ಕಾರವಾರ: ನಗರದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧೀನದಲ್ಲಿರುವ ಸರಕಾರಿ ಬಾಲಕಿಯರ ಬಾಲಮಂದಿರದಲ್ಲಿ ಶನಿವಾರ ಮಧ್ಯಾಹ್ನ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ತೀವ್ರವಾಗಿ ಅಸ್ವಸ್ಥಗೊಂಡಿರುವ ಬಾಲಕಿಯನ್ನು ಕಾರವಾರದ ಕ್ರಿಮ್ಸ್ (KIMS) ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ (SICU) ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಶನಿವಾರ ಮಧ್ಯಾಹ್ನ ಸುಮಾರು 1 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಯಾರಿಗೂ ತಿಳಿಯದಂತೆ ಬಾಲಮಂದಿರದ ಮೇಲಿನ ಮಹಡಿಯ ಕೊಠಡಿಗೆ ತೆರಳಿದ ಬಾಲಕಿ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾಳೆ. ಈ ವೇಳೆ ಸಿಬ್ಬಂದಿಯ ಸಮಯೋಚಿತ ಗಮನದಿಂದಾಗಿ ಆಕೆಯನ್ನು ತಕ್ಷಣವೇ ಕೆಳಗಿಳಿಸಿ ರಕ್ಷಣೆ ಮಾಡಲಾಗಿದ್ದು, ವಿಳಂಬ ಮಾಡದೆ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ಈ ಬಾಲಕಿಯು ನಗರದ ಸರಕಾರಿ ಪ್ರೌಢಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಕಳೆದ ಆಗಸ್ಟ್ ತಿಂಗಳಲ್ಲಿ ನಡೆದ ಪೋಕ್ಸೋ ಪ್ರಕರಣವೊಂದರಲ್ಲಿ ಈಕೆ ಸಂತ್ರಸ್ತೆಯಾಗಿದ್ದಳು ಎಂದು ತಿಳಿದುಬಂದಿದೆ.
ಸಂತ್ರಸ್ತೆಯಾದ ದಿನದಿಂದಲೂ ಮಾನಸಿಕವಾಗಿ ತೀವ್ರ ಕುಗ್ಗಿದ್ದ ಬಾಲಕಿ, ಕಳೆದ ಎರಡು ವಾರಗಳಿಂದ ಶಾಲೆಗೆ ಹಾಜರಾಗದೆ ಬಾಲಮಂದಿರದಲ್ಲಿಯೇ ಉಳಿದುಕೊಂಡಿದ್ದಳು. ಘಟನೆಯ ಹಿನ್ನೆಲೆಯನ್ನು ವಿವರಿಸಿದ ಅಧಿಕಾರಿಗಳು, ಬಾಲಕಿ ಆಗಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಾ ಮಾನಸಿಕ ಆಘಾತದಿಂದ ವರ್ತಿಸುತ್ತಿದ್ದಳು.
ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | ಸತೀಶ್ ಸೈಲ್ಗೆ ಮತ್ತೆ ವೈದ್ಯಕೀಯ ಜಾಮೀನು ಮಂಜೂರು: ಲಿವರ್ ಕಸಿ ಶಸ್ತ್ರಚಿಕಿತ್ಸೆಗೆ ಹೈಕೋರ್ಟ್ ಅನುಮತಿ
ಈ ಹಿನ್ನೆಲೆಯಲ್ಲಿ ಆಕೆಯನ್ನು ಇತ್ತೀಚೆಗೆ ಧಾರವಾಡದ ಮಾನಸಿಕ ಆರೋಗ್ಯ ಸಂಸ್ಥೆಗೆ (DIMHANS) ಕರೆದೊಯ್ದು ತಜ್ಞರಿಂದ ಚಿಕಿತ್ಸೆ ಕೊಡಿಸಲಾಗಿತ್ತು. ಆದರೂ ಕೂಡ ಬಾಲಕಿಯ ನಡವಳಿಕೆಯಲ್ಲಿ ಸುಧಾರಣೆ ಕಂಡುಬಂದಿರಲಿಲ್ಲ ಎಂದು ತಿಳಿಸಿದ್ದಾರೆ.
ಪ್ರಸ್ತುತ ಈ ಬಾಲಮಂದಿರದಲ್ಲಿ ವಿವಿಧ ಪ್ರಕರಣಗಳಲ್ಲಿ ಸಂತ್ರಸ್ತರಾದ ಸುಮಾರು 20 ಬಾಲಕಿಯರು ಆಶ್ರಯ ಪಡೆದಿದ್ದು, ಅವರ ರಕ್ಷಣೆಗಾಗಿ 10 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟೊಂದು ಸಂಖ್ಯೆಯ ಸಿಬ್ಬಂದಿ ಇದ್ದರೂ ಇಂತಹ ಘಟನೆ ನಡೆದಿರುವುದು ಬಾಲಮಂದಿರದ ಮೇಲ್ವಿಚಾರಣೆ ಹಾಗೂ ಅಲ್ಲಿನ ಮಾನಸಿಕ ಆರೋಗ್ಯ ಆರೈಕೆಯ ವ್ಯವಸ್ಥೆಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗೆ ಕಾರಣವಾಗಿದೆ.
ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.





