ಕಾರವಾರ: ಜಿಲ್ಲಾ ಕಾರಾಗೃಹದ ಮೇಲೆ ಮಂಗಳವಾರ (ನ. 18) ಮುಂಜಾನೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ಕೈದಿಯೊಬ್ಬನ ಬಳಿ ಮೊಬೈಲ್ ಫೋನ್ ಹಾಗೂ ಒಂದು ಬ್ಯಾರಕ್ನಲ್ಲಿ ಬೀಡಿ, ಲೈಟರ್ ಸೇರಿದಂತೆ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ರಚಿಸಲಾದ ವಿಶೇಷ ತಂಡದ ಉಸ್ತುವಾರಿ ವಹಿಸಿದ್ದ ಕಾರವಾರ ಸಂಚಾರ ಠಾಣೆಯ ಪಿಎಸ್ಐ ಶ್ರೀಕಾಂತ್ ರಾಠೋಡ್ ಅವರು ಜಿಲ್ಲಾ ಕಾರಾಗೃಹ ಕಾರವಾರದ ಜೈಲಿನ ಮೇಲೆ ದಾಳಿ ಮಾಡಿ ಅನೇಕ ವಸ್ತುಗಳನ್ನು ವಶಪಡಿಸಿಕೊಂಡು ಮೇಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ.
ಸಿಕ್ಕಿದ್ದೇನು? ಜೈಲಿನ ಒಳ ಸೆಲ್ ಬ್ಯಾರಕ್ನ 8ನೇ ಸೆಲ್ನಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕೋಟೆಕಾರ್ ನಿವಾಸಿ, ವಿಚಾರಣಾಧೀನ ಕೈದಿ ಮೊಹಮ್ಮದ್ ನೌಫಲ್ (32) ಎಂಬಾತನ ಬಳಿ ನಿಷೇಧಿತ ಕೀಪ್ಯಾಡ್ ಮೊಬೈಲ್ ಫೋನ್ ಪತ್ತೆಯಾಗಿದೆ.ಅಲ್ಲದೆ, ಇದೇ ಬ್ಯಾರಕ್ನ 9ನೇ ಸೆಲ್ನಲ್ಲಿ ತಪಾಸಣೆ ನಡೆಸಿದಾಗ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಒಂದರಲ್ಲಿ 1 ಬೀಡಿ ಪ್ಯಾಕೆಟ್, 1 ಬೆಂಕಿಪೊಟ್ಟಣ, 1 ಹಳದಿ ಬಣ್ಣದ ಲೈಟರ್ ಹಾಗೂ ಒಣಗಿದ ಸೊಪ್ಪಿನ ಪುಡಿ ತರ ಕಾಣುವ ಸಂಶಯಾಸ್ಪದ ವಸ್ತು ತುಂಬಿದ್ದ 3 ಚಿಕ್ಕ ಪೇಪರ್ ಪ್ಯಾಕೆಟ್ಗಳು ಪತ್ತೆಯಾಗಿವೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ವಾರು ಮೀಸಲಾತಿಗೆ ಜಿಲ್ಲೆಯಾದ್ಯಂತ 116 ಆಕ್ಷೇಪಣೆ ಅರ್ಜಿಗಳು ಸಲ್ಲಿಕೆ
ಈ ಸಂಬಂಧ ಪಿಎಸ್ಐ ಶ್ರೀಕಾಂತ್ ರಾಠೋಡ್ ಅವರು ನೀಡಿದ ವರದಿಯ ಆಧಾರದ ಮೇಲೆ, ಕಾರವಾರ ಉಪ ವಿಭಾಗದ ಡಿವೈಎಸ್ಪಿ ಎಸ್.ವಿ. ಗಿರೀಶ್ ಅವರು ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಕರ್ನಾಟಕ ಕಾರಾಗೃಹ ತಿದ್ದುಪಡಿ ನಿಯಮಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ತಿಳಿದುಬಂದಿದೆ.





