ಸಮಾಜದಲ್ಲಿದ್ದ ಅಸಮಾನತೆ, ಅನಿಷ್ಠ ಪದ್ಧತಿಗಳ ವಿರುದ್ಧ ತಮ್ಮ ಕೀರ್ತನೆಗಳ ಮೂಲಕ ಸಮರ ಸಾರಿದ ದಾಸಶ್ರೇಷ್ಠರು ಕನಕದಾಸರು. ಅವರ ಚಿಂತನೆ, ವಿಚಾರಗಳು ಮತ್ತು ಸಮಾಜ ಸುಧಾರಣೆಯ ದೃಷ್ಟಿಕೋನಗಳು ಇಂದಿಗೂ ಪ್ರಸ್ತುತ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವಿಜಯಾ ಬಿ ಕೋರಿಶೆಟ್ಟಿ ಅಭಿಪ್ರಾಯಪಟ್ಟರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠದ ವತಿಯಿಂದ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಮೂಲತಃ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ತಿಮ್ಮಪ್ಪ ನಾಯಕ, ತಮ್ಮ ಜೀವನದಲ್ಲಿ ನಡೆದ ಹಲವು ಘಟನೆಗಳಿಂದ ಕನಕದಾಸರಾಗಿ ಪರಿವರ್ತನೆಯಾದರು. ಬಳಿಕ ಹಲವು ಸ್ಥಳಿಗಳಿಗೆ ಭೇಟಿ ನೀಡಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಜನರ ಮನೋಭಾವನೆಗಳನ್ನು ಪರಿವರ್ತಿಸಿದರು. ಅವರು ಕೀರ್ತನೆಗಳು ಹಾಗೂ ಕಾವ್ಯಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ” ಎಂದರು.
ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, “ಕನಕದಾಸರು 15-16ನೇ ಶತಮಾನದಲ್ಲಿ ಸಮಾಜಿಕ ಸಮಾನತೆಗಾಗಿ ಹೋರಾಡಿದವರು. ಸಮಾಜದ ಢಾಂಬಿಕತೆ, ವರ್ಗ ಸಂಘರ್ಷದ ವಿರುದ್ಧ ಧ್ವನಿ ಎತ್ತಿದವರು. ಅವರು ತಮ್ಮ ಸಾಹಿತ್ಯದ ಮೂಲಕ ಮಹಿಳಾ ಸಬಲೀಕರಣ ಹಾಗೂ ಸ್ತ್ರೀ ಸ್ವಾತಂತ್ರ್ಯದ ಅಗತ್ಯತೆಯ ಕುರಿತಾಗಿಯೂ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ದಾಸ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಸಮಾಜದಲ್ಲಿ ಧನಾತ್ಮಕ ಬದಲಾವಣೆಗಳನ್ನು ತಂದಿದ್ದಾರೆ” ಎಂದರು.
ಐಕ್ಯೂಎಸಿ ನಿರ್ದೇಶಕ ಪ್ರೊ. ಪಿ ಜಿ ತಡಸದ ಮಾತನಾಡಿ, “ಪಾಳೇಗಾರನಾಗಿದ್ದ ಕನಕದಾಸರು, ವ್ಯಾಸರಾಯರಿಂದ ಪ್ರೇರಿತರಾಗಿ ಎಲ್ಲವನ್ನೂ ತೊರೆದು, ಭಕ್ತಿಗಾಗಿ, ಸಮಾಜ ಸುಧಾರಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ದಾಸ ಸಾಹಿತ್ಯವನ್ನು ಸಾಮಾನ್ಯ ಜನರಿಗೆ ತಲುಪಿಸಿದ್ದು ಮಾತ್ರವಲ್ಲದೇ, ಕೃತಿಗಳು ಮತ್ತು ಕೀರ್ತನೆಗಳ ಮೂಲಕ ಆ ಕಾಲಘಟ್ಟದ ಸಮಾಜದಲ್ಲಿದ್ದ ಓರೆಕೋರೆಗಳನ್ನು ತಿದ್ದುವ ಮಹತ್ವದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾದದ್ದು” ಎಂದರು.
ಈ ಸುದ್ದಿ ಓದಿದ್ದೀರಾ? ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ: ವಾರ್ತಾಭಾರತಿಯ ಪುಷ್ಪರಾಜ್ ನೂತನ ಅಧ್ಯಕ್ಷ
ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಬಿ ಎಲ್ ಲಕ್ಕಣ್ಣನವರು, ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು. ಕಾರ್ಯಕ್ರಮ ಸಂಯೋಜಕ ಸಂದೀಪ್ ಸ್ವಾಗತಿಸಿ, ವಂದಿಸಿದರು.





