ನಾಪತ್ತೆಯಾದ ಪ್ರತಿ ಜೀವವೂ ಮರಳಿ ತನ್ನ ಮನೆ ಸೇರುವಂತಾಗಲು ಮತ್ತು ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಶೂನ್ಯಕ್ಕಿಳಿಯಲು ವ್ಯವಸ್ಥಿತವಾದ ‘ಸುರಕ್ಷಾ ಜಾಲ’ವೊಂದು ರಾಜ್ಯಾದ್ಯಂತ ಕಾರ್ಯೋನ್ಮುಖವಾಗಬೇಕಿದೆ. ಆಗ ಮಾತ್ರ ಕಲ್ಯಾಣ ಕರ್ನಾಟಕದ ಹೆಣ್ಣು ಮಕ್ಕಳು ನಿರ್ಭಯವಾಗಿ ಬದುಕಲು ಸಾಧ್ಯ.
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣಗಳು ಏರುಗತಿಯಲ್ಲೇ ಸಾಗಿವೆ. ಸರಾಸರಿ ಲೆಕ್ಕಾಚಾರದ ಪ್ರಕಾರ, ಪ್ರತಿದಿನ ರಾಜ್ಯದ ವಿವಿಧ ಭಾಗಗಳಿಂದ ಹತ್ತಾರು ಮಹಿಳೆಯರು ಕಾಣೆಯಾಗುತ್ತಿದ್ದಾರೆ. ಈ ಪೈಕಿ ಕಲ್ಯಾಣ ಕರ್ನಾಟಕ ಭಾಗವೂ ಪಟ್ಟಿಯಲ್ಲಿದೆ. ಇವುಗಳಲ್ಲಿ ಕೆಲವು ಪ್ರಕರಣಗಳು ಸುಖಾಂತ್ಯ ಕಂಡರೂ, ಹೆಚ್ಚಿನವು ಇಂದಿಗೂ ನಿಗೂಢವಾಗಿಯೇ ಉಳಿದಿವೆ. ರಾಜ್ಯ ಗೃಹ ಇಲಾಖೆ ತೆರೆದಿಟ್ಟಿರುವ ಕಳೆದ ಮೂರು ವರ್ಷಗಳ ಅಂಕಿ-ಅಂಶಗಳು ತೀವ್ರ ಕಳವಳ ಮೂಡಿಸಿವೆ.
ಕಳೆದ 3 ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಒಟ್ಟು 4,336 ಮಹಿಳೆಯರು ಮತ್ತು 764 ಹೆಣ್ಣು ಮಕ್ಕಳು ನಾಪತ್ತೆಯಾದ ಪ್ರಕರಣಗಳು ದಾಖಲಾಗಿವೆ. ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಕಲಬುರಗಿ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ನಾಪತ್ತೆ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಮಹಿಳೆಯರು-ಮಕ್ಕಳು ಸೇರಿ 2023-1,094, 2024-1,300, 2025-1,705 ಹಾಗೂ 2026ರ ಫೆಬ್ರವರಿ ಅಂತ್ಯದವರೆಗೆ ಒಟ್ಟು 237 ಮಹಿಳೆಯರು-ಮಕ್ಕಳು ಕಾಣೆಯಾಗಿರುವುದು ವರದಿಯಾಗಿದೆ.
2023ರಿಂದ 2026ರ ಫೆಬ್ರವರಿ ಅಂತ್ಯದವರೆಗೆ ಕಲ್ಯಾಣ ಕರ್ನಾಟಕದ ಕಲಬುರಗಿ (1,235), ರಾಯಚೂರು (808), ಬೀದರ್ (829), ವಿಜಯನಗರ (687) ಮತ್ತು ಕೊಪ್ಪಳ (701), ಬಳ್ಳಾರಿ (503) ಹಾಗೂ ಯಾದಗಿರಿ (336) ಜಿಲ್ಲೆಗಳು ನಾಪತ್ತೆಯಾದ ಮಹಿಳೆಯರ ಪ್ರಕರಣಗಳನ್ನು ದಾಖಲಿಸಿವೆ.

2023ರಲ್ಲಿ ನಾಪತ್ತೆಯಾದ 1,266 ಮಹಿಳೆಯರ ಪೈಕಿ 1,163 ಮಂದಿ ಪತ್ತೆಯಾಗಿದ್ದಾರೆ. 2024 ರಲ್ಲಿ 1,555 ಪ್ರಕರಣಗಳಲ್ಲಿ 1,508 ಮಂದಿ ಪತ್ತೆಯಾಗಿದ್ದಾರೆ. 2025ರಲ್ಲಿ 1,987 ಪ್ರಕರಣಗಳಲ್ಲಿ 1,781 ಮಂದಿ ಮಾತ್ರ ಪತ್ತೆಯಾಗಿದ್ದಾರೆ. ಪ್ರಸಕ್ತ 2026ರ ಮೊದಲ ಎರಡು ತಿಂಗಳಲ್ಲಿ ಒಟ್ಟು ಕಾಣೆಯಾದ 292 ಪ್ರಕರಣಗಳಲ್ಲಿ 101 ಮಾತ್ರ ಪತ್ತೆಯಾಗಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಸದನಕ್ಕೆ ಮಾಹಿತಿ ನೀಡಿದ್ದಾರೆ.
ಏಳು ಜಿಲ್ಲೆಗಳಲ್ಲಿ ಪತ್ತೆಯಾಗದೇ ಉಳಿದಿರುವ 491 ಮಹಿಳೆಯರ ಬಗ್ಗೆ ಯಾವುದೇ ಸುಳಿವಿಲ್ಲ. ಇವರು ಎಲ್ಲಿದ್ದಾರೆ? ಅವರ ಸ್ಥಿತಿಯೇನು? ಎಂಬ ಪ್ರಶ್ನೆಗಳು ಕುಟುಂಬಸ್ಥರನ್ನು ಮತ್ತು ಸಾರ್ವಜನಿಕರನ್ನು ಇಂದಿಗೂ ಕಾಡುತ್ತಿವೆ. ಇಲ್ಲಿಯವರೆಗೆ ಪತ್ತೆಯಾಗದವರಲ್ಲಿ 652 ಜನ ಹೆಣ್ಣು ಮಕ್ಕಳಿದ್ದಾರೆ.
ನಾಪತ್ತೆಯಾದವರ ಪ್ರಕರಣಗಳನ್ನು ಕೌಟುಂಬಿಕ ಕಲಹಗಳು, ಆರ್ಥಿಕ ಸಮಸ್ಯೆಗಳು, ಪ್ರೇಮ ವಿವಾಹ, ಮನಸ್ತಾಪ, ಅಪಹರಣ ಇತರೆ ಕಾರಣದಿಂದ ಮನೆ ತೊರೆಯುವುದು, ಕಳ್ಳಸಾಗಣೆ, ಅಪಹರಣಗಳ ಬಲೆಗೆ ಸಿಕ್ಕಿರಬಹುದು ಎಂದು ವಿಭಾಗಿಸಲಾಗಿದೆ. ನಾಪತ್ತೆಯಾದ ಪ್ರಕರಣಗಳನ್ನು ನಿಭಾಯಿಸಲು ಸರ್ಕಾರ ಮತ್ತು ಪೊಲೀಸ್ ಇಲಾಖೆಗಳು ಹಲವಾರು ಕ್ರಮಗಳನ್ನು ಕೈಗೊಂಡಿವೆ. ಆದರೂ ನಾಪತ್ತೆ ಪ್ರಕರಣಗಳ ಸಂಖ್ಯೆ ಇಳಿಯುತ್ತಿಲ್ಲ ಎಂಬುದು ಕಳವಳಕಾರಿಯಾಗಿದೆ.
ಕಾಣೆ, ಅಪಹರಣ ಪ್ರಕರಣಗಳು ವರದಿಯಾದ ಕೂಡಲೇ ರಾಜ್ಯದ ಎಲ್ಲಾ ಠಾಣೆಗಳಿಗೆ ಪ್ರಕರಣದ ಆರೋಪಿ ಮತ್ತು ಅಪಹರಿಸಿರುವ ಮಗುವಿನ ಬಗ್ಗೆ ಪ್ರಕಟಣೆ ಹೊರಡಿಸಲಾಗುತ್ತದೆ. ಯಾವುದೇ ಸುಳಿವು ದೊರೆಯದೆ ಇದ್ದಲ್ಲಿ ಪೋಷಕರ ಒಪ್ಪಿಗೆ ಮೇರೆಗೆ ಪತ್ರಿಕಾ ಪ್ರಕಟಣೆ, ದೂರದರ್ಶನ, ಆಕಾಶವಾಣಿ ಇತ್ಯಾದಿ ಮಾಧ್ಯಮಗಳಲ್ಲಿ ಪ್ರಕಟಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಮಾನವ ಕಳ್ಳಸಾಗಾಣಿಕೆಯನ್ನು ತಡೆಗಟ್ಟಲು ರಾಜ್ಯದಲ್ಲಿ ಒಟ್ಟಾರೆ 43 ಎಹೆಚ್ಟಿಯು (Anti Human Trafficking Unit) ಗಳನ್ನು ಸ್ಥಾಪಿಸಲಾಗಿದೆ. ಕಾಣೆಯಾದ ಪ್ರಕರಣಗಳ ಪೈಕಿ 60 ದಿನದೊಳಗೆ ಪತ್ತೆಯಾಗದ ಪ್ರಕರಣಗಳನ್ನು ಪರಿಣಾಮಕಾರಿ ತನಿಖೆಗಾಗಿ ಎಹೆಚ್ಟಿಯು ವಿಶೇಷ ಘಟಕಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಕಳ್ಳಸಾಗಾಣಿಕೆದಾರರ ವಿರುದ್ಧ ಐಟಿಪಿಎ ಕಾಯ್ದೆ ಅನ್ವಯ ಕಾನೂನು ರೀತ್ಯಾ ಪ್ರಕರಣ ದಾಖಲಿಸಿ, ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುತ್ತಿದೆ.

ಪೊಲೀಸ್ ಇಲಾಖೆಯು ವಿಶೇಷ ತಂಡ ರಚಿಸಿ ಪ್ರಕರಣಗಳ ಆಳವಾದ ತನಿಖೆ ನಡೆಸಿ, ನಾಪತ್ತೆಯಾದವರನ್ನು ಹುಡುಕುವ ಕೆಲಸ ಮಾಡುತ್ತಿದೆ. ಅಲ್ಲದೆ ಮಹಿಳಾ ಸಂಘಟನೆಗಳ ಸಹಯೋಗದಲ್ಲಿ ಶಾಲಾ-ಕಾಲೇಜುಗಳನ್ನು, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಮಹಿಳೆಯರ ನಾಪತ್ತೆಯನ್ನು ತಡೆಗಟ್ಟಲು ಮತ್ತು ನಾಪತ್ತೆಯಾದವರನ್ನು ಶೀಘ್ರವಾಗಿ ಪತ್ತೆ ಹಚ್ಚಲು ಸರ್ಕಾರ, ಸಮಾಜ, ಮತ್ತು ಕುಟುಂಬಗಳು ಒಟ್ಟಾಗಿ ಕೆಲಸ ಮಾಡಬೇಕಿದೆ.
ಇದನ್ನೂ ಓದಿ : ಔರಾದ್ | ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಹಾಯವಾಣಿ
ಕಾಣೆಯಾದವರನ್ನು ಹುಡುಕುವ ಜವಾಬ್ದಾರಿ ಪೊಲೀಸ್ ಇಲಾಖೆಯದ್ದು ಮಾತ್ರವಲ್ಲ. ಇದು ಸರ್ಕಾರ, ಸ್ವಯಂಸೇವಾ ಸಂಸ್ಥೆಗಳು ಮತ್ತು ಪ್ರತಿಯೊಂದು ಕುಟುಂಬದ ಸಾಮೂಹಿಕ ಹೊಣೆಗಾರಿಕೆಯಾಗಿದೆ. ಆಧುನಿಕ ತಂತ್ರಜ್ಞಾನದ ಸದ್ಬಳಕೆ, ಗಡಿ ಭಾಗಗಳಲ್ಲಿ ಬಿಗಿ ಕಾವಲು ಮತ್ತು ಗ್ರಾಮೀಣ ಮಟ್ಟದಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ನಿರಂತರ ಜಾಗೃತಿ ಮೂಡಿಸುವುದು ಅಗತ್ಯ. ನಾಪತ್ತೆಯಾದ ಪ್ರತಿ ಜೀವವೂ ಮರಳಿ ತನ್ನ ಮನೆ ಸೇರುವಂತಾಗಲು ಮತ್ತು ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಶೂನ್ಯಕ್ಕಿಳಿಯಲು ವ್ಯವಸ್ಥಿತವಾದ ‘ಸುರಕ್ಷಾ ಜಾಲ’ವೊಂದು ರಾಜ್ಯಾದ್ಯಂತ ಬಲಗೊಳ್ಳಬೇಕಿದೆ. ಆಗ ಮಾತ್ರ ಕಲ್ಯಾಣ ಕರ್ನಾಟಕದ ಹೆಣ್ಣು ಮಕ್ಕಳು ನಿರ್ಭಯವಾಗಿ ಬದುಕಲು ಸಾಧ್ಯ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




