ಅಗೊತ್ ಡ್ಯೂಟಿ ಮುಗ್ಸಕೊಂಡ್ ಮನೀಗಿ ಬರಾತನ್ಕಾ ಪೂರಾ ಹೊತ್ತು ಮುಣಗಿತು. ಝಲ್ದಿ ಮನೀಗಿ ಹೋಗರಿ ಅಂತ ಬಂದೂರ್ಬಿ ಮಾಗಿ ಹೊತ್ತು ಯಾವಾಗ ಹೋಗ್ಯಾದ್ ಅಂಬದೇ ಖುನಾ ಆಗಿಲ್. ಊರಾಗ ಬರಾತನಕಾ ಮಂದಿ ರೋಡಿನ್ ಮ್ಯಾಲ್ ಉರಿ ಹಚ್ಚಿ ಕಾಸ್ಕೊತಾ ಕುಂತಿದುರ್. ಫಟ್ಫಟಿ ಮ್ಯಾಲ್ ಬಂದಿನ ಸಲೇಕ್ ನಂಗ್ಬಿ ಮೈ ನಡುಗು ಹುಕ್ಕಿ, ಕೈಕಾಲ ಕುಟ್ಟು ಹಿಡ್ದಿದುವ್, ಚಳಿಗಿ ಅಂಜಿ ನಾಬೀ ಗಾಡಿ ನಿಂದುರ್ಸಿ ಥೋಡೆ ಕಾಸ್ಕೊಂಬರ್ ಅಂತ ಬೆಂಕಿ ಮುಂದ್ಹೋಗಿ ಕುಂತಾ.
ಈ ಛಳಗಾಲ್ದಾಗ ರಾತ್ರಿ ಭಾಳ್, ಹಗುಲ ಕಮ್ಮಿ ಇರ್ತುದ್, ಈ ಮಾಗಿ ಹೊತ್ತಿನಾಗ ಹೊತ್ರಾಳಿ ಏಳತನ್ಕಾ ಭೆಳಾರ್ ಆಗಿ ಬಾಗಿಲಿಗಿ ಬಿಸುಲು ಬರ್ತುದ್. ಮದ್ಯಾಣ ಬಾರಾ ಭಾರ್ಸುರ್ ಬಿ ತಣ್ಣುಗ್ ಕಳಾಂಡಿ ಹಂಗೇ ಇರ್ಲಾತುದ್, ಮತ್ ಸಂಜಿಗಿ ಚಾರ್ ಬಜೆ ಅಯ್ತು ಅಂದುರ್ ಸಾಕ್, ತಣ್ಣುಗ್ ಗಾಳಿ ಬಿಡ್ಲಾತುದ್, ಈ ಚಳಿಗಿ ಅಂಜಿ ಮಂದಿ ಮನ್ಯಾಗಿಂದ್ ಹೊರಗ ಬರಲಾಕ್ ಭಾಳ್ ಅಂಜ್ಲಾತರ್.
ಛೇ…ಛೇ…! ಈವೊರ್ಷ್ ಭಾಳ್ ಛಳಿ ಅವಾರೀ, ನಡು ಮದ್ಯಾಣ್ಯಾಳಿ ಏಟ್ ಕಡಕ್ ಬಿಸುಲ್ ಇದ್ದೂರ್ಬೀ ಮೈದಾಗಿಂದ ಥಂಡಿ ಅಂಬದ್ ಒಟ್ಟಾ ಹೋಗಾಲ್ ಹೋಗ್ಯಾದ್, ಸಂಕ್ರಾಂತ್ರಿ ಯಾಳಿ ಆಗೋ ಚಳಿ ಈಗೇ ಆಗ್ಲತಾವ್ʼ ಅಂತ ಚಾವಡಿ ಕಟ್ಟಿ ಹಿಂದ್ ತಿಪ್ಪ್ಯಾಗಿಂದ ಹೆಂಡಿ ಹತ್ತಿಂದ ಒಣಗಿಂದ್ ಹುಲ್ಲು ತಂದಿ ಉರಿ ಹಚ್ಚಿ ಕಾಸ್ಕೊತಾ ಕುಂತಿ ಮಾತಾಡ್ಕೊಲತಿದುರ್. ಬೆಂಕಿ ಮುಂದ್ ಕುಂತಾರ್ ಖರೆ ಅದರ್ ಒಬ್ಬುರ್ ಘೊಂಗ್ಡಿ ಹಂಗೇ ಹಚ್ಕೊಂಡಿ ಮೈಮುದುಡಿಸಿ ಕುಂತಿ ಬೆನ್ನು ಕಾಸ್ಕೊತಾ ಹ್ಹಾ…ಹ್ಹೂ….ಅಲಾತಿದುರ್.

ʼಹಾ..ನೋಡ್ರೀ..ಈವೊರ್ಷ್ ಮಳೀನೂ ಭಾಳ್ ಬಿದ್ದಿಂದ ಸಲೇಕೆ ಏನೋ, ಛಳಿ ತೋಲ್ ಆಗ್ಲಾತಾವ್, ಇಂಥದ್ರಾಗ್ ಮುಂಜಾನತ್ ಜಲ್ದಿ ಏಳ್ಬೇಕೇ ಅನ್ಸಲ್ ಹೋಗ್ಯಾದ್, ಹೊತ್ತ್ಮುಣಿಗಿ ಪಾಚ್ ಅಯ್ತು ಅಂದುರ್ ಸಾಕ್ ಮೈದಾಗ್ ನಡುಗ್ ಹುಕ್ಲಾತುದ್, ಅದ್ಕೆ ತಾಯಿ ಹೊಟ್ಯಾಗ್ ಸೂರ್ಯ ಹೋಗಾಕಿಂತಾ ಪೈಲಾನೇ ದನಾ ಹೊಡ್ಕೊಂಡಿ ಹೊಲ್ದಿಂದ್ ಮನೀಗಿ ಹೊಂಟಿದಾʼ ಅನ್ಕೊತಾ ಕಡೆಮನಿ ಕಾಶೆಪ್ಪಾ ಕಾಲ್ ಕಾಸ್ಕೊತಾ ಎದ್ದಿ ನಿಂತಿದಾ…
ಅವತ್ತು ಭೇಸ್ತಾರ್ ಇತ್ತು. ದಂಧ್ಯಾಕ್ ಹೋಗದ್ ಅದಂತಿ ನಾಬೀ ಜರಾ ಜಲ್ದಿನೇ ಎದ್ದಿದಾ. ಅಂಥಾ ಮಸ್ಕಿನಾಗೇ ಎದ್ದಿ ಕೂಲಿ ಹೆಣ್ಮಕ್ಕುಳ ಕೈದಾಗ ಒಂದೊಂದು ಕುಂಚಿ ಹಿಡ್ಕೊಂಡಿ ಹೊಲ್ಕಡಿ ನಡ್ದಿದುರ್. ಅವತ್ತು ಜರಾ ಛಳಿ ಕಮ್ಮಿ ಇದ್ದುವ್, ಖರೆ ಮಂಜ್ ಭಾಳ್ ಇತ್ತ್. ಮನ್ಯಾಗಿಂದ್ ನೋಡ್ದೂರ್ ರೋಡಿನ್ ಮ್ಯಾಲ್ ಹೋಗೋ ಮಂದಿ ಯಾರಂತ ಖುನಾ ಸಿಕ್ಕಿಲ್ಲ. ನಾನೇ ಅವ್ರ ಬಲ್ಲಿ ಹೋಗಿ ಕೇಳ್ದಾ ʼಈಟ್ ಮಸ್ಕಿನಾಗ್ ಇಂಥಾ ಥಂಡಿದಾಗ ಎಲ್ಲಿಗಿ ನಡ್ದಿರಿʼ ಅಂದಾ. ಅಯೀ…ಎಲ್ಲಿಗಿ ಬಿ ಇಲ್ರೀ…ಅಂತ ಅಂಜ್ಕೊತಾ ʼಆ ಗೌಡುರ್ ಹಾಣಾದಿ ಹೊಲ್ದಾಗ್ ಥೊಡೆ ಕಡ್ಡಿ ಪಲ್ಯಾ ಕಡ್ಕೊಂಡು ಬರರಿ ಅಂತ ಹೋಗಲಾತಿವಿʼ, ನಮ್ ಮಗುಳ ಕ್ವಾಟ್ಯಾಗ್ ಇರ್ತಾಳಳಾ, ಹಸೀ ಕಡ್ಡೆ ಪಲ್ಯಾ ತಿಂಬಾ ಖ್ಯಾಸ್ ಆಗಿ ಯಾರ್ದರಾ ಕೈದಿಂದ್ ಖಳ್ಸಕುಡು ಯವಾʼ ಅಂತ ಬಾಯ್ಬಿಟ್ಟ ಕೇಳ್ಯಾಳ್ ಅದ್ಕೆ ನಡ್ದಿದೆವ್, ಅಂದ್ರು. ಓಹೋ..ಇವರು…ಭೆಳಾರ್ ಆದ್ಮ್ಯಾಗ್ ಹೋದುರ್ ಮಂದಿ ನೋಡ್ತಾರ್ ಅಂತ ಈಟ್ ಮುಂಜಾನತ್ ಎದ್ದಿ ನಡದ್ಹಾಂಗ್ ಕಾಣತುದ್ʼ ಅಂತ ತಿಳ್ಕೊಂಡಿ ನಾ ಸುಮ್ಮುನಾಗಿ ಮನೀಗಿ ಬಂದಾ.
ಈ ಛಳಿ ಶುರು ಆಗ್ಲಾಕಾ ಹೊಲ್ದಾಗ್ ಘಮಂತ್ ಘಮಾಕಿ ಹೊಡಿದುತ್. ಆಕಡಿ ಅರಿಶಿನ ಹಚ್ಚಿನ್ಹಾಂಗ್ ತೊಗರಿ ಸಾಲು. ಅದ್ರಾಗ್ ನಾಕೈದ್ ಅಕ್ಡಿ ಅವರೆಕಾಯಿ ಬೆಳ್ಳಿ, ಹೊಲದ ಕಟ್ಟಿಕಡೀ ನೆಂಕಿ, ನಾವಣಿ, ವಟಾಣಿ…ಹಚ್ಚುಗ್ ಕಾಣಸ್ದುರ್, ಬಾಜು ಹೊಲ್ದಾಗ ಕಡ್ಡಿ, ಖುಸ್ಬಿ, ಅದರಾಗ ಉತಾಡಿ ದೊಡ್ಡ ಜ್ವಾಳಾ, ಸಾಸಿ….ಮತ್..ಆ ಮೂಲಿ ಹೊಲ್ದಾಗ್ ಹುಳಿ ಬಾರೆಕಾಯಿ ಗಿಡ…ಸೀಮಿ ಹೊಲ್ದಾಗ್ ಕಟ್ಟೀಗ್ ಜಾಳ್ಯಾಗ್ ಸಣ್ ಜೇನ್…ಇಂಥಾದೆಲ್ಲಾ ಕಣ್ಣಿಂದ್ ನೋಡ್ಬೇಕಂದುರ್ ನಡ್ಕೊತಾ ಹೊಲಕಡೀ ಒಂದ್ಸಲಾ ತಿರಗ್ಯಾಡಿ ಬರ್ಬೇಕೇ…
ಬೀದರ್ ಹ್ಯಾಂಗದಾ ಅಂದುರ್ ಮಳಗಾಲದಾಗ ಮಳೀನೂ ತೋಲ್ ಬಿಳ್ತುದ್, ಬ್ಯಾಸಕಿ ಬಂತಂದ್ರು ಬೆಂಕಿಹ್ಹಾಂಗ್ ಕಡಕ್ ಬಿಸುಲು, ಈ ಛಳಿಗಾಲದಾಗರಾ ಪೂರಾ ಥಂಡಿ..ಥಂಡಿ….ಆದ್ರೂ ಬೀದರ್ ಮಂದಿ ಇದಕೆಲ್ಲಾ ಬ್ಯಾಸರಕಿ ಆಗಲದ್ಹಂಗ, ಭಾಳ್ ತಾಳ್ಕೊಂಡಿ ಜಿಂದಗಿ ಮಾಡ್ಲಾತಾರ್. ಈ ಛಳಿ ಪ್ಯಾಟಿಗಿಂತಾ ಹಳ್ಳಿಕಡೀನೇ ಭಾಳ್ ಅವಾ, ಹಳ್ಳಾ, ಕೆರಿ, ನೀರಾವರಿ ಎಲ್ಲೆಲ್ಲಿ ಅದಾ ಅಲ್ಲಿ ಭಾಳ್ ಅವಾ.

ಸಿಟಿದಾಗ ಮುಂಜಾನತ್, ಸಂಜಿಗಿ ವಾಕಿಂಗ್ ಅಂತ ಹೋಗೊ ಮಂದಿ ಈ ಛಳಿಗಿ ಅಂಜಿ ಮನಿದಿಂದ ಹೊರಗ ಬರ್ಲಾಕ್ ಅಂಜ್ಲಾತಾರ್. ಹೊತ್ರಾಳಿ ಏಳತಿಕಿ ಸೂರ್ಯನ ಬಿಸುಲು ಯಾಗ್ ಬರ್ತುದೊ ಅಂತ ಕಾಯೋದು ಆಗ್ಯಾದ್. ಬ್ಯಾಸಕಿ ಕಡಕ್ ಬಿಸಿಲಿನಾಗ ತಣ್ಣಂದ ಬೇನ್ ಗಿಡಾ ಭಾಳ್ ಅಪರೂಪ ಅನ್ಸಿದ್ಹಾಂಗ, ಈಗಿನ ಥಂಡಿಗಿ ಸೂರ್ಯನ ಬಿಸುಲು ಅಟೇ ಅಪರೂಪ ಆಗ್ಯಾದ್. ಎಲ್ಲಿಗರಾ ಹೊರ ಹೋಗೋರು ಬಿಸುಲು ಬಂದ್ ಮ್ಯಾಲೆ ನಡದಾರ. ಯಾಕಂತಾ ಕೇಳಿದ್ರೆ ʼಭಾಳ್ ಚಳಿ ಅವರೀʼ ಅಂತ ಎಲ್ಲೊರ್ ಬಾಯ್ದಿಂದ್ ಕೇಳ್ಹೊಂಟುದ್. ಫಟ್ಫಟಿ ಮ್ಯಾಗ್ ದಿನಾ ತಿರಗಾಡೊ ಮಂದಿಗಿ ಈ ಥಂಡಿ ಭಾಳ್ ಹೈರಾಣಿ ಮಾಡ್ಯಾದ್.
ಖರೇ, ನಮ್ ಹಳ್ಳಿಕಡೀ ಮಂದಿ ಈ ಛಳಿ, ಬಿಸುಲ, ಮಳೀಗಿ ಅಂಜೋರಲ್ಲಾ, ಅವ್ರ ಧಂದ್ಯಾ ಹ್ಯಾಂಗದಾ ಅಂದುರ್, ಮಸ್ಕಿನಾಗ್ ಪಾಂಚ್ ಬಜೆ ಎದ್ದಿ ಎತ್ತುಗೊಳ್ ಹೊಡ್ಕೊಂಡಿ ಹೊಲ್ದ್ ಕಟ್ಟಿಗಿ ಗಿಡಕ್ ಮೈಲಾಕ್ ಕಟ್ಹ್ಯಾಕಿ, ಹಂಗೇ ಬರಾಪರಿ ಕುಡಗಿಲ್ದಿಂದ್ ಒಂದ್ ಹೊರೀ ಹುಲ್ಲು ಕೊಯ್ಕೊಂಡು ಬರ್ತಾರ. ಕಬ್ಬು ಕಡಿಲಾಕ್ ಹೋಗೊ ಕೂಲಿಕಾರ ಮಂದಿರಾ ಮಸ್ಕಿನಾಗೇ ಎದ್ದಿ, ಅಂಥಾ ಥಂಡಿ ಯ್ಯಾಳಿನೇ ಮೈತೊಳ್ಕೊಂಡ, ಅರ್ಬಿ ಒಗ್ದಿ, ಸಣ್ಣ-ಸಣ್ಣ ಕೂಸಿಗಿ ಬಗಲಾಗ್ ತಕೊಂಡಿ ಭೆಳಾರ್ ಆಗಾ ಪೈಲೆನೇ ಹೊಲ್ದಾಗ ಇರ್ತಾರ್. ಎಳಮಾಸಿ ಆದ್ಮ್ಯಾಗ್ ದೊಡ್ಡ ಜ್ವಾಳಾ ಎತಗೈ ಸರಿ ಬರ್ತುದ್, ಆಗ್ ಎತ್ತಿಗಿ ಹೊಲ್ದಾಗೇ ದಾವಣಿಗಿ ಕಟ್ಟಿ, ಕಿಳ್ಳಿ ಹಾಕೊತಾ, ಅಲ್ಲೇ ಮಂಚ್ಕಿ ಮ್ಯಾಲ್ ಮಕೊತಾರ್.
ಇದನ್ನೂ ಓದಿ : ಔರಾದ್ ಸೀಮೆಯ ಕನ್ನಡ | ಈವೊರ್ಷ್ ಯಳಮಾಸಿ ಭಜ್ಜಿ ಉಳ್ಳಾಕ್ ನಮ್ ಹೊಲ್ಕಡಿನೇ ಬರೀ
ಆಯ್ತು ತಕೊರಿ, ಈ ಛಳಿ ಹ್ಯಾಂಗ್ಬಿ ಸಂಕ್ರಾತ್ರಿ ಕರಿ ಕಡ್ದಿ ಹೋಗೊ ಹ್ಹಾಂಗ್ ಕಾಣತಾವ್, ಈಗ ಎಳಮಾಸಿ ಹೊಂಟುದ್, ನಿಮ್ಗ್ ಬಾರೇಕಾಯಿ, ಕ್ಯಾರೇಕಾಯಿ, ಒವಳಿ, ಭೋಳ್ ಗಡ್ಡಿ ಅವರೇಕಾಯಿ ತಿಂಬದ್ ಖ್ಯಾಸ್ ಏನಾರಾ ಅಯ್ತು ಅಂದುರ್ ಸಿಟಿದಾಗ ಇದ್ದೊರು ಹೊಲ್ಕಡಿ ಬರೀ…ಹಂಗೇ ಎಳಮಾಸಿ ಭಜ್ಜಿ ತಿಂದಿ, ಹುಳಿ ಮಾನ್ಕಾಯಿ ಗಿಡಕ್ ಝೂಕಾಲಿ ಆಡಿ ಹೋಗ್ರೀ….!!

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




