ಕರ್ನಾಟಕ ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ. ಎ. ಗಫೂರ್ ಅವರ ಅಧ್ಯಕ್ಷತೆಯಲ್ಲಿ ಇಂದು ಮಣಿಪಾಲದ ಜಿಲ್ಲಾ ಪಂಚಾಯತ್ ಡಾ ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಮಂಡಳಿಯ ಪ್ರಥಮ ಸಭೆ ನಡೆಯಿತು.
ಸಭೆಯ ನಂತರ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಭೆಯಲ್ಲಿ ಪ್ರವಾಸೋದ್ಯಮ ವಲಯದ ಸಾಮರ್ಥ್ಯ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ಕರಾವಳಿಯ ಸಮಗ್ರ ರಕ್ಷಣೆ ಕುರಿತು ಚರ್ಚೆಗಳು ನಡೆಯಿದವು. ಕರಾವಳಿ ಪ್ರದೇಶಕ್ಕೆ ಸೇರಿದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಎಂಬ ಮೂರು ಜಿಲ್ಲೆಗಳ 19 ವಿಧಾನ ಸಭಾ ಕ್ಷೇತ್ರಗಳನ್ನೊಳಗೊಂಡಂತೆ ಈ ಮಂಡಳಿ ರಚಿಸಲಾಗಿದೆ. ಕರಾವಳಿ ಭಾಗದ ಸರ್ವೋತ್ತಮುಖ ಅಭಿವೃಧಿಗಾಗಿ ಯೋಜನೆಗಳನ್ನು ಗುರುತಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಸಂಸ್ಥೆಯಾಗಿ 2009ರಲ್ಲಿ ಸ್ಥಾಪಿಸಲಾಗಿದ್ದು, ತದನಂತರ 29.07.2015ರಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ವಿವಿಧ ಸಾರ್ವಜನಿಕ ಕೇಂದ್ರಿತ ಅಭಿವೃದ್ಧಿ ಕಾಮಗಾರಿಗಳನ್ನು, ಇತರೆ ಅನುಷ್ಠಾನ ಇಲಾಖೆಗಳಾದ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ, ಲೋಕೋಪಯೋಗಿ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ, ನಿರ್ಮಿತಿ ಕೇಂದ್ರ ಮುಂತಾದ ಸರ್ಕಾರಿ ಅನುಷ್ಠಾನ ಸಂಸ್ಥೆಗಳ ಮುಖೇನ ಅನುಷ್ಠಾನಗೊಳಿಸಲು ಅವಕಾಶ ಕಲ್ಪಿಸುವುದೇ ಕರಾವಳಿ ಅಭಿವೃದ್ದಿ ಮಂಡಳಿಯ ಉದ್ದೇಶ.
ಕಳೆದ ಬಾರಿ ಸರ್ಕಾರದಿಂದ ಬಂದ ₹10.50 ಕೋಟಿ ಅನುದಾನವನ್ನು 19 ವಿಧಾನಸಭಾ ಕ್ಷೇತ್ರಗಳು ಮತ್ತು ಎರಡು ವಿಧಾನ ಪರಿಷತ್ ಸದಸ್ಯರ ಶಿಫಾರಸಿನಂತೆ ಸರಿಯಾಗಿ ವಿಂಗಡಿಸಿ, ಅಗತ್ಯ ಕಾಮಗಾರಿಗಳಿಗೆ ಮಂಜೂರು ಮಾಡುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಕರಾವಳಿಯ ಒಟ್ಟು 320 ಕಿಲೋಮೀಟರ್ ವಿಸ್ತೀರ್ಣದಲ್ಲಿ ಸಿಆರ್ಝಡ್ (CRZ) ನಿಯಮಗಳು ಅಭಿವೃದ್ಧಿಗೆ ಅಡಚಣೆ ಆಗುತ್ತಿರುವ ವಿಷಯವನ್ನು ಶಾಸಕರು ಸಭೆಯಲ್ಲಿ ಉಲ್ಲೇಖಿಸಿದರು. ಕೇರಳ ಮತ್ತು ಗೋವಾದಲ್ಲಿ CRZ ನಿಯಮಗಳಲ್ಲಿ ನೀಡಿರುವ ಸಡಿಲಿಕೆಯಂತೆ ಕರ್ನಾಟಕಕ್ಕೂ ಅವಕಾಶ ಕೊಡಬೇಕೆಂದು ಭಾರತ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಉಡುಪಿಯ ನಂದಿಕೂರು–ಬೆಳಪು ಪ್ರದೇಶದಲ್ಲಿ ಸರ್ಕಾರ ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಜಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕಾಗಿ ಪ್ರಸ್ತಾವನೆ ಬಂದಿದೆ. ಕ್ರಿಕೆಟ್ ಅಸೋಸಿಯೇಷನ್ನೊಂದಿಗೆ ಚರ್ಚಿಸಿ ಇದರ ಬಗ್ಗೆ ವಿವರವಾದ ಮಾಸ್ಟರ್ ಪ್ಲಾನ್ ರೂಪಿಸುವ ನಿರ್ಧಾರ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಕರಾವಳಿ ಅಭಿವೃದ್ದಿಯ ಭವಿಷ್ಯ ರೂಪಿಸಲು ಶೀಘ್ರದಲ್ಲೇ ತಜ್ಞರು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ಒಳಗೊಂಡ ಸೆಮಿನಾರ್ ಆಯೋಜನೆ ಮಾಡಲಾಗುವುದು. ಅಲ್ಲಿಂದ ಬರುವ ಅಭಿಪ್ರಾಯಗಳನ್ನು ಸಂಗ್ರಹಿಸಿ, ಒಂದೇ ಚಟುವಟಿಕೆಯಡಿ ಸಮಗ್ರ ಪ್ಲಾನ್ ಸಿದ್ಧಪಡಿಸಲಾಗುವುದು. ಜೊತೆಗೆ ಕರಾವಳಿಯ ಧಾರ್ಮಿಕ ಪ್ರವಾಸೋದ್ಯಮದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಹಲವಾರು ಕೇಂದ್ರೀಯ ಸ್ಥಳಗಳ ಅಭಿವೃದ್ಧಿ ಬಗ್ಗೆ ಸಭೆಯಲ್ಲಿ ಹೆಚ್ಚಿನ ಸಲಹೆಗಳು ಬಂದಿವೆ. ಅವುಗಳನ್ನು ಹೊಸ ಮಾಸ್ಟರ್ ಪ್ಲಾನಿನಲ್ಲಿ ಅನುಷ್ಟಾನಗೊಳಿಸಲಾಗುವುದು ಎಂದು ಹೇಳಿದರು.
ಸ್ಪೀಕರ್ ಯು.ಟಿ. ಖಾದರ್, ಶಾಸಕ ಆರ್.ವಿ. ದೇಶಪಾಂಡೆ, ಉ.ಕ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಸೇರಿದಂತೆ ಕರಾವಳಿ ಮೂಲದ ನಾಯಕರು ಈ ಸಮಿತಿಯಲ್ಲಿ ಇದ್ದು, ಕರಾವಳಿಯ ಸ್ಥಳೀಯ ಸಮಸ್ಯೆಗಳಿಗೆ ಪ್ರಾಮುಖ್ಯತೆ ನೀಡಲು ಇದು ಸಹಾಯಕವಾಗಲಿದೆ ಎಂದು ಅವರು ಹೇಳಿದರು.
ಈ ಹಿಂದೆ ಸರ್ಕಾರ ಈ ಪ್ರಾಧಿಕಾರಕ್ಕೆ ₹40 ಕೋಟಿ ಅನುದಾನ ಬಿಡುಗಡೆ ಮಾಡಿರುವ ದಾಖಲೆಗಳಿವೆ. ಮುಂದಿನ ದಿನಗಳಲ್ಲಿ ₹250 ಕೋಟಿಯ ಅಭಿವೃದ್ದಿ ಅನುದಾನ 19 ವಿಧಾನಸಭಾ ಕ್ಷೇತ್ರಗಳಿಗೆ ದೊರಕಲು ಮುಖ್ಯಮಂತ್ರಿಗಳಿಂದ ಅನುಮೋದನೆ ಪಡೆಯುವ ಬಗ್ಗೆ ಒತ್ತಾಯ ಮಾಡುವುದಾಗಿ ಹೇಳಿದರು.

ಕರಾವಳಿ ಪ್ರದೇಶಕ್ಕೆ ಸೇರಿದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಎಂಬ ಮೂರು ಜಿಲ್ಲೆಗಳ 19 ವಿಧಾನ ಸಭಾ ಕ್ಷೇತ್ರಗಳನ್ನೊಳಗೊಂಡಂತೆ ಮೊದಲ ಸಭೆಯನ್ನು ಉಡುಪಿಯಲ್ಲಿ ಏರ್ಪಡಿಸಲಾಗಿದ್ದರೂ ಹೆಚ್ಚಿನ ಶಾಸಕರು ಗೈರು ಹಾಜರಾಗಿದ್ದರು. ಕೇವಲ ಆರು ಮಂದಿ ಶಾಸಕರು ಮಾತ್ರ ಸಭೆಯಲ್ಲಿ ಭಾಗಿವಹಿಸುದ್ದರು. ದಕ್ಷಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನ ಸಭಾ ಕ್ಷೇತ್ರದ ಭಗೀರತಿ ಮುರಳ್ಯ, ಶಿರಸಿ ವಿಧಾನ ಸಭಾ ಕ್ಷೇತ್ರದ ಶಾಸಕ ಭೀಮಣ್ಣ ಟಿ ನಾಯ್ಕ್ ಉಳಿದಂತೆ ಉಡುಪಿ ಜಿಲ್ಲೆಯ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ಪಾಲ್ ಸುವರ್ಣ, ಕಾಪು ಶಾಸಕ ಗುರ್ಮಿ ಸುರೇಶ್ ಶೆಟ್ಟಿ, ಕಾರ್ಕಳ ಶಾಸಕ ಸುನೀಲ್ ಕುಮಾರ್, ಕುಂದಾಪುರ ಶಾಸಕ ಕಿರಣ್ ಕೂಡ್ಗಿ ಉಪಸ್ಥಿತರಿದ್ದರು.
ಜಿಲ್ಲೆಗೆ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣ, ವಿಮಾನ ನಿಲ್ದಾಣ ವಿಸ್ತರಣೆಗೆ ಸರ್ಕಾರಕ್ಕೆ ಪ್ರಸ್ತಾವನೆ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.
ಉಡುಪಿ ಜಿಲ್ಲೆಯಲ್ಲಿ ಕ್ರೀಡಾ ಮೂಲಸೌಕರ್ಯ ಮತ್ತು ವಿಮಾನ ನಿಲ್ದಾಣದ ವಿಸ್ತರಣೆ ಕುರಿತಾಗಿ ಸರ್ಕಾರಕ್ಕೆ ಸಮಗ್ರ ಪ್ರಸ್ತಾವನೆ ಸಲ್ಲಿಸಿರುವುದಾಗಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಉಡುಪಿಯಲ್ಲಿ ದೊಡ್ಡ ಮಟ್ಟದ ಕ್ರೀಡಾಂಗಣದ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಅಂತರಾಷ್ಟ್ರೀಯ ಮಟ್ಟದ ಸಮಗ್ರ ಕ್ರೀಡಾಂಗಣ ನಿರ್ಮಾಣಕ್ಕೆ ಭೂಮಿಯನ್ನೂ ಗುರುತಿಸಲಾಗಿದೆ ಎಂದು ಹೇಳಿದರು.
50 ಎಕರೆ ವ್ಯಾಪ್ತಿಯಲ್ಲಿ 30 ರಿಂದ 50 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ದೊಡ್ಡ ಕ್ರೀಡಾಂಗಣವನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಕೇವಲ ಕ್ರೀಡಾಂಗಣವಷ್ಟೇ ಅಲ್ಲ, ಹಲವು ವಿಭಾಗಗಳೊಡನೆ ಸಂಪೂರ್ಣ ಸ್ಪೋರ್ಟ್ ಕಾಂಪ್ಲೆಕ್ಸ್ ನಿರ್ಮಾಣ ಮಾಡುವ ದೀರ್ಘಾವಧಿಯ ಯೋಜನೆಯೂ ಇದೆ. ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದ ನಂತರ ನಿಖರವಾದ ಯೋಜನಾ ವಿವರಗಳ ಅಂತಿಮ ರೂಪ ಲಭ್ಯವಾಗಲಿದೆ ಎಂದರು.
ಮಂಗಳೂರಿನ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉಡುಪಿ ಕರಾವಳಿ ಪ್ರದೇಶ ಬಳಸಿಕೊಂಡಿದ್ದರೂ, ಅದರಲ್ಲಿ ದೊಡ್ಡ ವಿಮಾನಗಳ ಲ್ಯಾಂಡಿಂಗ್/ಟೇಕ್ ಆಫ್ಗೆ ಹಲವು ಸೀಮಿತತೆಗಳಿರುವುದರಿಂದ ಜನತೆಗೆ ತೊಂದರೆ ಉಂಟಾಗುತ್ತಿದೆ ಈ ಹಿನ್ನೆಲೆಯಲ್ಲಿ ಟರ್ಮಿನಲ್–2 ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಪ್ರತ್ಯೇಕ ಪ್ರಸ್ತಾವನೆ ಕಳುಹಿಸಲಾಗಿದೆ.
ಪ್ರಸ್ತಾವನೆ ಈಗಾಗಲೇ ಸರ್ಕಾರದ ಮುಂದೆ ಇದೆ. ಪಡುಬಿದ್ರಿ ಭಾಗದಲ್ಲಿ ಅಗತ್ಯವಿರುವ ಭೂಮಿ ಸರ್ಕಾರದ ಅಧೀನದಲ್ಲೇ ಇದ್ದುದರಿಂದ ಸರ್ಕಾರ ತೀರ್ಮಾನ ಕೈಗೊಂಡ ತಕ್ಷಣ ಕಾರ್ಯಗತಗೊಳಿಸಲು ಸಾಧ್ಯ ಎಂದು ಹೇಳಿದರು.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




