ಕರ್ನಾಟಕ ರಾಜ್ಯ ಸರ್ಕಾರವು “ಸರ್ವರಿಗೂ ಸಮಬಾಳು – ಸರ್ವರಿಗೂ ಸಮಪಾಲು” ಎಂಬ ಧ್ಯೇಯದಡಿ, ಅಂಚಿನಲ್ಲಿರುವ ಸಮುದಾಯಗಳ ಸಬಲೀಕರಣಕ್ಕಾಗಿ ಹಲವಾರು ನಿಗಮಗಳನ್ನು ಸ್ಥಾಪಿಸಿದೆ. ಅದೇ ರೀತಿಯಲ್ಲಿ, ಕ್ರಿಶ್ಚಿಯನ್ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಬಲವರ್ಧನೆಗಾಗಿ ಸ್ಥಾಪಿತವಾದ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ (KCCDC) ಇದೀಗ ತನ್ನ ಹೊಸ ಸಾಲ, ಸಹಾಯಧನ ಹಾಗೂ ಕಲ್ಯಾಣ ಯೋಜನೆಗಳು ಮತ್ತು ಅಧಿಕೃತ ವೆಬ್ ಪೋರ್ಟಲ್ ಅನ್ನು ಅಕ್ಟೋಬರ್ 17ರಂದು ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಕೆಎಂಡಿಸಿ ಭವನದಲ್ಲಿ ಲೋಕಾರ್ಪಣೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಯನ್ನು ಸಾಮಾಜಿಕ ನ್ಯಾಯದ ಭಾಗವನ್ನಾಗಿ ಪರಿಗಣಿಸಿದ್ದು, ನಿಗಮಕ್ಕೆ ₹250 ಕೋಟಿ ರೂ.ಗಳ ಅನುದಾನ ನೀಡಿದೆ.

ಇದಕ್ಕಿಂತ ಮೊದಲು ಕ್ರೈಸ್ತ ಅಭಿವೃದ್ಧಿ ಸಮಿತಿಯಾಗಿದ್ದ ಈ ಸಂಸ್ಥೆಯನ್ನು ಕ್ರೈಸ್ತ ನಿಗಮ ಸ್ಥಾಪನೆ ಮಾಡಲು ಸಮುದಾಯದ ನಾಯಕರಾದ ಕೆ ಜೆ ಜಾರ್ಜ್, ಐವನ್ ಡಿಸೋಜಾ, ಜೆ ಆರ್ ಲೋಬೊ, ಬೆಂಗಳೂರು ಮಹಾ ಧರ್ಮಾಧ್ಯಕ್ಷರು ಮತ್ತು ಅನೇಕ ನಾಯಕರುಗಳ ಪ್ರಯತ್ನದಿಂದ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಮತ್ತು ಅಲ್ಪಸಂಖ್ಯಾತ ಇಲಾಖೆ ಮಂತ್ರಿಗಳಾದ ಝಮೀರ್ ಅಹ್ಮದ್ ಖಾನ್ ಅವರ ಬೆಂಬಲದಿಂದ ಈ ನಿಗಮ ಪ್ರಾರಂಭವಾಗಿದೆ. ಕ್ರಿಶ್ಚಿಯನ್ ಸಮುದಾಯದ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣ. ಶಿಕ್ಷಣ ಮತ್ತು ಉದ್ಯೋಗಾವಕಾಶಗಳಲ್ಲಿ ಸಮಾನತೆ. ಮಹಿಳೆಯರು ಮತ್ತು ಯುವಕರಿಗೆ ಸ್ವಾವಲಂಬನೆ. ಕೌಶಲ್ಯಾಭಿವೃದ್ಧಿ ಮತ್ತು ಸಣ್ಣ ಉದ್ಯಮಗಳಿಗೆ ಉತ್ತೇಜನ ನೀಡುವುದೇ ಈ ನಿಗಮದ ಮುಖ್ಯ ಉದ್ದೇಶವಾಗಿದೆ.
ಈ ದಿನ ಈ ದಿನ.ಕಾಮ್ ಜೊತೆ ಮಾತನಾಡಿದ ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ, ಬಡವರ ಬಗ್ಗೆ ಕಾಳಜಿ ಹೊಂದಿರುವ ಸಿದ್ದರಾಮಯ್ಯನವರ ನೇತೃತ್ವದ ಪ್ರಸ್ತುತ ಸರ್ಕಾರವು ಕ್ರೈಸ್ತ ಸಮುದಾಯದ ಹಿತಕ್ಕಾಗಿ ಪ್ರಥಮ ಬಾರಿಗೆ ನಿಗಮವನ್ನು ಸ್ಥಾಪಿಸಿದ್ದು, ಇಡೀ ಕ್ರೈಸ್ತ ಸಮುದಾಯದ ಪರವಾಗಿ ನಾನು ಮುಖ್ಯಮಂತ್ರಿ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಕ್ರೈಸ್ತ ಸಮುದಾಯ ಅಭಿವೃದ್ಧಿ ನಿಗಮಕ್ಕಿಂತ ಮೊದಲು 2008-09ರಲ್ಲಿ ಯಡಿಯೂರಪ್ಪನವರ ನೇತೃತ್ವದ ಸರ್ಕಾರದಲ್ಲಿ ಸಮಿತಿಯಾಗಿ ಪ್ರಾರಂಭಗೊಂಡಿದ್ದು, ಆ ಕಾಲದಲ್ಲಿ 10 ಕೋಟಿಯ ಅನುಧಾನ ನೀಡಲಾಗಿತ್ತು. ಬಳಿಕ ಬಂದ ಎಲ್ಲಾ ಸರ್ಕಾರಗಳು ಆಯಾ ಸಮಯದಲ್ಲಿ ಅನುಧಾನವನ್ನು ನೀಡಿದ್ದರೂ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಮ್ಮ ನಾಯಕರುಗಳ ಒತ್ತಡದ ಹೊರತಾಗಿಯೂ ನಿಗಮ ಸ್ಥಾಪನೆ ಆಗಿರಲಿಲ್ಲ. ಆದರೆ ಈಗಿನ ಸಿದ್ದರಾಮಯ್ಯನವರ ಸರ್ಕಾರ ನುಡಿದಂತೆ ನಡೆದುಕೊಂಡು ಈ ನಿಗಮವನ್ನು ಸ್ಥಾಪಿಸಿರುವುದು ನಿಜವಾಗಿಯೂ ಶ್ಲಾಘನೀಯ. ಈ ಬಾರಿ 250 ಕೋಟಿಯ ಅನುಧಾನ ನೀಡಿರುವ ಉದ್ದೇಶವೆಂದರೆ ಸಮಾಜದ ಅಂಚಿನಲ್ಲಿರುವ ಬಡವರು, ಅಶಕ್ತರು, ಹಿಂದುಳಿದ ಕ್ರೈಸ್ತ ಕುಟುಂಬಗಳಿಗೆ ಕಲ್ಯಾಣದ ದಾರಿಯಾಗುವಂತಹ ಯೋಜನೆಗಳನ್ನು ಜಾರಿಗೊಳಿಸುವುದು. ಕ್ರೈಸ್ತ ಸಮುದಾಯದ ಎಲ್ಲಾ ಫಲಾನುಭವಿಗಳು ಇದರ ಪ್ರಯೋಜನ ಪಡೆಯಬೇಕೆಂದು ವಿನಂತಿಸುತ್ತೇನೆ ಎಂದು ಹೇಳಿದರು.

ಈ ದಿನ.ಕಾಮ್ ಜೊತೆ ಮಾತನಾಡಿದ ಸಾಮಾಜಿಕ ಹೋರಾಟಗಾರ್ತಿ ವಿರೋನಿಕಾ ಕರ್ನೇಲಿಯೋ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಇಲಾಖೆಯಲ್ಲಿಯೂ ಇಂತಹ ಹಲವು ಕಲ್ಯಾಣ ಯೋಜನೆಗಳಿವೆ. ಆದರೆ ಕ್ರೈಸ್ತ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆಯ ಮೂಲಕ ವಿಶೇಷವಾಗಿ ಕ್ರೈಸ್ತರ ಬಡ ಕುಟುಂಬಗಳಿಗೆ ಸಹಾಯ ದೊರಕುವಂತಾಗಿದೆ. ಕರಾವಳಿಯಷ್ಟೇ ಅಲ್ಲದೆ ರಾಜ್ಯದ ಇತರ ಭಾಗಗಳಲ್ಲೂ ಕ್ರೈಸ್ತರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಈ ನಿಗಮದ ಯೋಜನೆಗಳು ಅವರಿಗೆ ನಿಜವಾದ ಬದಲಾವಣೆಯ ಅವಕಾಶ ನೀಡಲಿವೆ. ಹಿಂದಿನ ಅಲ್ಪಸಂಖ್ಯಾತ ಇಲಾಖೆಯ ನಿಗಮದಲ್ಲಿ ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ತಲುಪದೆ ಇರುವ ಸ್ಥಿತಿ ಇತ್ತು. ಆದರೆ ಈಗಿನ ಕ್ರಮದಿಂದ ಕನಿಷ್ಠ ಕೆಲವರಿಗೆ ಸೌಲಭ್ಯ ತಲುಪುತ್ತದೆ. ಸರ್ಕಾರದ ಈ ನಿರ್ಧಾರ ಶ್ಲಾಘನೀಯ, ಎಲ್ಲಾ ಅರ್ಹರು ಇದರ ಪ್ರಯೋಜನ ಪಡೆಯುವಂತಾಗಲಿ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಸಾಲ ಹಾಗೂ ಸಹಾಯಧನ ಯೋಜನೆಗಳ ವಿವರ
ಅರಿವು ವಿದ್ಯಾಭ್ಯಾಸ ಸಾಲ ಯೋಜನೆ – CET ಮತ್ತು NEET ಉತ್ತೀರ್ಣ ವಿದ್ಯಾರ್ಥಿಗಳಿಗೆ ₹50,000 ರಿಂದ ₹5 ಲಕ್ಷವರೆಗೆ ಸಾಲ.
ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ -ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದವರಿಗೆ ₹20 ಲಕ್ಷವರೆಗೆ ಸಹಾಯ.
ಸ್ವಾಲಂಬಿ ಸಾರಥಿ ಯೋಜನೆ – ಟ್ಯಾಕ್ಸಿ, ಸರಕು ಸಾಗಣೆ ವಾಹನ ಅಥವಾ ಆಟೋ ಖರೀದಿಗೆ ₹75,000 ರಿಂದ ₹3 ಲಕ್ಷವರೆಗೆ ಸಹಾಯಧನ.
ಶ್ರಮಶಕ್ತಿ ಯೋಜನೆ – ಸಣ್ಣ ವ್ಯಾಪಾರ ಆರಂಭಿಸಲು ₹50,000 (₹25,000 ಸಾಲ + ₹25,000 ಸಹಾಯಧನ).
ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ – ವಿಧವೆಯರು, ವಿಚ್ಛೇದಿತರು, ವಿವಾಹವಾಗದ ಮಹಿಳೆಯರಿಗೆ ₹50,000 (ಸಾಲ + ಸಹಾಯಧನ).
ವೃತ್ತಿ ಪ್ರೋತ್ಸಾಹ ಯೋಜನೆ – ಚಿಲ್ಲರೆ ವ್ಯಾಪಾರ ಅಥವಾ ಸೇವಾ ಉದ್ಯಮಕ್ಕೆ ₹1 ಲಕ್ಷ (₹50,000 ಸಾಲ + ₹50,000 ಸಹಾಯಧನ).
ಗಂಗಾ ಕಲ್ಯಾಣ ಯೋಜನೆ – ಬೋರ್ವೆಲ್ ತೋಡುವುದು, ಪಂಪ್ ಅಳವಡಿಸುವುದು ಹಾಗೂ ವಿದ್ಯುತ್ ಸಂಪರ್ಕಕ್ಕೆ ₹3 ಲಕ್ಷದಿಂದ ₹4 ಲಕ್ಷವರೆಗೆ ಸಹಾಯಧನ.
ನೇರ ವ್ಯವಹಾರ ಸಾಲ ಯೋಜನೆ – ವ್ಯಾಪಾರ ಅಥವಾ ವಾಣಿಜ್ಯ ಚಟುವಟಿಕೆ ಪ್ರಾರಂಭಿಸಲು ₹20 ಲಕ್ಷವರೆಗೆ ಸಾಲ.
ಮಹಿಳಾ ಸ್ವಸಹಾಯ ಸಂಘಗಳ ಸಹಾಯಧನ ಯೋಜನೆ – ಸ್ವ ಉದ್ಯೋಗ ಚಟುವಟಿಕೆಗಳಿಗೆ 50% ಸಹಾಯಧನ (₹2 ಲಕ್ಷವರೆಗೆ).
ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳು – ನಿರುದ್ಯೋಗಿ ಯುವಕರಿಗೆ ವೃತ್ತಿಪರ ತರಬೇತಿ ಮತ್ತು ಉದ್ಯೋಗಾವಕಾಶ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




