ಕೊಡವ ಮುಸ್ಲಿಂ ಅಸೋಸಿಯೇಷನ್(ಕೆಎಂಎ) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ಪ್ರಸ್ತುತ ಸಾಲಿನ ಕೆಎಂಎ ಪ್ರತಿಭಾ ಪುರಸ್ಕಾರವನ್ನು 21 ವಿದ್ಯಾರ್ಥಿಗಳು ಪಡೆದುಕೊಂಡರು.
ವಿರಾಜಪೇಟೆಯ ಸೇಂಟ್ ಆನ್ಸ್ ಪ್ಯಾರಿಸ್ ಸಭಾಂಗಣದಲ್ಲಿ ನಡೆದ ಕೆಎಂಎ ಪ್ರತಿಭಾ ಪುರಸ್ಕಾರ-2023 ವಿತರಣಾ ಸಮಾರಂಭದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪಾರಿತೋಷಕ ಮತ್ತು ಪ್ರಸಂಶನಾ ಪತ್ರ ನೀಡಿ ಗೌರವಿಸಿದರು.
ಮುಂಬೈನ ಎನ್ಸಿಟಿ ಗ್ರೂಪ್ ಮಾಲೀಕ ಅಕ್ಕಳತಂಡ ಎಸ್ ಮೊಯ್ದು ಅವರ ಪ್ರಾಯೋಜಕತ್ವದಲ್ಲಿ ದಿ ಅಕ್ಕಳತಂಡ ಎಸ್ ಹಂಸ ಅವರ ಸ್ಮರಣಾರ್ಥವಾಗಿ ಆಕರ್ಷಕ ನಗದು ಬಹುಮಾನವನ್ನು ಒಳಗೊಂಡ ಕೆಎಂಎ ವಿಶೇಷ ಪ್ರತಿಭಾ ಪುರಸ್ಕಾರ-2023ನ್ನು ಈ ಸಮಾರಂಭದಲ್ಲಿ 2022-23ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿರಾಜಪೇಟೆಯ ಸೇಂಟ್ ಆನ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಟಿ ವಿ ವೈಷ್ಣವಿ ಮತ್ತು ಮಡಿಕೇರಿಯ ಸಂತ ಮೈಕಲರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರೋಲೆನ್ಸಿಯಾ ಬಿಯಾನ್ ರಾಯ್ ಅವರಿಗೆ ಕ್ರಮವಾಗಿ ನೀಡಿ ಗೌರವಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆಎಂಎ ಅಧ್ಯಕ್ಷ ದುದ್ದಿಯಂಡ ಹೆಚ್ ಸೂಫಿ ಹಾಜಿ ಮಾತನಾಡಿ, “ಪ್ರಸ್ತುತ ಸಾಲಿನಲ್ಲಿ ಕೆಎಂಎ ಪ್ರತಿಭಾ ಪುರಸ್ಕಾರಕ್ಕಾಗಿ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದನ್ನು ಪರಿಶೀಲಿಸಿದ ಕೆಎಂಎ ಕಾರ್ಯಕಾರಿ ಸಮಿತಿಯು ಮೆರಿಟ್ ಆಧಾರದಲ್ಲಿ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆಗೊಳಿಸಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಉತ್ತೇಜಿಸಲು ಕೆಎಂಎ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಸರ್ಕಾರದ ಮೀಸಲಾತಿ ಪಡೆಯಲು ಧರ್ಮ ಮುಖ್ಯವಲ್ಲ: ಜಯಪ್ರಕಾಶ್ ಹೆಗ್ಡೆ
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಹಿರಿಯ ಪ್ರಾಧ್ಯಾಪಕ ತಂಬಂಡ ವಿಜಯ್ ಪೂಣಚ್ಚ, ಕೆಎಂಎ ಸ್ಥಾಪಕಾಧ್ಯಕ್ಷ ಕುವೆಂಡ ವೈ.ಹಂಝತುಲ್ಲಾ, ಮೂರ್ನಾಡಿನ ಹಿರಿಯ ವೈದ್ಯ ಡಾ. ಜೋಯಿಪೆರ ಎ. ಕುಂಞಬ್ದುಲ್ಲಾ, ಎನ್.ಸಿ.ಟಿ. ಗ್ರೂಪ್ ಮಾಲೀಕ ಅಕ್ಕಳತಂಡ ಎಸ್. ಮೊಯ್ದು, ದುಬೈನ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಪ್ರಮುಖ ಹರಿಶ್ಚಂದ್ರ ಎ. ಅಬೂಬಕ್ಕರ್ ಹಾಜಿ, ಗೋಣಿಕೊಪ್ಪಲಿನ ಉದ್ಯಮಿ ಚಿಮ್ಮಿಚಿರ ಕೆ. ಇಬ್ರಾಹಿಂ ಇತರರು ಇದ್ದರು.





