ತಲಕಾವೇರಿ ಬಳಿ ಗಾಜಿನ ಸೇತುವೆ ನಿರ್ಮಾಣಕ್ಕೆ ನೀಡಿರುವ ಅನುಮತಿ ರದ್ದುಗೊಳಿಸುವಂತೆ ಆಗ್ರಹಿಸಿ ಕೊಡಗು ಏಕೀಕರಣ ರಂಗದಿಂದ ಮುಖ್ಯಮಂತ್ರಿ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ ಎಸ್ ಪೊನ್ನಣ್ಣ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಭಾಗಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲಕಾವೇರಿ ಸಮೀಪ ಪ್ರವಾಸಿಗರನ್ನು ಸೆಳೆಯಲು ಗಾಜಿನ ಸೇತುವೆ ನಿರ್ಮಿಸಲು ಉದ್ಯಮಿಗಳಿಗೆ ಅನುಮತಿ ನೀಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕೊಡಗು ಏಕೀಕರಣ ರಂಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
2020ರ ಆಗಸ್ಟ್ ತಿಂಗಳಲ್ಲಿ ತಲಕಾವೇರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಐವರ ಜೀವಹಾನಿಯಾಗಿದೆ. ಈ ಬಗ್ಗೆ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ನಡೆಸಿದ ಅಧ್ಯಯನದಲ್ಲಿ ಈ ಭೂಕುಸಿತಕ್ಕೆ ತಲಕಾವೇರಿಯ ಪರ್ವತ ಸಾಲುಗಳಲ್ಲಿ ಬೃಹತ್ ಯಂತ್ರಗಳನ್ನು ಬಳಸಿ ನಡೆಸಿದ ಭೂ ಅಭಿವೃದ್ಧಿ ಕಾಮಗಾರಿಯೇ ಕಾರಣ ಎಂಬುದು ದೃಢಪಟ್ಟಿದೆ.
ತಲಕಾವೇರಿ ಜಿಲ್ಲೆಯ ಜನರ ಶ್ರದ್ಧಾಭಕ್ತಿಯ ಕ್ಷೇತ್ರವಾಗಿದೆ. ಈ ಕ್ಷೇತ್ರವನ್ನು ಪ್ರವಾಸಿ ಕೇಂದ್ರವಾಗಿ ಪ್ರಚಾರ ಮಾಡಿದ ಎಡವಟ್ಟಿನಿಂದಾಗಿ ಈ ಕ್ಷೇತ್ರ ಕೂಡ ಪ್ರವಾಸಿಗರ ಅಂಧಾದುಂದಿನ ವರ್ತನೆಗೆ ಸಾಕ್ಷಿಯಾಗಿದೆ. ಈ ಕ್ಷೇತ್ರದ ಸಮೀಪವೇ ಮತ್ತೊಂದು ಪುವಾಸಿ ಆಕರ್ಷಣೆ ರೂಪುಗೊಂಡಲ್ಲಿ ತಲಕಾವೇರಿಗೆ ಭಕ್ತಾಧಿಗಳಿಗಿಂತ ಪ್ರವಾಸಿಗರೇ ಅಧಿಕ ಸಂಖ್ಯೆಯಲ್ಲಿ ಆಗಮಿಸುವ ಅಪಾಯವಿದೆ.
1986ರ ಎನ್ವಿರ್ನಾಮೆಂಟ್ ಪ್ರೊಟೆಕ್ಷನ್ ಆ್ಯಕ್ಟ್ ಪ್ರಕಾರ ತಲಕಾವೇರಿ ವನ್ಯಧಾಮವನ್ನು ಸೂಕ್ಷ್ಮ ಪರಿಸರ ವಲಯ ಎಂದು ಕೇಂದ್ರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ 2017ರ ಮೇ 15ರಂದು ಘೋಷಿಸಿದೆ. ಈ ಘೋಷಣೆಯಂತೆ ರಾಜ್ಯ ಸರ್ಕಾರ ಜೋನಲ್ ಪ್ಲಾನ್ ರೂಪಿಸಬೇಕಿದೆ. ಆದರೆ ರಾಜ್ಯ ಸರ್ಕಾರ ಈವರೆಗೂ ಆ ರೀತಿಯ ಘೋಷಣೆ ಹೊರಡಿಸಿಲ್ಲ.
ಈ ಸುದ್ದಿ ಓದಿದ್ದೀರಾ? ಗದಗ | ಚಿಕ್ಕನರಗುಂದದಲ್ಲಿ ಕಾಲುಬಾಯಿ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ
ಮಡಿಕೇರಿ ಸಮೀಪದ ಉಡೋತ್ನಲ್ಲಿ ಈಗಾಗಲೇ ನಿರ್ಮಿಸಿರುವ ಗಾಜಿನ ಸೇತುವೆಯಿಂದ ಸ್ಥಳೀಯರಿಗೆ, ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಎಲ್ಲರಿಗೂ ಅರಿವಿದೆ. ಆದರೆ ಸ್ಥಳೀಯ ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಯಾವ ಪರಿಹಾರೋಪಾಯವನ್ನು ಕೈಗೊಂಡಿಲ್ಲ. ಇದೀಗ ಭಾಗಮಂಡಲದಲ್ಲಿ ಅನುಮತಿಸಲಾದ ಗಾಜಿನ ಸೇತುವೆ ಕೂಡ ಅದೇ ರೀತಿಯ ಸಮಸ್ಯೆಗಳನ್ನು ಉಂಟುಮಾಡಲಿದೆ. ಈ ಹಿನ್ನೆಲೆಯಲ್ಲಿ ಭಾಗಮಂಡಲ ಗ್ರಾಮ ಪಂಚಾಯಿತಿ ತಲಕಾವೇರಿ ಪುಣ್ಯ ಕ್ಷೇತ್ರದ ಸಮೀಪ ಪ್ರವಾಸಿಗರನ್ನು ಸೆಳೆಯಲು ಗಾಜಿನ ಸೇತುವೆ ನಿರ್ಮಿಸಲು ನೀಡಿರುವ ಅನುಮತಿಯನ್ನು ರದ್ದುಪಡಿಸಬೇಕು ಎಂದು ಕೋರಿ ಮನವಿಯಲ್ಲಿ ತಿಳಿಸಿದೆ.





