ಕಾರವಾರ: ಸಾವಿರಾರು ಮೈಲು ದೂರದ ಮಂಜುಗಡ್ಡೆ ಪ್ರದೇಶದಿಂದ ವಲಸೆ ಬಂದಿದ್ದ ಅಪರೂಪದ ‘ಹ್ಯೂಗ್ಲಿನ್ ಸೀಗಲ್’ ಹಕ್ಕಿಯ ಪ್ರಯಾಣ ಕಾರವಾರದ ಕಡಲತೀರದಲ್ಲಿ ದುರಂತ ಅಂತ್ಯ ಕಂಡಿದೆ. ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಈ ಹಕ್ಕಿಗೆ ಚಿಕಿತ್ಸೆ ನೀಡಲಾಯಿತಾದರೂ, ಅದು ಫಲಿಸದೇ ಗುರುವಾರ ರಾತ್ರಿ ಮೃತಪಟ್ಟಿದೆ
ಘಟನೆಯ ಹಿನ್ನೆಲೆ: ಕೆಲ ದಿನಗಳ ಹಿಂದೆ ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದ ಸಮೀಪವಿರುವ ತಿಮ್ಮಕ್ಕ ಗಾರ್ಡನ್ ಬಳಿ ಈ ಪಕ್ಷಿ ಅಶಕ್ತವಾಗಿ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದರು. ಅದರ ಬೆನ್ನಿನ ಮೇಲೆ ವಿಚಿತ್ರವಾದ ಉಪಕರಣ ಇರುವುದನ್ನು ಕಂಡು ಕುತೂಹಲಗೊಂಡ ಸಾರ್ವಜನಿಕರು ತಕ್ಷಣ ಅರಣ್ಯ ಇಲಾಖೆಯ ಮರೈನ್ ವಿಭಾಗಕ್ಕೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಪಕ್ಷಿಯನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ, ಅದು ಸಂಶೋಧನೆಗಾಗಿ ಬಳಸಲಾದ ಜಿಪಿಎಸ್ ಟ್ರ್ಯಾಕರ್ ಎಂದು ತಿಳಿದುಬಂದಿದೆ. ಶ್ರೀಲಂಕಾದ ವನ್ಯಜೀವಿ ಸಂಶೋಧನಾ ಮಂಡಳಿಯು ಚೈನೀಸ್ ಅಕಾಡೆಮಿ ಆಫ್ ಸೈನ್ಸ್ ಸಹಯೋಗದೊಂದಿಗೆ ಕಳೆದ ಮಾರ್ಚ್ನಲ್ಲಿ ಈ ಹಕ್ಕಿಗೆ ಜಿಪಿಎಸ್ ಅಳವಡಿಸಿತ್ತು. ಪಕ್ಷಿಗಳ ವಲಸೆ ಹಾದಿ, ಹವಾಮಾನ ಮತ್ತು ಆಹಾರದ ಕ್ರಮಗಳನ್ನು ಅಧ್ಯಯನ ಮಾಡಲು ಈ ಪ್ರಯೋಗ ನಡೆಸಲಾಗುವುದು ಎಂದು ತಿಳಿದುಬಂದಿದೆ.
ಶ್ರೀಲಂಕಾದಿಂದ ಸೈಬೀರಿಯಾಕ್ಕೆ ತೆರಳಿ, ಅಲ್ಲಿ ಆರ್ಕ್ಟಿಕ್ ಪ್ರದೇಶದಲ್ಲಿ ಸಂತಾನೋತ್ಪತ್ತಿ ಮುಗಿಸಿ ಪುನಃ ಶ್ರೀಲಂಕಾಗೆ ಮರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ತೀವ್ರವಾಗಿ ಗಾಯಗೊಂಡಿದ್ದ ಈ ಹಕ್ಕಿಯನ್ನು ಕೂಡಲೇ ದಾಂಡೇಲಿಯ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿನ ತಜ್ಞ ವೈದ್ಯರು ಹಕ್ಕಿಯ ಜೀವ ಉಳಿಸಲು ಸತತ ಪ್ರಯತ್ನ ನಡೆಸಿದರೂ, ಗಾಯದ ತೀವ್ರತೆಯಿಂದಾಗಿ ಅದು ಆಹಾರ ಸೇವಿಸಲು ಸಾಧ್ಯವಾಗದೆ ಗುರುವಾರ ರಾತ್ರಿ ಕೊನೆಯುಸಿರೆಳೆದಿದೆ.
ಈ ಸುದ್ದಿ ಓದಿದ್ದೀರಾ ? ಮುಂಡಗೋಡ | ತಾಲೂಕಿನಾದ್ಯಂತ ಸಕ್ರಿಯಗೊಂಡ ಇಟ್ಟಿಗೆ ಭಟ್ಟಿಗಳು: ಅರಣ್ಯ–ಪರಿಸರದ ಮೇಲೆ ಹೆಚ್ಚಿದ ಒತ್ತಡ
ಮರಣೋತ್ತರ ಪರೀಕ್ಷೆಯಲ್ಲಿ ಹಕ್ಕಿಯು ಗಾಯದ ನೋವು ಹಾಗೂ ಹಸಿವಿನಿಂದ ಬಳಲಿ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಹಕ್ಕಿಯ ಬೆನ್ನಿನಲ್ಲಿದ್ದ ಜಿಪಿಎಸ್ ಉಪಕರಣವನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದ್ದು, ಮುಂದಿನ ಪ್ರಕ್ರಿಯೆ ಕೈಗೊಳ್ಳಲಿದೆ.





