ಬೀದರ್ ನಗರದ ಹೊರಲವಲಯದಲ್ಲಿರುವ ಬೀದರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಹಾಗೂ ಶರಣ ಸಾಹಿತ್ಯ ಗ್ರಂಥಾಲಯದಲ್ಲಿ ಪ್ರಾಧ್ಯಾಪಕರಾದ ಮೀನಾಕ್ಷಿ ಪ್ರಭು ಬಿರಾದಾರ ಹಾಗೂ ಡಾ.ಭೀಮಾಶಂಕರ ಬಿರಾದಾರ ಅವರು ಸಂಪಾದಿಸಿದ ‘ಕೀರ್ತನೆಗಳ ಸಂಗ್ರಹ’ ಬೀದರ ವಿಶ್ವವಿದ್ಯಾಲಯದ ಬಿ.ಎ.ತೃತೀಯ ಸಾಮಾನ್ಯ ಕನ್ನಡ ಪಠ್ಯ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಬೀದರ್ ವಿವಿ ಕುಲಪತಿ ಪ್ರೊ ಬಿ.ಎಸ್.ಬಿರಾದಾರ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ʼಜಗತ್ತನ್ನು ಸೂಕ್ಷ್ಮವಾಗಿ ಗ್ರಹಿಸಲು ಸಾಹಿತ್ಯ ಕೃತಿಗಳು ಅಗತ್ಯ. ಕನ್ನಡ ಸೃಜನಶೀಲ ಮತ್ತು ವಿಮರ್ಶಾ ಕೃತಿಗಳು ಲೋಕ ವಿಮರ್ಶೆ ಹೆಚ್ಚು ಬೌದ್ಧಿಕ, ವೈಚಾರಿಕ ನೆಲೆಯಲ್ಲಿ ಮಾಡಿವೆ. ಸಾಹಿತ್ಯ ಮನುಷ್ಯನನ್ನು ಆಳದ ಶೋಧನೆಗೆ ಹಚ್ಚುತ್ತವೆʼ ಎಂದರು.
ʼವಚನ, ಕೀರ್ತನೆ ಮತ್ತು ತತ್ವಪದಗಳು ಈ ನೆಲದ ಅನುಭಾವಿಕ ಸತ್ವವನ್ನು, ಬದುಕಿನ ಶೋಧನೆಯನ್ನು ಕಟ್ಟಿಕೊಟ್ಟಿವೆ. ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅಸ್ಮಿತೆಯನ್ನು ರೂಪಿಸಿವೆ. ಪ್ರಸ್ತುತ ‘ಕೀರ್ತನೆಗಳ ಸಂಗ್ರಹ’ ಕೃತಿ ಅನುಭಾವಿಕ ಮತ್ತು ಸಾಮಾಜಿಕ ಬದುಕಿನ ಅಂತಃಸತ್ವವನ್ನು ಸಾರುತ್ತದೆʼ ಎಂದರು.
ಬೀದರ್ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಪರಮೇಶ್ವರ ನಾಯಕ ಮಾತನಾಡಿ, ʼನಿರಂತರ ಅಧ್ಯಯನ, ಸಂಶೋಧನೆ ಮತ್ತು ವಿಮರ್ಶೆಯಿಂದ ಹೊಸ ತಿಳುವಳಿಕೆ ಮೂಡುತ್ತದೆ. ಈ ಮೂರು ಸಂಗತಿಗಳು ಶೈಕ್ಷಣಿಕ ವಲಯಗಳ ಬೆಳವಣಿಗೆ ನಿರ್ಧರಿಸುತ್ತವೆ. ಕೀರ್ತನೆಗಳ ಸಂಗ್ರಹ ಪಠ್ಯ ಪುಸ್ತಕ ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯ ಪರಂಪರೆಯ ಅರಿವಿಗೆ ದಾರಿಯಾಗಿದೆʼ ಎಂದರು.
ʼಸಂಶೋಧನಾತ್ಮಕ ಓದಿನಿಂದ ತಾರ್ಕಿಕ ಆಲೋಚನೆ, ವೈಚಾರಿಕ ನೆಲೆಯ ಅನುಸಂಧಾನ ಸಾಧ್ಯ. ಪದವಿ ಹಂತದಲ್ಲಿಯೇ ಸಂಶೋಧನಾ ಪ್ರಬಂಧದ ಓದು ಅಗತ್ಯ. ಪ್ರಸ್ತುತ ಪಠ್ಯ ಕೀರ್ತನಕಾರರ ರಚನೆ ಓದಿಗೆ ದಾರಿಯಾಗಿ ನಾಡಿನ ಹಿರಿಯ ಬರಹಗಾರರಾದ ಎಚ್.ಎಸ್.ವೆಂಕಟೇಶ್ ಮೂರ್ತಿ, ವಿಕ್ರಮ ವಿಸಾಜಿ, ಕಿರಣ ಗಾಜನೂರು ಬರಹಗಳು ಸಹಾಯಕವಾಗಿವೆʼ ಎಂದರು.
ಕೀರ್ತನೆಗಳ ಸಂಗ್ರಹ ಪಠ್ಯ ಪುಸ್ತಕ ಸಂಪಾದಕರಾದ ಮೀನಾಕ್ಷಿ ಪ್ರಭು ಬಿರಾದಾರ ಹಾಗೂ ಡಾ.ಭೀಮಾಶಂಕರ ಬಿರಾದಾರ ಮಾತನಾಡಿದರು.
ಇದನ್ನೂ ಓದಿ : ಬೀದರ್ | ಟನ್ ಕಬ್ಬಿಗೆ ₹3,100 ಬೆಲೆ ಕೊಡಲೇಬೇಕು : ಪಟ್ಟು ಹಿಡಿದ ರೈತರು, ಧರಣಿ ಆರಂಭ
ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶಾಂತಲಿಂಗ ಸಾವಳಗಿ, ಅರ್ಜುನ ಕನಕ, ನಾಗಭೂಷಣ, ಶಿವನಾಥ ಪಾಟೀಲ, ವೈಷ್ಣವಿ ಪಾಟೀಲ, ಸಚಿನ್ ಮಲ್ಕಾಪುರೆ, ವಿಠಲದಾಸ್ ಪ್ಯಾಗೆ, ಅಬ್ದುಲ್ ಸತ್ತಾರ್ ಸೇರಿದಂತೆ ಬೀದರ ವಿಶ್ವವಿದ್ಯಾಲಯದ ಸಿಬ್ಬಂದಿ ಹಾಜರಿದ್ದರು.ಈ





