ಭಾರತೀಯ ನೌಕಾಪಡೆಯ ಇತಿಹಾಸದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ‘ಕದಂಬ’ ನೌಕಾನೆಲೆಯು ಮತ್ತೊಂದು ಸುವರ್ಣ ಅಧ್ಯಾಯಕ್ಕೆ ಸಾಕ್ಷಿಯಾಗಿದೆ. ದೇಶದ ರಕ್ಷಣಾ ವಲಯದಲ್ಲಿ ‘ಆತ್ಮನಿರ್ಭರತೆ’ಯನ್ನು ಸಾರುವ ನಿಟ್ಟಿನಲ್ಲಿ, ಕಲ್ವರಿ ದರ್ಜೆಯ ಜಲಾಂತರ್ಗಾಮಿಗಳ (Submarines) ನಿರ್ವಹಣೆ ಮತ್ತು ದುರಸ್ತಿಗಾಗಿ ವಿಶೇಷ ಘಟಕವನ್ನು ಇಲ್ಲಿ ಆರಂಭಿಸಲಾಗಿದೆ.
ಇಲ್ಲಿಯವರೆಗೆ ಕಲ್ವರಿ ದರ್ಜೆಯ ಜಲಾಂತರ್ಗಾಮಿಗಳ ಅತ್ಯಾಧುನಿಕ ‘ನ್ಯೂಮ್ಯಾಟಿಕ್’ ಬಿಡಿಭಾಗಗಳ ಪರೀಕ್ಷೆ ಹಾಗೂ ದುರಸ್ತಿಗಾಗಿ ಭಾರತವು ಫ್ರಾನ್ಸ್ ದೇಶವನ್ನು ಅವಲಂಬಿಸಬೇಕಾಗಿತ್ತು. ಇದರಿಂದಾಗಿ ಸಮಯದ ವ್ಯಯದ ಜೊತೆಗೆ ಭಾರಿ ಪ್ರಮಾಣದ ಸಾಗಣೆ ವೆಚ್ಚವೂ ತಗುಲುತ್ತಿತ್ತು.
ಇದೀಗ ಕಾರವಾರದ ತಾಂತ್ರಿಕ ವರ್ಕ್ಶಾಪ್ನಲ್ಲಿ ವೈಸ್ ಅಡ್ಮಿರಲ್ ಬಿ. ಶಿವಕುಮಾರ್ ಅವರು ‘ನ್ಯೂಮ್ಯಾಟಿಕ್ ರ್ಯಾಮ್ ಟೆಸ್ಟ್ ಫೆಸಿಲಿಟಿ’ಯನ್ನು ಉದ್ಘಾಟಿಸುವುದರೊಂದಿಗೆ, ಈ ಎಲ್ಲಾ ಸವಾಲುಗಳಿಗೆ ಪರಿಹಾರ ಸಿಕ್ಕಂತಾಗಿದೆ.
ಈ ವಿಶೇಷ ತಾಂತ್ರಿಕ ಸೌಲಭ್ಯವನ್ನು ಹೊಂದಿರುವ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಗೆ ಈಗ ಭಾರತವೂ ಸೇರ್ಪಡೆಯಾಗಿದೆ. ಫ್ರಾನ್ಸ್ ಮತ್ತು ಬ್ರೆಜಿಲ್ ನಂತರ ಈ ಸುಧಾರಿತ ನಿರ್ವಹಣಾ ವ್ಯವಸ್ಥೆಯನ್ನು (MRO) ಹೊಂದಿರುವ ಜಗತ್ತಿನ ಮೂರನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಈ ಸುದ್ದಿ ಓದಿದ್ದೀರಾ ? ಶಿರಸಿ | ಬಾವಿಗೆ ಬಿದ್ದ ಎರಡು ವರ್ಷದ ಕಂದಮ್ಮನ ಜೀವ ಉಳಿಸಿದ ಪಯಾಜ್ (ಪಯ್ಯು) ಚೌಟಿ
ಈ ಕೇಂದ್ರವನ್ನು ‘ನೇವಲ್ ಗ್ರೂಪ್ ಇಂಡಿಯಾ’ ಮತ್ತು ಸ್ವದೇಶಿ ಸಂಸ್ಥೆಯಾದ ‘ಎಸ್ಇಸಿ ಇಂಡಸ್ಟ್ರೀಸ್’ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
ಏನಿದು ಕಲ್ವರಿ ಸಬ್ಮೆರಿನ್: ಫ್ರಾನ್ಸ್ನ ತಂತ್ರಜ್ಞಾನದ ನೆರವಿನೊಂದಿಗೆ ಮುಂಬೈನ ಮಜಗಾಂವ್ ಡಾಕ್ನಲ್ಲಿ ಇವುಗಳನ್ನು ನಿರ್ಮಿಸಲಾಗಿದೆ. ಶತ್ರುಗಳ ಕಣ್ಣಿಗೆ ಮಣ್ಣೆರಚಿ ಸಮುದ್ರದಾಳದಲ್ಲಿ ಅತ್ಯಂತ ಸದ್ದಿಲ್ಲದೆ ಚಲಿಸುವ ಸಾಮರ್ಥ್ಯ ಇವುಗಳಿಗಿದೆ.
ಇವು ಪ್ರಬಲ ಕ್ಷಿಪಣಿಗಳು ಮತ್ತು ಟಾರ್ಪಿಡೋಗಳನ್ನು ಹೊತ್ತೊಯ್ಯುವ ಶಕ್ತಿ ಹೊಂದಿವೆ. ಪ್ರಸ್ತುತ ಭಾರತೀಯ ನೌಕಾಪಡೆಯಲ್ಲಿ ಇಂತಹ 6 ಜಲಾಂತರ್ಗಾಮಿಗಳು ಕಾರ್ಯನಿರ್ವಹಿಸುತ್ತಿವೆ.
ಕಾರವಾರದ ಸೀಬರ್ಡ್ ನೌಕಾನೆಲೆಯ ಎರಡನೇ ಹಂತದ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಈ ಹೊಸ ನಿರ್ವಹಣಾ ಘಟಕವು ಕೇವಲ ನೌಕಾಪಡೆಯ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಸ್ಥಳೀಯವಾಗಿ ಬಿಡಿಭಾಗಗಳ ಉತ್ಪಾದನೆ ಮತ್ತು ತಾಂತ್ರಿಕ ಉದ್ಯೋಗ ಸೃಷ್ಟಿಗೆ ದೊಡ್ಡ ಮಟ್ಟದ ಅವಕಾಶಗಳನ್ನು ಕಲ್ಪಿಸಲಿದೆ.
ಮುಂದಿನ ದಿನಗಳಲ್ಲಿ ಕಾರವಾರವು ಜಲಾಂತರ್ಗಾಮಿ ನಿರ್ವಹಣೆಯ ಜಾಗತಿಕ ಕೇಂದ್ರವಾಗಿ (Centre of Excellence) ಗುರುತಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ.





