ಕಾರವಾರ: ದಿನನಿತ್ಯದ ಉದ್ಯೋಗದ ಒತ್ತಡದಲ್ಲಿ ಕೇವಲ ಜೀವನ ಸಾಗಿಸುವುದಕ್ಕಿಂತ, ಪ್ರತಿ ದಿನ ಸಂಗೀತ ಕೇಳುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಆರೋಗ್ಯದ ಸಮಸ್ಯೆಗಳನ್ನು ಎದುರಿಸಲು ಮತ್ತು ದಣಿವನ್ನು ಮರೆಸಲು ಸಂಗೀತದಿಂದ ಸಾಧ್ಯ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಅವರು ಹೇಳಿದರು.
ಶುಕ್ರವಾರ ಕಾರವಾರದ ರವೀಂದ್ರನಾಥ್ ಠಾಗೋರ್ ಕಡಲತೀರದ ಮಯೂರ ವರ್ಮ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ‘ಕರಾವಳಿ ಉತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾವು ಕೂಡ ಪ್ರತಿದಿನ ಸಂಜೆ ಸಂಗೀತ ಕೇಳುವ ಹವ್ಯಾಸ ಹೊಂದಿರುವುದಾಗಿ ಈ ಸಂದರ್ಭದಲ್ಲಿ ಅವರು ಹಂಚಿಕೊಂಡರು.
ಸಂಗೀತದಷ್ಟೇ ಕ್ರೀಡೆಯೂ ಮುಖ್ಯ ಎಂದ ಅವರು, ಜೀವನವು ಸ್ಪರ್ಧಾತ್ಮಕವಾಗಿದ್ದು ಸೋಲು-ಗೆಲುವು ಸಹಜ. ಆದರೆ ಯಾವುದೇ ಕಾರಣಕ್ಕೂ ಜೀವನದಲ್ಲಿ ಗುರಿಯನ್ನು ಬಿಡಬಾರದು. ಮಾನವನಾಗಿ ಹುಟ್ಟಿದ ಮೇಲೆ ಮಾನವೀಯತೆಯಿಂದ ಬಾಳಬೇಕು. ಪ್ರತಿಯೊಬ್ಬರಿಗೂ ಕ್ರೀಡೆ, ಸಂಗೀತ ಮತ್ತು ಮನರಂಜನೆಯಲ್ಲಿ ಅಭಿರುಚಿ ಇರಬೇಕು.

ಆಧುನಿಕ ಕಾಲದಲ್ಲಿ ಜನರ ನಡುವೆ ಪ್ರೀತಿ, ವಿಶ್ವಾಸ ಮತ್ತು ನೆಮ್ಮದಿ ಕಡಿಮೆಯಾಗುತ್ತಿದ್ದು, ಇದನ್ನು ಸರಿದೂಗಿಸಲು ಇಂತಹ ಸಾಂಸ್ಕೃತಿಕ ಹವ್ಯಾಸಗಳು ಪೂರಕವಾಗಿವೆ ಎಂದು ತಿಳಿಸಿದರು. ಇದೇ ವೇಳೆ ಉತ್ಸವದ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟದ ಸ್ಪರ್ಧಾಳುಗಳಿಗೆ ಅವರು ಅಭಿನಂದನೆ ಸಲ್ಲಿಸಿದರು.
ಜಿಲ್ಲೆಯಲ್ಲಿ ಕರಾವಳಿ ಉತ್ಸವದ ಇತಿಹಾಸವನ್ನು ಸ್ಮರಿಸಿದ ಅವರು, 1992 ರಲ್ಲಿ ಮೊದಲ ಬಾರಿಗೆ ಈ ಉತ್ಸವ ಆರಂಭವಾಯಿತು. ಲಕ್ಷಾಂತರ ಜನರು ಭಾಗವಹಿಸುವ ಈ ಸಂಭ್ರಮವು ಮಧ್ಯದಲ್ಲಿ ಕೆಲವು ಕಾಲ ಸ್ಥಗಿತಗೊಂಡಿತ್ತು. ಆದರೆ ಈ ವರ್ಷ 18ನೇ ಕರಾವಳಿ ಉತ್ಸವವು ಸಚಿವರು, ಶಾಸಕರು, ಜಿಲ್ಲಾಡಳಿತದ ಅಧಿಕಾರಿಗಳು, ಕಲಾವಿದರು ಮತ್ತು ಸಾರ್ವಜನಿಕರ ಸಹಕಾರದಿಂದ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ-ಹಳಿಯಾಳದ ಮದ್ಯ-ಮಟ್ಕಾ ಅಡ್ಡೆಗಳ ಮೇಲೆ ಪೊಲೀಸ್ ದಾಳಿ; ಪಾಳಾ ಭಾಗದ ಮಟ್ಕಾ ದಂಧೆಗೆ ಬೀಳುತ್ತಾ ಬ್ರೇಕ್?
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಷ್ ಶಶಿ, ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಹಾಗೂ ತರಬೇತಿ ನಿರತ ಐಎಎಸ್ ಅಧಿಕಾರಿ ಝೂಪಿಷನ್ ಹಕ್ ಉಪಸ್ಥಿತರಿದ್ದರು. ಅಲ್ಲದೆ ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ಎನ್. ವಾಸರೆ, ತಾಲೂಕು ಅಧ್ಯಕ್ಷ ರಾಮ ನಾಯ್ಕ ಸೇರಿದಂತೆ ಜಿಲ್ಲೆಯ ಸಾಹಿತಿಗಳು ಮತ್ತು ಕಲಾವಿದರು ಭಾಗವಹಿಸಿದ್ದರು.





