ಕಾರವಾರ: ನಗರದ ಬಾಡದ ಶಿವಾಜಿ ಶಿಕ್ಷಣ ಸಂಸ್ಥೆಯ ದಿ. ಶಂಕರ ಬಾಬಿ ಸಾವಂತ ಸಭಾಭವನದಲ್ಲಿ ಫೆಬ್ರವರಿ 21ರಂದು ಕಾರವಾರ ತಾಲೂಕು ಮಟ್ಟದ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ತಾಲೂಕು ಘಟಕದ ಅಧ್ಯಕ್ಷ ರಾಮಾ ಎನ್. ನಾಯ್ಕ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಶಾಸಕ ಸತೀಶ ಸೈಲ್, ಅಧ್ಯಕ್ಷರಾಗಿ ತಹಸೀಲ್ದಾರ ನಿಶ್ಚಲ ನರೋನಾ, ಉಪಾಧ್ಯಕ್ಷರಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಎನ್. ನಾಯ್ಕ ಹಾಗೂ ಕಾರ್ಯಾಧ್ಯಕ್ಷರಾಗಿ ಮಾಧವ ಬಿ. ನಾಯಕ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಸಮ್ಮೇಳನಾಧ್ಯಕ್ಷರಾಗಿ ಬುಡಕಟ್ಟು ಸಮುದಾಯದ ಖ್ಯಾತ ಸಾಹಿತಿ, ರಂಗಭೂಮಿ ಹಾಗೂ ಯಕ್ಷಗಾನ ಕಲಾವಿದ ಜಿ.ಡಿ. ಗೋವಿಂದಕುಮಾರ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ಬೆಳಿಗ್ಗೆ 8 ಗಂಟೆಗೆ ನಡೆಯುವ ರಾಷ್ಟ್ರಧ್ವಜಾರೋಹಣವನ್ನು ತಹಸೀಲ್ದಾರ ನಿಶ್ಚಲ ನರೋನಾ ನೆರವೇರಿಸಲಿದ್ದು, ಪರಿಷತ್ತಿನ ಧ್ವಜಾರೋಹಣವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಹಾಗೂ ನಾಡ ಧ್ವಜಾರೋಹಣವನ್ನು ತಾಲೂಕು ಅಧ್ಯಕ್ಷರು ನೆರವೇರಿಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಹೆಚ್ಚಲಿದೆ ಬಿಸಿಲ ಧಗೆ: ಸಾರ್ವಜನಿಕರಿಗೆ ಜಿಲ್ಲಾಡಳಿತದಿಂದ ಹೈ-ಅಲರ್ಟ್ ಹಾಗೂ ಮುನ್ನೆಚ್ಚರಿಕೆ
ಬಳಿಕ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಎನ್. ನಾಯ್ಕ ಚಾಲನೆ ನೀಡಲಿದ್ದಾರೆ. ನಂತರ ನಡೆಯುವ ಸಮಾರಂಭದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಪ್ರೇಮಾ ಟಿ.ಎಂ.ಆರ್. ಧ್ವಜ ಹಸ್ತಾಂತರ ಮಾಡಲಿದ್ದಾರೆ ಎಂದು ತಿಳಿಸಿದರು.
ಹಿರಿಯ ಕಲಾವಿದ ಡಾ. ಆರ್.ಜಿ. ಗುಂದಿ ಅಧ್ಯಕ್ಷತೆಯಲ್ಲಿ “ರಂಗಭೂಮಿ ಮತ್ತು ಕಾರವಾರ” ವಿಷಯದ ವಿಚಾರಗೋಷ್ಠಿ ನಡೆಯಲಿದೆ. ನಾಗೇಶ ಅಣೇಕರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದ್ದು, ಕನ್ನಡ, ಹಿಂದಿ ಹಾಗೂ ಕೊಂಕಣಿ ಭಾಷೆಯ ಕವಿಗಳು ಭಾಗವಹಿಸಲಿದ್ದಾರೆ.
ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ ಎಂದು ಮಾಹಿತಿ ನೀಡಿದರು. ಕಾರ್ಯಾಧ್ಯಕ್ಷ ಮಾಧವ ನಾಯಕ ಮಾತನಾಡಿ, ಸಮ್ಮೇಳನಕ್ಕೆ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ. ಮಿತ್ರ ಸಮಾಜ ಮೈದಾನದಿಂದ ಆರಂಭವಾಗುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ 500 ಮೀಟರ್ ಉದ್ದದ ಕನ್ನಡ ಧ್ವಜ ಮೆರವಣಿಗೆಯೂ ಇರಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಸಾಪದ ಬಾಬು ಶೇಖ್, ಜೆ.ಡಿ. ಮನೋಜೆ, ಕೈರೂನಿಸಾ ಶೇಖ್, ಮಹಾದೇವ ರಾಣೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.





