ವಿದ್ಯಾರ್ಥಿಗಳು ಕಥೆ ಬರೆಯಲು ಕನ್ನಡ ಸಾಹಿತ್ಯ ಪರಿಷತ್ ವೇದಿಕೆ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡು ಮುಂದೆ ಉತ್ತಮ ಕಥೆಗಾರರು ಹಾಗೂ ಸಾಹಿತಿಗಳು ಆಗಬೇಕು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್ ಐ ಮುನೀರ್ ಅಹಮದ್ ಅವರು ಕಿವಿಮಾತು ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ನಾ.ಡಿಸೋಜಾ ರವರ ಹೆಸರಿನಲ್ಲಿ ಸ್ಥಾಪಿತವಾಗಿರುವ ನಾ. ಡಿಸೋಜ ಮಕ್ಕಳ ಸಾಹಿತ್ಯ ಪುರಸ್ಕಾರ ದತ್ತಿ ನಿಧಿಯಂತೆ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಕಥೆ ಬರೆಯುವ ಸ್ಪರ್ಧೆ ಮತ್ತು ಕಥೆ ರಚನಾ ವಿಧಾನದ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
“ವಿದ್ಯಾರ್ಥಿಗಳು ಅವರ ಇಚ್ಛೆಯಂತೆ ಕಲಿತು ಬರೆಯುವ ಕಥೆಗಿಂತ ವಿಷಯ ಆಧಾರಿತ ಕಥೆಯನ್ನು ಬರೆಯಬೇಕೆನ್ನುವ ಉದ್ದೇಶದಿಂದ ಪರಿಷತ್ತು ವಿದ್ಯಾರ್ಥಿಗಳಿಗೆ ಆಯ್ಕೆ ವಿಷಯಗಳನ್ನು ನೀಡುತ್ತಿದೆ. ವಿದ್ಯಾರ್ಥಿಗಳು ತಮ್ಮ ಅನುಭವ ಹಾಗೂ ಭಾವನೆಗಳನ್ನು ಕೇಂದ್ರೀಕರಿಸಿ ಜನರ ಮನ ಮುಟ್ಟುವಂತೆ ಕಥೆ ಬರೆಯಲು ಸಾಧ್ಯವಾಗಲಿ” ಎಂದು ಶುಭ ಹಾರೈಸಿದರು.
ಬರಹಗಾರ್ತಿ ಸುನಿತಾ ಕುಶಾಲನಗರ ಮಾತನಾಡಿ, “ಕಥೆ ಬರೆಯಬೇಕೆಂದರೆ ಮೊದಲು ಮೂಲ ಹಾಗೂ ಅನುವಾದಿತ ಕಥೆಗಳನ್ನು ಓದಿಕೊಳ್ಳಬೇಕು. ಕಥೆ ಅನುಕರಣೆಯಾಗಬೇಕೆಂದಿಲ್ಲ ಮನಸಿಗೆ ಮೂಡಿದ ವಿಷಯಗಳ ಕುರಿತು ಕಥೆ ಬರೆಯಬಹುದು. ಲೋಕ ಸಾಹಿತ್ಯದ ಕುರಿತು ತಿಳಿದುಕೊಂಡರೆ ಕಥೆ ಬರೆಯಲು ಅನುಕೂಲವಾಗುತ್ತದೆ. ಕಥೆ ಎಂದಿಗೂ ದೊಡ್ಡದಾಗಿರದೆ ಸಣ್ಣ ಕಥೆಗಳನ್ನು ಬರೆದರೆ ಆ ಬರಹ ಹೆಚ್ಚಿನ ಜನರನ್ನು ತಲುಪುತ್ತದೆ” ಎಂದು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ ಆರ್ ವಿಜಯ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, “ಕಥೆ ಬರೆಯಬೇಕೆಂದರೆ ಕಥೆಯನ್ನು ಓದುವ ಹಾಗೂ ಕೇಳುವ ಮನಸಿರಬೇಕು. ಇಂದಿನ ಕಥಾ ಸ್ಪರ್ಧೆಗೆ ಆಗಮಿಸಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಗಮನಿಸಿದರೆ ಖಂಡಿತ ಮುಂದೊಂದು ದಿನ ಜಿಲ್ಲೆಯಲ್ಲಿ ಉತ್ತಮ ಕಥೆಗಾರರು ರೂಪುಗೊಳ್ಳಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಸಂಪತ್ ಕುಮಾರ್ ಮಾತನಾಡಿ, “ಕಥೆ ಬರೆಯುವಾಗ ಜನಪದ ಭಾಷೆಯನ್ನು ಬಳಸಿಕೊಂಡರೆ ಜನರ ಮನಸನ್ನು ತಲುಪುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಪೋಷಕರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ಮಂಜುನಾಥ್ ಸೇರಿದಂತೆ 150 ಮಂದಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಇದ್ದರು.




