ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಿದ್ದರೂ ಕೂಡ ಆಳುವ ಸರ್ಕಾರಗಳು ಗ್ರಾಮ ಪಂಚಾಯಿತಿ ನೌಕರರನ್ನು ನಿರ್ಲಕ್ಷಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜುಲೈ 28ರಂದು ಕೋಲಾರ ಜಿಲ್ಲಾ ಪಂಚಾಯತ್ ಎದುರು ಬೃಹತ್ ಹೋರಾಟ ಕೈಗೊಳ್ಳಲಾಗಿದ್ದು, ಎಲ್ಲ ನೌಕರರೂ ಭಾಗವಹಿಸಬೇಕು ಎಂದು ರೈತ ಕಾರ್ಮಿಕ ಮುಖಂಡ ಪಾತಕೋಟ ನವೀನ್ ಕುಮಾರ್ ಕರೆ ನೀಡಿದರು.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಗ್ರಾಮ ಪಂಚಾಯಿತಿ ಎದರು ಜುಲೈ 23ರ ಬುಧವಾರ ಹಮ್ಮಿಕೊಂಡಿದ್ದ ಪಂಚಾಯಿತಿ ನೌಕರ ಸಂಘದ ಹೋಬಳಿ ಮಟ್ಟದ ಸಮಾವೇಶದಲ್ಲಿ ಮಾತನಾಡಿದರು.
“ಕನಿಷ್ಠ ವೇತನ ₹36,000 ನೀಡುವುದಾಗಲಿ, ನಿವೃತ್ತಿ ವೇತನ, ಪ್ರಮೋಷನ್ ನೀಡುವುದು, ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿಗೆ ಜಾರಿ ಮಾಡುತ್ತಿಲ್ಲ, ಇತ್ತೀಚೆಗೆ ಕರ ವಸೂಲಿಗಾರ ಮತ್ತು ಜಲಗಾರರಿಂದ ಕಂದಾಯ ವಸೂಲಿ ವಿಚಾರದಲ್ಲಿ ಮೇಲಧಿಕಾರಿಗಳಿಂದ ನಿರಂತರ ಕಿರುಕುಳ ನೀಡುತ್ತಿರುವುದು ನಿಲ್ಲಬೇಕು. ಜಲಗಾರರಿಗೆ ಬ್ಯಾಟರಿ ಮತ್ತು ಶ್ಯೂಗಳನ್ನು ಕೊಡಬೇಕು ಹಾಗೂ ನೌಕರರಿಗೆ ಬಾಕಿ ಇರುವ ವೇತನವನ್ನು ಕೂಡಲೇ ಪಾವತಿ ಮಾಡುವಂತೆ ಒತ್ತಾಯಿಸಲಾಗುವುದು” ಎಂದು ಹೇಳಿದರು.
ಪಂಚಾಯಿತಿ ನೌಕರ ಸಂಘದ ತಾಲೂಕು ಮುಖಂಡ ಟಿ ಎನ್ ಆಂಜನಪ್ಪ ಮಾತನಾಡಿ, “ನಮ್ಮ ನೌಕರರು ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಿಐಟಿಯು ಸಂಘಟನೆಯಲ್ಲಿ ಸಂಘಟಿತರಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ರಾಜ್ಯದಲ್ಲಿ 11.80 ಲಕ್ಷ ಮಂದಿ ಅನಧಿಕೃತ ಪಿಂಚಣಿದಾರರು ಪತ್ತೆ: ಸಚಿವ ಕೃಷ್ಣ ಭೈರೇಗೌಡ
ಈ ಸಂದರ್ಭದಲ್ಲಿ ಹೋಬಳಿ ಮಟ್ಟದ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುದಿ ಮಡುಗು ರೆಡ್ಡಪ್ಪ, ಕಾರ್ಯದರ್ಶಿಯಾಗಿ ಎರಮವಾರಪಲ್ಲಿ ರಾಜು ಎಸ್ ಎನ್, ಸಂಘಟನಾ ಕಾರ್ಯದರ್ಶಿಯಾಗಿ ರಾಯಲ್ಪಾಡು ರವೀಂದ್ರ, ಖಜಾಂಚಿಯಾಗಿ ಕೂರಿಗೆಪಲ್ಲಿ ಚಲಪತಿ, ಸದಸ್ಯರುಗಳಾಗಿ ಶಿವಪ್ಪ, ನಾಗರಾಜ್, ಅಶೋಕ ಸಿಎನ್, ಗಂಗೆರೆಡ್ಡಿ, ನರಸಿಂಹ ರೆಡ್ಡಿ, ರಾಮರೆಡ್ಡಿ ಟಿಜಿ, ವೆಂಕಟರಾಮರೆಡ್ಡಿ, ಕೆ ವೈ ನಾರಾಯಣಸ್ವಾಮಿ ಆಯ್ಕೆಯಾದರು.





