಿತ ಹೋರಾಟದ ಅಗತ್ಯತೆಯನ್ನು ಒತ್ತಿಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಶರ್ಮಾ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.





