ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಯುವತಿ ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣಕ್ಕೆ ಈಗ ಮಹತ್ವದ ತಿರುವು ಸಿಕ್ಕಿದೆ. ಕಾರವಾರದ ಜೆಡಿಎಸ್ ನಾಯಕಿ ಚೈತ್ರಾ ಅವರ ಪುತ್ರ ಚಿರಾಗ್ ನೀಡಿದ ಮಾನಸಿಕ ಕಿರುಕುಳವೇ ಈ ಸಾವಿಗೆ ಕಾರಣ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತೆ, ಮೃತ ಯುವತಿ ಮತ್ತು ಆರೋಪಿ ನಡುವಿನ ವಾಟ್ಸಾಪ್ ಸಂಭಾಷಣೆಯ ವಿವರಗಳು ಈಗ ಹೊರಬಂದಿವೆ.
ಮೃತ ರಿಶೇಲ್ ಹಾಗೂ ಚಿರಾಗ್ ನಡುವಿನ ಚಾಟಿಂಗ್ ಮತ್ತು ವಿಡಿಯೋ ಕಾಲ್ ಮಾಹಿತಿಯನ್ನು ಬಹಿರಂಗಪಡಿಸಿವೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ರಿಶೇಲ್ ಆತನಿಗೆ ವಿಡಿಯೋ ಕಾಲ್ ಮಾಡಿದ್ದಳು ಎನ್ನಲಾಗಿದ್ದು, ವಾಟ್ಸಾಪ್ ಚಾಟ್ನಲ್ಲಿ ಚಿರಾಗ್ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಕಂಡುಬಂದಿದೆ.
“ನೀನು ಹೀಗೆ ಮಾತನಾಡಿದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ರಿಶೇಲ್ ಮುನ್ಸೂಚನೆ ನೀಡಿದ್ದರೂ, ಆರೋಪಿ ಅದನ್ನು ಗಂಭೀರವಾಗಿ ಪರಿಗಣಿಸದೆ ಕಿರುಕುಳ ಮುಂದುವರಿಸಿದ್ದ ಎನ್ನಲಾಗಿದೆ.
ಈ ಕುರಿತು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕ್ಯಾಥೋಲಿಕ ಧರ್ಮಪ್ರಾಂತ್ಯದ ಮಹಿಳಾ ಘಟಕದ ಅಧ್ಯಕ್ಷೆ ಮೊಬೆಲ್ ಪಿಂಟೋ, “ತಂದೆ-ತಾಯಿಯ ರಾಜಕೀಯ ಪ್ರಭಾವ ಬಳಸಿ ಚಿರಾಗ್ ಯುವತಿಗೆ ಸಂಕಷ್ಟ ತಂದೊಡ್ಡಿದ್ದಾನೆ. ರಿಶೇಲ್ ಶವ ಪತ್ತೆಯಾದಾಗ ಕಿವಿಯಲ್ಲಿ ಇಯರ್ ಫೋನ್ ಇತ್ತು ಮತ್ತು ಮೊಬೈಲ್ ಕೆಳಗೆ ಬಿದ್ದಿತ್ತು.
ಅಂದರೆ ಆಕೆ ಆತನೊಂದಿಗೆ ಮಾತನಾಡುತ್ತಲೇ ಪ್ರಾಣ ಕಳೆದುಕೊಂಡಿದ್ದಾಳೆ. ಅಲ್ಲದೆ, ಆಕೆಯ ದೇಹದ ಮೇಲೆ ಗಾಯದ ಗುರುತುಗಳಿದ್ದು, ಪೊಲೀಸರು ಇದರ ಬಗ್ಗೆ ಸೂಕ್ಷ್ಮ ತನಿಖೆ ನಡೆಸಬೇಕು,” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ತಹಶೀಲ್ದಾರ್ಗಳ ಹೆಗಲಿಗೆ ಉಪವಿಭಾಗಗಳ ಹೊಣೆ; ಖಾಯಂ ಅಧಿಕಾರಿಗಳ ಕೊರತೆಯಿಂದ ಅಭಿವೃದ್ಧಿಗೆ ಅಡ್ಡಿ
ಪ್ರಕರಣ ನಡೆದು ಹಲವು ದಿನಗಳಾದರೂ ಪೊಲೀಸರು ಈವರೆಗೆ ಆರೋಪಿಯನ್ನು ಬಂಧಿಸಿಲ್ಲ ಅಥವಾ ಆತನ ಮೊಬೈಲ್ ವಶಪಡಿಸಿಕೊಂಡಿಲ್ಲ ಎಂದು ಮುಖಂಡರಾದ ಲಿಯೋ ಲಿವಿಸ್ ಮತ್ತು ಫ್ರೆಂಕಿ ಗುಡಿನೋ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಆತ್ಮಹತ್ಯೆಗೂ ಮುನ್ನ ರಿಶೇಲ್ ತರಗತಿಗಳಿಗೆ ಹಾಜರಾಗದೆ ಮಾನಸಿಕ ಒತ್ತಡದಲ್ಲಿದ್ದಳು.
ರಾಜಕೀಯ ಒತ್ತಡಕ್ಕೆ ಮಣಿಯದೆ ಪೊಲೀಸರು ತನಿಖೆ ನಡೆಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು,” ಎಂದು ಅವರು ಎಚ್ಚರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಸ್ಯಾಮ್ಸನ್ ಡಿಸೋಜಾ, ಕ್ಲೆಮೆಟ್ ಗುಡಿನೋ ಸೇರಿದಂತೆ ಹಲವರು ಉಪಸ್ಥಿತರಿದ್ದರು.





