ಕೋಡಿಬೇಂಗ್ರೆ ಅಳಿವೆಬಾಗಿಲು ಪ್ರದೇಶದ ಸ್ವರ್ಣ ನದಿಯಲ್ಲಿ ನಡೆದ ಭೀಕರ ಬೋಟ್ ದುರಂತದಲ್ಲಿ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ
ಜನವರಿ 26ರಂದು ಬೆಳಿಗ್ಗೆ 10.45ರ ಸುಮಾರಿಗೆ ಮೈಸೂರು ನಿವಾಸಿ ಗುರುಪ್ರಸಾದ್ (34) ಸೇರಿದಂತೆ ಒಟ್ಟು 29 ಮಂದಿಯನ್ನು ಆರೋಪಿಯಾದ ಸುಹಾಸ್ ಎರಡು ಪ್ರತ್ಯೇಕ ಬೋಟ್ಗಳಲ್ಲಿ ದೋಣಿ ವಿಹಾರಕ್ಕೆ ಕರೆದೊಯ್ದಿದ್ದನು. ಒಂದೇ ಬೋಟ್ನಲ್ಲಿ 14 ಮಂದಿ ಹಾಗೂ ಇನ್ನೊಂದು ಬೋಟ್ನಲ್ಲಿ 15 ಮಂದಿ ಪ್ರಯಾಣಿಸುತ್ತಿದ್ದರು. ಬೆಳಿಗ್ಗೆ 11.15ರ ವೇಳೆಗೆ ಕೋಡಿಬೇಂಗ್ರೆ ಅಳಿವೆಬಾಗಿಲು ಬಳಿ ‘ದಿ ವೇವ್ ರೈಡರ್’ ಎಂಬ ಹೆಸರಿನ ಬೋಟ್ ಅನ್ನು ಚಾಲಕರಾದ ಸೂಫಿಯಾನ್ ಮತ್ತು ವಾಸು ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ತೀವ್ರವಾಗಿ ಎಡಬದಿಗೆ ತಿರುಗಿಸಿ ಚಲಾಯಿಸಿದ್ದರಿಂದ ಬೋಟ್ ಮಗುಚಿಬಿದ್ದಿದೆ.
ಈ ವೇಳೆ ಬೋಟ್ನಲ್ಲಿದ್ದ 14 ಮಂದಿ ನೀರಿಗೆ ಬಿದ್ದು, ಶಂಕರಪ್ಪ (27), ಕುಮಾರಿ ಸಿಂಧು.ಪಿ (23) ಮತ್ತು ಕುಮಾರಿ ದಿಶಾ (26) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಉಳಿದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ವೇಳೆ, ಆರೋಪಿಗಳು ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೆ ಬೋಟ್ ವಿಹಾರ ನಡೆಸಿದ್ದಲ್ಲದೆ, ಬೋಟ್ ಪ್ರವಾಸಿಗರ ವಿಹಾರಕ್ಕೆ ಯೋಗ್ಯವೆಂಬ ಧೃಢೀಕರಣ ಪತ್ರವೂ ಹೊಂದಿರಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಅಲ್ಲದೇ, ಲೈಫ್ ಜಾಕೆಟ್ ಸೇರಿದಂತೆ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿದ್ದುದೂ ತನಿಖೆಯಲ್ಲಿ ದೃಢಪಟ್ಟಿದೆ.
ಘಟನೆ ನಡೆದ ಸ್ಥಳ ಕೋಟ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿರುವುದರಿಂದ ಪ್ರಕರಣವನ್ನು ಕೋಟ ಠಾಣೆಗೆ ವರ್ಗಾಯಿಸಲಾಗಿದ್ದು, ಅಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸುಹಾಸ್ ಶ್ರೀಯಾನ್ (23), ಸೂಫಿಯಾನ್ (20) ಹಾಗೂ ವಾಸು ಮೆಂಡನ್ (52)ರನ್ನು ದಸ್ತಗಿರಿ ಮಾಡಲಾಗಿದ್ದು, ಅವರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.





