ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ 1927ರಲ್ಲಿ ಮಹಾರಾಷ್ಟ್ರದ ಮಹಾಡದಲ್ಲಿ ನಡೆದ ಐತಿಹಾಸಿಕ ಮನುಸ್ಮೃತಿ ದಹನದ ಸ್ಮರಣಾರ್ಥವಾಗಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಜಿಲ್ಲಾ ಸಮಿತಿ ಕಲಬುರಗಿ ಮತ್ತು ಯಾದಗಿರಿ ವತಿಯಿಂದ ಗುರುವಾರ ಕಲಬುರಗಿ ನಗರದಲ್ಲಿ ಮನುಸ್ಮೃತಿ ದಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಲಬುರಗಿ ನಗರದ ಎಸ್ವಿಪಿ ವೃತ್ತದಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ (ಜಗತ್ ವೃತ್ತ)ವರೆಗೆ ಬೃಹತ್ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಅಲ್ಲಿ ಮನುಸ್ಮೃತಿ ದಹನ ಮಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಾಮಾಜಿಕ ಅನ್ಯಾಯ, ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆ ವಿರುದ್ಧ ಘೋಷಣೆಗಳು ಮೊಳಗಿದವು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಸಂಸ ಹಿರಿಯ ಮುಖಂಡ ಅರ್ಜುನ ಭದ್ರೆ, “ಮನುಸ್ಮೃತಿ ದಹನವು ದ್ವೇಷಕ್ಕಾಗಿ ಅಲ್ಲ ಎಂದು ಡಾ. ಅಂಬೇಡ್ಕರ್ ಸ್ಪಷ್ಟಪಡಿಸಿದ್ದರು. ಭಯಂಕರ ರೋಗಕ್ಕೆ ಭಯಂಕರ ಔಷಧಿ ಬೇಕು, ಕಿವುಡರನ್ನು ಎಚ್ಚರಿಸಲು ಬಾಂಬ್ ಸ್ಫೋಟದ ಶಬ್ದ ಬೇಕು. ಅದೇ ರೀತಿ ಸನಾತನವಾದಿ ಸಮಾಜವನ್ನು ಎಚ್ಚರಿಸಲು ಮನುಸ್ಮೃತಿ ದಹನ ಅನಿವಾರ್ಯವಾಗಿತ್ತು” ಎಂದು ಅಂಬೇಡ್ಕರ್ ಹೇಳಿಕೆಯನ್ನು ಸ್ಮರಿಸಿದರು. ಮನುಸ್ಮೃತಿಯ ಪ್ರತಿಯೊಂದು ಪುಟವೂ ನಿಂದನಾರ್ಹವೆಂದು ಮಾತ್ರ ಹೇಳುವುದಲ್ಲ, ಅದರೊಳಗಿನ ಅಮಾನವೀಯತೆ, ಅಸಮಾನತೆ ಹಾಗೂ ಅಸತ್ಯಗಳನ್ನು ಸಮಾಜದ ಮುಂದೆ ಬಹಿರಂಗಪಡಿಸುವುದೇ ಅಂಬೇಡ್ಕರ್ರ ಉದ್ದೇಶವಾಗಿತ್ತು. ಶೂದ್ರ, ಅತಿಶೂದ್ರರ ಶೋಷಣೆಗೆ ಮೂಲವಾದ ಗ್ರಂಥದ ವಿರುದ್ಧ ಹೋರಾಟ ಅನಿವಾರ್ಯವಾಗಿತ್ತು’ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ದಸಂಸ ಹಿರಿಯ ಮುಖಂಡ ಮರಿಯಪ್ಪ ಹಳ್ಳಿ ಮಾತನಾಡಿ, ‘ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಾ ಹತ್ಯೆ ಘಟನೆಗೆ ಮನುಸ್ಮೃತಿಯಂತಹ ಮನುವಾದಿ ಚಿಂತನೆಗಳೇ ಕಾರಣ. ದಲಿತ ಯುವಕನನ್ನು ಪ್ರೀತಿಸಿ ವಿವಾಹವಾದ ಕಾರಣಕ್ಕೆ ಮಗಳನ್ನು ಕೊಚ್ಚಿ ಕೊಲೆ ಮಾಡಿರುವುದು ಮಾನವೀಯತೆಗೆ ವಿರುದ್ಧವಾದ ಕ್ರೌರ್ಯ. ಇಂತಹ ಕ್ರೌರ್ಯವನ್ನು ದಹಿಸುವ ಸಂಕೇತವಾಗಿ ಮನುಸ್ಮೃತಿ ದಹನ ನಡೆಸಲಾಗುತ್ತಿದೆ ಎಂದು ಹೇಳಿದರು. ಎಲ್ಲಾ ಧರ್ಮಗಳ ಗುರುಗಳು ಹಾಗೂ ಮಠಾಧೀಶರು ಸ್ವಜಾತಿ ವಿವಾಹ ವಿರೋಧಿಸಿ, ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಬೇಕೆಂದು’ ಎಂದರು.

ದಸಂಸ ಮುಖಂಡ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ‘ಮನುಸ್ಮೃತಿ ಸ್ತ್ರೀ ವಿರೋಧಿ, ಮನುಷ್ಯ ವಿರೋಧಿ ಗ್ರಂಥವಾಗಿದ್ದು, ಮನುವಾದ ಅಸಮಾನತೆಯನ್ನು ಪ್ರತಿಪಾದಿಸುತ್ತದೆ’ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಬೀದರ್ | ದಲಿತ ಸಂಘರ್ಷ ಸಮಿತಿಯಿಂದ ʼಮನುಸ್ಮೃತಿ ದಹನ ದಿನʼ ಆಚರಣೆ
ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಖನ್ನಾ, ಮಹಾಂತೇಶ್ ಬದದಾಳ, ಮಹೇಶ್ ಕೋಕಿಲೆ, ರೇಷ್ಮೆ ನಂದೂರು, ಸೂರ್ಯಕಾಂತ ಅಜಾದಪುರ್, ಅಜೀಜ್ ಸಾಬ್, ಸಂತೋಷ ಮೆಲ್ಮನಿ, ಮಲ್ಲಿಕಾರ್ಜುನ ಆಶಿನಾಳ, ಆನಂದ ಬಜಂತಿ, ಮಲ್ಲಿಕಾರ್ಜುನ ಕುರಕುಂದಿ, ಮಲ್ಲಿಕಾರ್ಜುನ ಶಾಖಾನವರ, ರಾಜಕುಮಾರ ನಿಂಬಾಳ, ಶಿವಕುಮಾರ ಕೋರಳ್ಳಿ, ರಾಜಶೇಖರ ಹೊಸಮನಿ, ಬಸವರಾಜ ಶೆಳ್ಳಗಿ ಸೇರಿದಂತೆ ಹಲವರು ಭಾಗವಹಿಸಿದ್ದರು.





