ಕೊಡಗು ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆ ಸುರಿದಿದೆ. ಕೊಡಗಿನ ನಾಪೋಕ್ಲು ಪ್ರದೇಶದ ನೆಲಜಿ, ಬಲ್ಲಮಾವಟಿ, ಎಮ್ಮೆಮಾಡು ಹಾಗೂ ಬೇತು ಗ್ರಾಮಗಳಲ್ಲಿ ಮಂಗಳವಾರ ಸಂಜೆ ಮಳೆಯಾಗಿದೆ. ಆದರೆ, ಮಳೆಗಾಲಕ್ಕೂ ಮುನ್ನವೇ ಸುರಿದಿರುವ ಮಳೆ ಕಾಫಿ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಕೊಡಗು ಭಾಗದ ರೈತರು ಕಾಫಿ ಕೊಯ್ಲು ಮಾಡುತ್ತಿದ್ದಾರೆ. ಕಾಫಿ ಬೀಜಗಳನ್ನು ಬಿಸಿಲಿನಲ್ಲಿ ಒಣಗಿಸಬೇಕಾಗಿದೆ. ಆದರೆ, ಕಾಫಿ ಕೊಯ್ಲು ನಡೆಯುತ್ತಿರುವ ಸಮಯದಲ್ಲೇ ಮಳೆ ಸುರಿದಿದ್ದು, ಕಾಫಿ ಬೀಜಗಳು ನೀರಿನಲ್ಲಿ ತೋಯ್ದುಹೋಗಿವೆ.
ರೈತರು ಟಾರ್ಪಲಿನ್ಗಳನ್ನು ಮುಚ್ಚಿ, ಕಾಫಿ ಬೀಜಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ. ಒಂದು ವೇಳೆ, ಮಳೆ ಮುಂದುವರೆದರೆ, ಕಾಫಿ ಬೀಜಗಳು ಒಣಗಲು, ಕೊಯ್ಲು ಕೆಲಸ ಮುಂದುವರೆಸಲು ತೊಂದರೆಯಾಗುತ್ತದೆ. ಮಾತ್ರವಲ್ಲದೆ, ಜಮೀನಿನಲ್ಲಿಯೇ ಕಾಫಿ ಬೀಜಗಳು ಉದುರಿ ಹೋಗುವ ಆಂತಕವೂ ಇದೆ.
ಫೆಬ್ರವರಿ ತಿಂಗಳಿನಲ್ಲಿ ಕಾಫಿ ಕೊಯ್ಲು ನಡೆಯುತ್ತದೆ. ಇಂತಹ ಸಮಯದಲ್ಲಿ ಮಳೆಯಾಗುವುದು ಹಾನಿಗೆ ಕಾರಣವಾಗುತ್ತದೆ. ಮಾರ್ಚ್ ಆರಂಭದಲ್ಲಿ ಮಳೆಯಾದರೆ ಕಾಫಿ ಬೆಳೆ ಸೇರಿದಂತೆ ಕೃಷಿ ಅನುಕೂಲವಾಗುತ್ತದೆ ಎಂದು ಕಾಫಿ ಬೆಳೆಗಾರರು ಹೇಳುತ್ತಾರೆ.





