ಕೋಲಾರದ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಆಪ್ ಪಕ್ಷದ 4 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರೆಲ್ಲರೂ ಭ್ರಷ್ಟಾಚಾರ ಮಾಡುವುದಿಲ್ಲವೆನ್ನುವ ಪ್ರಮಾಣ ಮಾಡಿದ್ದಾರೆ. ಹಾಗೆಯೇ ಜೆಸಿಬಿ ಪಕ್ಷಗಳ (ಜೆಡಿಎಸ್, ಕಾಂಗ್ರೆಸ್, ಬಿಜೆಪಿ) ಅಭ್ಯರ್ಥಿಗಳು ಪ್ರಮಾಣ ಮಾಡಲಿ ಎಂದು ಆಮ್ ಆದ್ಮಿ ಪಕ್ಷದ ಕೋಲಾರ ಜಿಲ್ಲಾಧ್ಯಕ್ಷ ವೆಂಕಟಾಚಲಪತಿ ಸವಾಲು ಹಾಕಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 17 ವಾರ್ಡ್ಗಳ ಪೈಕಿ 4 ವಾರ್ಡ್ಗಳಲ್ಲಿ ಸಾಮಾನ್ಯ ಜನರನ್ನೇ ಅಭ್ಯಥಿಗಳನ್ನಾಗಿ ಆಯ್ಕೆ ಮಾಡಿದ್ದು, ಉತ್ತಮ ಸ್ಪಂದನೆ ಇರುವುದಾಗಿ ಹೇಳಿದರು.
ಪಕ್ಷದ ರಾಜ್ಯ ಮುಖಂಡ ನಾಗರಾಜ್ ಮಾತನಾಡಿ, “ನೆಲೆಯೇ ಇಲ್ಲದ ಪರಿಸ್ಥಿತಿಯಲ್ಲಿ ನಾಲ್ಕು ಮಂದಿ ಅಭ್ಯರ್ಥಿಗಳು ಸಿಕ್ಕಿದ್ದಾರೆ. ಮೊದಲ ಪ್ರಯತ್ನ ಮಾಡುತ್ತಿದ್ದು, ಸಾಮಾನ್ಯ ಜನರಿಗೇ ಅವಕಾಶ ನೀಡಲಾಗಿದೆ ಹೊರತು ಸೂಟ್ ಕೇಸ್ ಪಡೆದು ಟಿಕೆಟ್ ನೀಡುವ ಸಂಸ್ಕೃತಿ ನಮ್ಮಲ್ಲಿಲ್ಲ. ಊರಿನ ಅಭಿವೃದ್ಧಿ ದೆಸೆಯಿಂದ ಇಂತಹ ಅಭ್ಯರ್ಥಿಗಳಿಗೆ ಮತ ನೀಡಿ ಅವಕಾಶ ಮಾಡಿಕೊಡಿ” ಎಂದು ಕೋರಿದರು.
ಪಕ್ಷದ ರಾಜ್ಯ ಕಾರ್ಯದರ್ಶಿ ಸುರೇಶ್ ಮಾತನಾಡಿ, “ಪ್ರತಿ ಮನೆಗೂ ಪ್ರಮಾಣಪತ್ರ ತಲುಪಿಸಿದ್ದು, ಗೆಲ್ಲಿಸಿದ್ದೇ ಆದಲ್ಲಿ ಅನುದಾನದ ಮಾಹಿತಿಯ ಫಲಕವನ್ನು ವಾರ್ಡ್ನಲ್ಲಿ ಅಳವಡಿಸಿ, ಪಾರದರ್ಶಕವಾಗ ಆಡಳಿತ ನಡೆಸಿಇಡೀ ಜಿಲ್ಲೆಯಲ್ಲೇ ಮಾದರಿ ವಾರ್ಡ್
ಗಳನ್ನಾಗಿಸಲಾಗುವುದು. ಒಂದು ವೇಳೆ ನಮ್ಮವರು ಭ್ರಷ್ಟಾಚಾರ ಮಾಡಿದರೂ ಇದೇ ಪೊರಕೆಯಿಂದ ಗುಡಿಸುತ್ತೇವೆ. ಕಾಂಗ್ರೆಸ್, ಬಿಜೆಪಿ-ಜೆಡಿಎಸ್ನವರು 60%, 40% ಕಮೀಷನ್ ಹಣದ ಹೊಳೆಯನ್ನು ಹರಿಸಲು ಮುಂದಾಗಿದ್ದು, ಒಂದು ದಿನದ ಆಸೆ ಆಮಿಷಕ್ಕೆ ಒಳಗಾಗಬೇಡಿ” ಎಂದು ಮನವಿ ಮಾಡಿದರು.
ವೇಮಗಲ್ ಮುಖಂಡ ವಿಜಯ್ ಕುಮಾರ್ ಮಾತನಾಡಿ, “ಮನೆಮನೆಗೆ ಹೋಗಿ ಪ್ರಚಾರ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ. 17 ವಾರ್ಡ್ಗಳಲ್ಲಿ ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಮೈತ್ರಿಯವರು ಹಣದ ಜತೆಗೆ ಹೊರಟಿದ್ದಾರೆ. ಆದರೂ ನಮಗೆ ಮತ ನೀಡಿ ಸ್ವಚ್ಛ ಆಡಳಿತ ಮಾಡಲು ಅವಕಾಶ ಕಲ್ಪಿಸಿಕೊಡಲು ಮನವಿ ಮಾಡಿರುವುದಾಗಿ” ತಿಳಿಸಿದರು.
ಇದನ್ನೂ ಓದಿ: ಕೋಲಾರ | ಗುದ್ದಲಿ ಪೂಜೆಯಾಗಿ ವರ್ಷ ಕಳೆದರೂ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ: ಸ್ಥಳೀಯರ ಆಕ್ರೋಶ
ಅಭ್ಯರ್ಥಿಗಳಾದ ಗೌರಿಶಂಕರ್, ಪಿ.ಲಲಿತಮ್ಮ, ಲಕ್ಷ್ಮಮ್ಮ ಮಾತನಾಡಿ, “ನಾವು ಯಾವುದೇ ಭ್ರಷ್ಟಾಚಾರ ಮಾಡಲ್ಲವೆಂದು ಈಗಾಗಲೇ ಪ್ರಮಾಣ ಮಾಡಿದ್ದೇವೆ. ನಮ್ಮಿಂದ ಭ್ರಷ್ಟಾಚಾರ ಆದರೆ ಅಂದೇ ರಾಜೀನಾಮೆ ನೀಡುತ್ತೇವೆ. ಇದೇ ರೀತಿ ಬೇರೆ ಪಕ್ಷದ ಅಭ್ಯರ್ಥಿಗಳೂ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು. ಭ್ರಷ್ಟಾಚಾರ ಮಾಡುವುದಿಲ್ಲ, ಮಾಡಲು ಬಿಡುವುದೂ ಇಲ್ಲ. ಅನುದಾನ ದುರ್ಬಳಕೆಯಾಗಲು ಬಿಡುವುದಿಲ್ಲ” ಎಂದು ಹೇಳಿದರು.





