ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರೀತಿಯ ಹೆಸರಿನಲ್ಲಿ ಯುವಕನೊಬ್ಬ ನೀಡುತ್ತಿದ್ದ ಮಾನಸಿಕ ಕಿರುಕುಳ ಹಾಗೂ ಪ್ರಚೋದನೆಯಿಂದ ಬೇಸತ್ತ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರವಾರದ ಬಾಡಾದಲ್ಲಿ ನಡೆದಿದೆ.
ಈ ಪ್ರಕರಣದಲ್ಲಿ ಆಪಾದಿತನಾಗಿರುವ ಯುವಕ ಚಿರಾಗ್ ಕೊಠಾರಕರ್, ಜೆಡಿಎಸ್ ಪಕ್ಷದ ಜಿಲ್ಲಾ ಮುಖಂಡೆ ಚೈತ್ರಾ ಕೊಠಾರಕರ್ ಅವರ ಪುತ್ರ ಎಂದು ತಿಳಿದುಬಂದಿದೆ.
ಘಟನೆಯ ವಿವರ: ಕಾರವಾರದ ನಂದನಗದ್ದಾ ನಿವಾಸಿಯಾದ ಚಿರಾಗ್ ಚಂದ್ರಾಹಾಸ ಕೊಠಾರಕರ್ ಎಂಬಾತನೇ ಈ ಸಾವಿಗೆ ಕಾರಣ ಎಂದು ಮೃತ ಯುವತಿ ರಿಶೇಲ್ ಅವರ ಪೋಷಕರು ಪೊಲೀಸ್ ದೂರು ನೀಡಿದ್ದಾರೆ. ಆರೋಪಿಯು ರಿಶೇಲ್ ಕುಟುಂಬಕ್ಕೆ ಪರಿಚಯಸ್ಥನಾಗಿದ್ದು, ಪದೇ ಪದೇ ಆಕೆಗೆ ಫೋನ್ ಮಾಡಿ ಮಾತನಾಡುತ್ತಿದ್ದನು.
ಅಲ್ಲದೆ ಆಕೆಯ ಮನೆಯ ಸುತ್ತಮುತ್ತ ಸುಳಿಯುತ್ತಾ ತನ್ನನ್ನು ಪ್ರೀತಿಸುವಂತೆ ಕಾಡಿಸುತ್ತಿದ್ದ ಎನ್ನಲಾಗಿದೆ. ಆದರೆ, ರಿಶೇಲ್ ಆತನ ಪ್ರೀತಿಯ ಪ್ರಸ್ತಾಪವನ್ನು ಸ್ಪಷ್ಟವಾಗಿ ನಿರಾಕರಿಸಿದ್ದಳು.

ಇದರಿಂದ ಕೆರಳಿದ ಚಿರಾಗ್, ಆಕೆಗೆ ಮಾನಸಿಕವಾಗಿ ಹಿಂಸೆ ನೀಡಲು ಆರಂಭಿಸಿದ್ದನು. “ನೀನು ಬದುಕಿದ್ದು ಪ್ರಯೋಜನವಿಲ್ಲ, ನೀನು ಹೇಗಾದರೂ ಸತ್ತು ಹೋಗು, ನೀನು ಬದುಕಿರುವುದಕ್ಕಿಂತ ಸತ್ತರೆ ಒಳ್ಳೆಯದು” ಎಂದು ಪದೇ ಪದೇ ಹೀಯಾಳಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದ್ದನು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ದಾಂಡೇಲಿ | ಅಜಿತ್ ನಾಯ್ಕ ಹತ್ಯೆ ಕೇಸ್: ಪ್ರಮುಖ ಆರೋಪಿ ದೋಷಿ ಎಂದು ತೀರ್ಪು, ಜನೆವರಿ 13ರಂದು ಶಿಕ್ಷೆ ಪ್ರಮಾಣ ಪ್ರಕಟ
ಚಿರಾಗ್ ನೀಡುತ್ತಿದ್ದ ಈ ಸತತ ಕಿರುಕುಳ ಹಾಗೂ ಆತನ ಮಾತುಗಳಿಂದ ನೊಂದ ರಿಶೇಲ್, ದಿನಾಂಕ 09-01-2026ರಂದು ಮಧ್ಯಾಹ್ನ ಸುಮಾರು 2:30 ಗಂಟೆಗೆ ತನ್ನ ಮನೆಯ ಬೆಡ್ರೂಮಿನಲ್ಲಿ ಫ್ಯಾನಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಗಳ ಸಾವಿಗೆ ಚಿರಾಗ್ ನೀಡಿದ ದುಷ್ಪ್ರೇರಣೆಯೇ ನೇರ ಕಾರಣ ಎಂದು ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಪ್ರಭಾವಿ ರಾಜಕೀಯ ಮುಖಂಡೆಯ ಪುತ್ರ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಸ್ಥಳೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ





