ಕೋಲಾರ | ಬಾಳೆ ಬೆಲೆ ಕುಸಿತ; ಪರಿಹಾರಕ್ಕೆ ರೈತರ ಆಗ್ರಹ

Date:

ಕೋಲಾರ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಗಳಲ್ಲೊಂದು. ಜಿಲ್ಲೆಯ ಬಹುತೇಕರು ಕೃಷಿ ಮೇಲೆಯೇ ಅವಲಂಬಿತರಾಗಿದ್ದಾರೆ. ಇಲ್ಲಿ ತರಕಾರಿ, ಹಣ್ಣು ಸೇರಿದಂತೆ ವಿವಿಧ ರೀತಿಯ ಬೆಳೆ ಬೆಳೆಯಲಾಗುತ್ತಿದ್ದು, ದೇಶದ ವಿವಿಧ ರಾಜ್ಯಗಳಿಗೆ, ವಿದೇಶಗಳಿಗೂ ರಫ್ತು ಮಾಡುವ ಮೂಲಕ ಕೋಲಾರ ತನ್ನದೇ ಹೆಸರು ಪಡೆದಿದೆ. ಆದರೆ ಇಂತಹ ಕೃಷಿ ಪ್ರಧಾನ ಜಿಲ್ಲೆಯಲ್ಲಿಯೇ ರೈತರು ಬೆಲೆ ಕುಸಿತದ ಕಾರಣ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೋಲಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿರುವ ಪಚ್ಚಬಾಳೆ ಬೆಳೆ ರೈತರಿಗೆ ಭಾರೀ ನಷ್ಟ ತಂದೊಡ್ಡಿದೆ. ಮಾರುಕಟ್ಟೆಯಲ್ಲಿ ಬಾಳೆಗೆ ಬೆಲೆ ತೀವ್ರವಾಗಿ ಕುಸಿದ ಪರಿಣಾಮ, ರೈತರು ಉತ್ಪಾದನಾ ವೆಚ್ಚವನ್ನೂ ಮರುಪಡೆಯಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಾರೆ. ಗೊಬ್ಬರ, ಬೀಜ, ನೀರಾವರಿ, ಕೂಲಿ ವೆಚ್ಚ ಸೇರಿದಂತೆ ಸಾವಿರಾರು ರೂಪಾಯಿ ಹೂಡಿಕೆ ಮಾಡಿದರೂ, ಮಾರಾಟದ ಸಮಯದಲ್ಲಿ ಬೆಲೆ ಕೈಕೊಡುತ್ತಿರುವುದು ರೈತರನ್ನು ನಿರಾಶೆಗೆ ತಳ್ಳಿದೆ.

WhatsApp Image 2025 12 22 at 6.52.56 PM

ಬೆಳೆ ಸಾಲ ಮಾಡಿಕೊಂಡು ಕೃಷಿ ಮಾಡಿದ ಅನೇಕ ರೈತರು ಇದೀಗ ಸಾಲ ತೀರಿಸುವ ಚಿಂತೆಯಲ್ಲಿ ಮುಳುಗಿದ್ದಾರೆ. ಬೆಲೆ ಕುಸಿತ ಇದೇ ರೀತಿ ಮುಂದುವರಿದರೆ, ಮುಂದಿನ ದಿನಗಳಲ್ಲಿ ಕೃಷಿ ಕೈಬಿಡುವ ಪರಿಸ್ಥಿತಿ ಬರಬಹುದೆಂಬ ಆತಂಕವೂ ವ್ಯಕ್ತವಾಗುತ್ತಿದೆ. ಇದರಿಂದ ಕೃಷಿ ಅವಲಂಬಿತ ಕಾರ್ಮಿಕರು ಹಾಗೂ ಸ್ಥಳೀಯ ಆರ್ಥಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೋಲಾರ ತಾಲ್ಲೂಕಿನ ಉರಟಿ ಅಗ್ರಹಾರ ಗ್ರಾಮದಲ್ಲಿ ಕೆಲವು ರೈತರು ಪಚ್ಚೆ ಬಾಳೆ ಬೆಳೆದಿದ್ದಾರೆ. ಆದರೆ, ಮಾರಾಟ ಮಾಡುವ ಸಮಯಕ್ಕೆ ಸರಿಯಾಗಿ ಬೆಲೆ ದಿಢೀರನೆ ಕುಸಿದುಬಿಡುತ್ತದೆ. ಒಂದು ಕೆ.ಜಿ ಬಾಳೆಹಣ್ಣನ್ನು 5 ರೂಪಾಯಿಗೂ ಕೇಳದೆ ಇರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಈ ದಿನ.ಕಾಮ್ ನೊಂದಿಗೆ ಮಾತನಾಡಿದ ರೈತ ನಾರಾಯಣಸ್ವಾಮಿ, “ಸುಮಾರು ಒಂದುವರೆ ಎಕರೆಯಲ್ಲಿ ನಾವು ಬಾಳೆಯನ್ನು ಬೆಳೆದಿದ್ದು ಈ ಬಾರಿ ರೇಟ್ ಇಲ್ಲ, ಕಳೆದ ಬಾರಿ ಒಂದು ಕಿಲೋ 18 ರಿಂದ 20 ರೂಪಾಯಿ ಇತ್ತು. ಆದರೆ ಈ ಬಾರಿ 5 ರೂಪಾಯಿಗೂ ಯಾರು ಕೇಳೋರಿಲ್ಲ. ನಮಗೆ ಬಹಳ ತೊಂದರೆ ಆಗಿದೆ. ಹಾಕಿರುವ ಬಂಡವಾಳ ಸಹ ಬರತ್ತಿಲ್ಲ, ಒಂದುವರೆ ಎಕರೆಯಲ್ಲಿ ಪಚ್ಚ ಬಾಳೆ ಬೆಳೆಯಲು 2.5 ಲಕ್ಷ ಹಣ ಖರ್ಚಾಗಿದೆ. ನಾವು ಬಡ್ಡಿಗೆ ಹಣ ತಂದು ಬೆಳೆಗೆ ಹಾಕಿದ್ದೇವೆ. ಆದ್ರೆ ಏಕಾಏಕಿ ಬೆಲೆ ಕುಸಿದಿದೆ. ಹಾಕಿದ ಬಂಡವಾಳವೂ ನಮಗೆ ಬರದೆ ನಷ್ಟದಲ್ಲಿದ್ದೀವಿ. ನಾವು ಕೃಷಿಯನ್ನೇ ನಂಬಿರುವವರು ನಾವು. ಸರ್ಕಾರ ನಮ್ಮಂತವರ ಕಡೆಗೆ ಒಮ್ಮೆಯಾದರೂ ನೋಡಿ ನಷ್ಟ ತುಂಬಿಕೊಡಲು ಕ್ರಮಕೈಗೊಳ್ಳಬೇಕು. ಇಲ್ಲವಾದರೆ, ಬಾಳೆ ಬೆಳೆಯುವ ಹುಮ್ಮಸ್ಸೇ ಹೋಗಿಬಿಡುತ್ತದೆ.

WhatsApp Image 2025 12 22 at 6.52.54 PM
ರೈತ ನಾರಾಯಣಸ್ವಾಮಿ

ಒಂದು ವರೆ ಎಕರೆಯಲ್ಲಿ 1300 ಬಾಳೆ ಗಿಡ ಬೆಳೆದಿದ್ದು ಒಳ್ಳೆಯ ಇಳುವರಿ ಬಂದಿದೆ. ಒಂದು ಗೊನೆ 50 ರಿಂದ 60 ಕೆ.ಜಿ ತೂಗುತ್ತೆ. ಕೆಲವರು 5 ರೂಪಾಯಿಗೆ ಕೇಳುತ್ತಿದ್ದಾರೆ, ಆಗ ಕಣ್ತುಂಬುತ್ತವೆ. ಅದೇ ಬೆಲೆಗೆ ಮಾರಿದರೆ 60 ಸಾವಿರ ಮಾತ್ರ ಬರುತ್ತೆ. ಸುಮಾರು ಒಂದು ಲಕ್ಷ ಎಪ್ಪತ್ತು ಸಾವಿರದಷ್ಟು ನಷ್ಟವಾಗುತ್ತೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗಮನಿಸಿ ನಮಗೆ ಪರಿಹಾರ ಕೊಟ್ಟರೆ ಬಹಳ ಅನುಕೂಲವಾಗುತ್ತೆ ಹಾಗೂ ಮುಂದೆ ಬೆಳೆ ಬೆಳೆಯಕ್ಕೆ ಉಪಯೋಗವಾಗುತ್ತದೆ. ಎಷ್ಟು ನಷ್ಟ ಆಗಿದೆಯೋ ಅಷ್ಟು ಪರಿಹಾರ ಸಿಕ್ಕರೆ ಸಾಕು” ಎಂದರು. ಅಂಬರೀಷ್ ಎನ್ನುವವರು 3 ಎಕರೆ ಬಾಳೆ ಬೆಳೆದಿದ್ದು ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಾಲ್ಕು ತಿಂಗಳ ಹಿಂದೆ ಮಾವು ಬೆಲೆ ಕುಸಿತ ಆದಾಗ ಸರ್ಕಾರ 4 ರೂ ಪರಿಹಾರ ನೀಡಿತ್ತು. ಆಗ ಸ್ವಲ್ಪ ಮಟ್ಟಿಗೆ ಅನುಕೂಲವಾಗಿತ್ತು, ಅದೇ ರೀತಿ ಬಾಳೆಗೂ ಪರಿಹಾರ ಹಣ ನೀಡಬೇಕು. ಬೆಳೆ ನಾಟಿ ಮಾಡಿ ಕಟಾವು ಮಾಡುವವರೆಗೂ 13 ತಿಂಗಳು ಸಮಯ ಬೇಕಾಗುತ್ತೆ. ಈ ಸಮಯದಲ್ಲಿ ರೈತ ಕಷ್ಟಪಟ್ಟು ಗೊಬ್ಬರ ಹಾಕಿ, ಬಹಳಷ್ಟು ಶ್ರಮ ಪಟ್ಟಿರುತ್ತಾನೆ. ಉಸ್ತುವಾರಿ ಸಚಿವರಾಗಲಿ, ಶಾಸಕರಾಗಲಿ ಯಾರು ಸಹ ಬಾಳೆಯಿಂದ ನಷ್ಟ ಅನುಭವಿಸುತ್ತಿರುವ ರೈತರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತಿಲ್ಲ.

ವಾತಾವರಣದ ಅಸಮತೋಲನ ಹಾಗೂ ಬಾಳೆ ಆಮದು ಕಡಿಮೆಯಾಗಿರುವುದೇ ಪ್ರಮುಖ ಕಾರಣ ಎಂದು ರೈತರು ಆರೋಪಿಸುತ್ತಿದ್ದಾರೆ. ಈ ಬೆಳವಣಿಗೆಯಿಂದಾಗಿ ನೂರಾರು ರೈತರು ಭಾರೀ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ರೈತರ ಹೇಳಿಕೆಯಂತೆ, ಅಕಾಲಿಕ ಮಳೆ, ಹೆಚ್ಚಾದ ತಾಪಮಾನ ಮತ್ತು ಹವಾಮಾನದಲ್ಲಿನ ತೀವ್ರ ಬದಲಾವಣೆಗಳು ಬಾಳೆ ಬೆಳೆಯ ಗುಣಮಟ್ಟ ಹಾಗೂ ಉತ್ಪಾದನೆ ಮೇಲೆ ಪರಿಣಾಮ ಬೀರಿವೆ. ಮತ್ತೊಂದೆಡೆ ಮಾರುಕಟ್ಟೆಯಲ್ಲಿ ನಿರೀಕ್ಷಿತ ಮಟ್ಟದ ಬೇಡಿಕೆ ಇಲ್ಲದಿರುವುದು ಮತ್ತು ರಫ್ತು–ಆಮದು ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ. ಪರಿಣಾಮವಾಗಿ ಕ್ವಿಂಟಾಲ್‌ಗಟ್ಟಲೆ ಬೆಳೆದ ಬಾಳೆ ತೋಟಗಳಲ್ಲಿ ಬೆಳೆ ಮಾರಾಟವಾಗದೆ ಉಳಿಯುತ್ತಿದೆ.

ಇಂತಹ ಸಂದರ್ಭದಲ್ಲಿ ನಿಯಮಾನುಸಾರ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಒದಗಿಸಬೇಕಾಗಿದೆ. ಆದರೆ, ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಗಂಭೀರ ಆರೋಪಗಳೂ ಕೇಳಿಬರುತ್ತಿವೆ. ನಾವು ಇಲಾಖೆಗೆ ಹೋದರೆ ಇಲ್ಲಿದ್ದೀವಿ, ಅಲ್ಲಿದ್ದೀವಿ ಎಂದು ತಪ್ಪಿಸಿಕೊಳ್ಳುತ್ತಾರೆ. ಹೊಲಗಳಿಗೆ ಬಂದು ನಷ್ಟದ ಪರಿಶೀಲನೆ ಮಾಡುವುದೇ ಇಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಿಹಾರ ವಿಳಂಬ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದರೆ, ರೈತರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಸಾಲ ಮಾಡಿ ಬೆಳೆ ಬೆಳೆದ ರೈತರಿಗೆ ಬೆಲೆ ಕುಸಿತದ ಹೊಡೆತ ಜೀವಾಳವಾಗಿದ್ದು, ಕುಟುಂಬ ನಿರ್ವಹಣೆಯೇ ಕಷ್ಟಕರವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಎಷ್ಟು ರೈತರು ಬಾಳೆ ಬೆಳೆ ಬೆಳೆದಿದ್ದಾರೆ, ಅವರಿಗೆ ಎಷ್ಟು ನಷ್ಟವಾಗಿದೆ ಎಂಬುದನ್ನು ಸರ್ಕಾರ ತಕ್ಷಣ ಸಮೀಕ್ಷೆ ನಡೆಸಿ ಗುರುತಿಸಬೇಕು ಎಂಬುದು ರೈತರ ಒತ್ತಾಯ. ಬೆಲೆ ಕುಸಿತದಿಂದ ನಷ್ಟ ಅನುಭವಿಸಿದ ಪ್ರತಿಯೊಬ್ಬ ಬಾಳೆ ಬೆಳೆಗಾರನಿಗೂ ಸಮರ್ಪಕ ಪರಿಹಾರ ಒದಗಿಸುವಂತೆ ಸರ್ಕಾರದ ಗಮನ ಸೆಳೆಯಬೇಕೆಂದು ರೈತ ಸಂಘಟನೆಗಳು ಆಗ್ರಹಿಸಿವೆ.

WhatsApp Image 2025 12 22 at 6.52.54 PM 1
ರೈತ ರಮೇಶ್

ಇದನ್ನೂ ಓದಿ: ಕೋಲಾರ | ಗಾಂಧಿನಗರ-ಗದ್ದೆಕಣ್ಣೂರು ರಸ್ತೆ ಒತ್ತುವರಿ; ಕ್ರಮಕ್ಕೆ ಸ್ಥಳೀಯರ ಒತ್ತಾಯ

ತೋಟಗಾರಿಕೆ ಇಲಾಖೆ ಅಧಿಕಾರಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ, “ಬಾಳೆ ಬೆಳೆದ ರೈತರು ನಷ್ಟ ಆಗಿದೆ ಎಂದು ತೋಟಗಾರಿಕೆ ಇಲಾಖೆಗೆ ಪ್ರಪೋಸಲ್ ಕೊಟ್ರೆ ನಾವು ಉನ್ನತ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ತಲುಪಿಸುತ್ತೇವೆ. ಈ ಹಿಂದೆ ಮಾವು ಬೆಳೆಗೆ ಪರಿಹಾರ ಬೆಲೆ ನೀಡಿದ್ದೇವೆ. ಕೆಲವರು ಮಾತ್ರ ಬೆಳೆದರೆ ಬಾಳೆ ಬೆಳೆಗೆ ಪರಿಹಾರ ಕೊಡಲು ನಿಯಮಗಳಿಲ್ಲ. ಆದರೂ ಬಾಳೆ ಬೆಳೆದ ರೈತರು ನಮಗೆ ಮನವಿ ಕೊಟ್ಟರೆ ನಾವು ಉನ್ನತ ಅಧಿಕಾರಿಗಳಿಗೆ ತಲುಪಿಸುತ್ತೇವೆ” ಎಂದರು.

ಹಿಂದೆ ಮಾವು ಬೆಳೆ ಕುಸಿತದ ಸಂದರ್ಭದಲ್ಲಿ ಸರ್ಕಾರ ಪರಿಹಾರ ನೀಡಿದ ಉದಾಹರಣೆ ಇರುವುದರಿಂದ, ಅದೇ ಮಾದರಿಯಲ್ಲಿ ಬಾಳೆ ಬೆಳೆಗೂ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ರೈತರ ವಿಶ್ವಾಸವನ್ನು ಮರಳಿ ಕಟ್ಟಬೇಕಿದೆ. ಇಲ್ಲದಿದ್ದರೆ, ಬೆಲೆ ಕುಸಿತದಿಂದ ನಲುಗಿರುವ ರೈತರು ಕೃಷಿಯಿಂದಲೇ ದೂರ ಸರಿಯುವ ಪರಿಸ್ಥಿತಿ ನಿರ್ಮಾಣವಾಗುವ ಜೊತೆಗೆ, ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ, ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಕೋಲಾರ ಜಿಲ್ಲೆಯ ಬಾಳೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ, ನ್ಯಾಯಸಮ್ಮತ ಪರಿಹಾರ ಒದಗಿಸಬೇಕೆಂಬುದು ಇಡೀ ಜಿಲ್ಲೆಯ ರೈತರ ಮನವಿ.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...