ಕಲ್ಯಾಣ ಕರ್ನಾಟಕ ಭಾಗದ ಪ್ರತಿಭಾವಂತ ಅಭ್ಯರ್ಥಿಗಳಿಗಳು ಐಎಎಸ್, ಐಪಿಎಸ್ ಹಾಗೂ ಕೆಎಸ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗುವ ಅಗತ್ಯ ತರಬೇತಿ ನೀಡಬೇಕು ಎನ್ನುವ ಉದ್ದೇಶದಿಂದ ಪ್ರಬುದ್ಧ ಅಕಾಡೆಮಿ ಕೇಂದ್ರ ನಿರ್ಮಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ನಗರದ ಹೊರವಲಯದ ವಾಜಪೇಯಿ ಬಡಾವಣೆಯಲ್ಲಿ ಸುಮಾರು 10,000 ಚದುರ ಅಡಿಯಲ್ಲಿ ₹30 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರಬುದ್ಧ ಪರೀಕ್ಷಾ ಪೂರ್ವ ತರಬೇತಿ ಅಕಾಡೆಮಿ ಕೇಂದ್ರವನ್ನು ಭಾನುವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ʼಈ ಹಿಂದೆ ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ಈ ಕೇಂದ್ರಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ ನಮ್ಮ ಸರ್ಕಾರ ಅಧಿಕಾರ ಕಳೆದುಕೊಂಡಿತ್ತು. ಆ ನಂತರ ಬಂದ ಸರ್ಕಾರ ಕೆಲಸ ಮಾಡಲೇ ಇಲ್ಲ. ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ ಹಾಗೂ ಭವಿಷ್ಯದ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ನಮ್ಮ ನಂತರ ಅಧಿಕಾರಕ್ಕೆ ಬಂದ ಸರ್ಕಾರ ಈ ಕೇಂದ್ರದ ಕಾಮಗಾರಿ ಕೈಗೊಳ್ಳಲಿಲ್ಲ. ಈಗ ನಾವೇ ಮತ್ತೆ ಅಧಿಕಾರಕ್ಕೆ ಬಂದಿದ್ದೇವೆ. ಪ್ರಬುದ್ಧ ಅಕಾಡೆಮಿಯನ್ನು ನಿರ್ಮಿಸಿ ನಾವೇ ಉದ್ಘಾಟಿಸಿದ್ದೇವೆ. ಇದು ನಮ್ಮ ಸರ್ಕಾರದ ಬದ್ಧತೆಯಾಗಿದೆ. ನುಡಿದಂತೆ ನಡೆಯುತ್ತಿದ್ದೇವೆʼ ಎಂದು ಹೇಳಿದರು.
ʼಅಕಾಡೆಮಿ ಕೇವಲ ಕಟ್ಟಡವಲ್ಲ. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳ ಭವಿಷ್ಯ ಅಡಗಿದೆ. ಅವರ ಕನಸುಗಳು ಇಲ್ಲಿ ಸಾಕಾರಗೊಳ್ಳಲಿವೆ. ಈ ಹಿಂದೆ ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆದಾಗ ಅದರಿಂದ ತೊಂದರೆಗೊಳಗಾದ ವಿದ್ಯಾರ್ಥಿಗಳ ಒಂದು ಹೊತ್ತಿನ ಊಟಕ್ಕೆ ಪರದಾಡುವಂತಾಗಿತ್ತು. ತರಬೇತಿ ಪಡೆಯಲು ಬೆಂಗಳೂರಿಗೆ ಬಂದಿದ್ದ ವಿದ್ಯಾರ್ಥಿಗಳು ʼಮೂರು ನಾಲ್ಕು ಅನ್ನ ಹಾಕುʼ ಎಂದು ವಾಟ್ಸಪ್ ಗ್ರೂಪ್ ಮಾಡಿಕೊಂಡು ಬೆಂಗಳೂರಿನಲ್ಲಿ ಎಲ್ಲೆಲ್ಲಿ ಉಚಿತ ಊಟ ಸಿಗುತ್ತದೆ ಎಂದು ಮಾಹಿತಿ ಹಂಚಿಕೊಂಡು ಛತ್ರಗಳ ವಿವರ ಹಾಕಿ ಅಲ್ಲಿ ಊಟ ಮಾಡಿಕೊಂಡು ಬರುತ್ತಿದ್ದರು. ಆ ದೃಶ್ಯ ನನ್ನ ಕಣ್ಣಮುಂದೆ ಬಂದು, ಕಣ್ಣೀರು ಬರುವಂತಾಗುತ್ತಿತ್ತು. ಅಂತಹ ಯಾವುದೇ ಸ್ಥಿತಿ ನಮ್ಮ ಭಾಗದ ಮಕ್ಕಳಿಗೆ ಬಾರದಿರಲಿ ಎಂದು ಪ್ರಬುದ್ಧ ಅಕಾಡೆಮಿ ಕೇಂದ್ರ ಸ್ಥಾಪನೆಗೆ ಒತ್ತು ನೀಡಿ, ಇಂದು ಕಾರ್ಯರೂಪಕ್ಕೆ ತರಲಾಗಿದೆʼ ಎಂದು ತಿಳಿಸಿದರು.
ಪ್ರಬುದ್ಧ ಅಕಾಡೆಮಿ ಒಂದು ಉತ್ಕೃಷ್ಟ ತರಬೇತಿ ಕೇಂದ್ರವಾಗಿ ಬಲಗೊಳ್ಳಬೇಕು. ಈ ಭಾಗದ ಐಎಎಸ್ ಅಧಿಕಾರಿಗಳು ಇಲ್ಲಿನ ಅಭ್ಯರ್ಥಿಗಳಿಗೆ ಪಾಠ ಮಾಡಲು ಮುಂದೆ ಬರಬೇಕು. ಅದಕ್ಕೆ ಅನುಕೂಲವಾಗುವಂತೆ ರೋಸ್ಟರ್ ಪದ್ದತಿ ರೂಪಿಸಬೇಕು. ಅಕಾಡೆಮಿಗೆ ಅಭ್ಯರ್ಥಿಗಳು ಬಂದು ಹೋಗಲು ಕೆಕೆಆರ್ಟಿಸಿ ವತಿಯಿಂದ ಎರಡು ನಗರ ಸಾರಿಗೆ ಸೇವೆಯನ್ನು ಇಂದಿನಿಂದಲೇ ಪ್ರಾರಂಭಿಸಲಾಗಿದೆ. ಜೊತೆಗೆ ನಿವೃತ್ತ ಪ್ರೊಫೆಸರ್ ಗಳು ಕೂಡಾ ಇಲ್ಲಿನ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡಲು ಮುಂದೆ ಬಂದಿದ್ದಾರೆ. ಈಗಾಗಲೇ 10,000 ಅಭ್ಯರ್ಥಿಗಳು ಕೆಇಎ ಮೂಲಕ ಪರೀಕ್ಷೆ ಎದುರಿಸಿದ್ದಾರೆ. ಅವರಲ್ಲಿ ಮೆರಿಟ್ ಆಧಾರದ ಮೇಲೆ 500 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡಲಾಗುತ್ತದೆʼ ಎಂದರು.
ಇದನ್ನೂ ಓದಿ : ಬೀದರ್ | ʼವಿಬಿ- ಜಿ ರಾಮ್ ಜಿʼ ಕರಾಳ ಕಾಯ್ದೆ ಹಿಂಪಡೆಯಲು ದೇಶಾದ್ಯಂತ ಆಂದೋಲನ : ಸಚಿವ ಈಶ್ವರ ಖಂಡ್ರೆ
ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಶಾಸಕರಾದ ಎಂ.ವೈ.ಪಾಟೀಲ್, ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣಪ್ಪ ಕಮಕನೂರ ಜಗದೇವ ಗುತ್ತೇದಾರ್, ಜಿಲ್ಲಾಧಿಕಾರಿ ಪೌಜಿಯಾ ತರನ್ನುಮ್ ಮತ್ತಿತರರಿದ್ದರು.





