ಬಯಲು ಸೀಮೆಯ ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ನದಿ, ನಾಲೆ, ಕರೆ, ಕಟ್ಟೆಗಳು ಬತ್ತಿಹೋಗಿವೆ. ಈ ಮಳೆಯಾಶ್ರಿತ ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಜನವರಿ 17ರಂದು ‘ಜಲಾಗ್ರಹ ಸಮಾವೇಶ’ ಆಯೋಜಿಸಲಾಗಿದೆ ಎಂದು ‘ಶಾಶ್ವತ ನೀರಾವರಿ ಹೋರಾಟ ಸಮಿತಿ’ ತಿಳಿಸಿದೆ.
ಸಮಾವೇಶದ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಹೋರಾಟ ಸಮಿತಿ, “ಬರಪೀಡಿತ ಜಿಲ್ಲೆಗಳ ನೀರಿಯ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲು ಜನವರಿ 17ರಂದು ‘ಜಲಾಗ್ರಹ ಸಮಾವೇಶ’ ಹಮ್ಮಿಕೊಳ್ಳಲಾಗಿದೆ. ಸಮಾವೇಶವು ಜ.17ರ 11ಗಂಟೆಗೆ ಕೋಲಾರದ ಕಾಲೇಜು ಸರ್ಕಲ್ನಲ್ಲಿ ಆರಂಭವಾಗಲಿದೆ” ಎಂದು ತಿಳಿಸಿದೆ.
“ಬರಪೀಡಿತ ಜಿಲ್ಲೆಗಳ ಜನರು ಕುಡಿಯುವ ನೀರು ಮತ್ತು ವ್ಯವಸಾಯಕ್ಕಾಗಿ ಸುಮಾರು 1,500 ಅಡಿ ಆಳದವರೆಗೆ ಕೊಳವೆಬಾವಿಗಳನ್ನು ಕೊರೆಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಪರಿಣಾಮ, ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಅತ್ಯಂತ ಆಳದಲ್ಲಿ ಸಿಗುವ ನೀರು ಕುಡಿಯಲು ಮಾತ್ರವಲ್ಲದೆ ಕೃಷಿಗೂ ಯೋಗ್ಯವಿಲ್ಲ. ಈ ನೀರಿನ್ನು ಪ್ರತಿಷ್ಠಿತ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳು ಪ್ರಯೋಗಾಲಯಕ್ಕೆ ಒಳಪಡಿಸಿದ್ದು, ನೀರಿನಲ್ಲಿ ಫ್ಲೋರೈಡ್ ಮತ್ತು ನೈಟ್ರೇಟ್ಗಳ ಜೊತೆಗೆ ಅಪಾಯಕಾರಿ ಯುರೇನಿಯಂ ಪತ್ತೆಯಾಗಿರುವುದು ದೃಢಪಟ್ಟಿದೆ. ಇದು ಕುಡಿಯುವ ನೀರು ಹಾಗೂ ಕೃಷಿ ಬೆಳೆಗಳನ್ನು ವಿಷಪೂರಿತಗೊಳಿಸುವುದರ ಜೊತೆಗೆ ಜನರು ಮತ್ತು ಜಾನುವಾರುಗಳನ್ನು ಮಾರಣಾಂತಿಕ ಖಾಯಿಲೆಗಳಿಗೆ ದೂಡುತ್ತಿದೆ” ಎಂದು ಹೇಳಿದೆ.
ಈ ಲೇಖನ ಓದಿದ್ದೀರಾ?: ತಮಿಳುನಾಡು ಚುನಾವಣೆ | ದಳಪತಿ ವಿಜಯ್ ಸೆಳೆಯಲು ಖೆಡ್ಡಾ ತೋಡಿತೇ ಬಿಜೆಪಿ?
“ಬರಪೀಡಿತ ಜಿಲ್ಲೆಗಳ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ನೆಪದಲ್ಲಿ 24 ಸಾವಿರ ಕೋಟಿ ಖರ್ಚು ಮಾಡುತ್ತಿರುವ ಅವೈಜ್ಞಾನಿಕ ಎತ್ತಿನಹೊಳೆ ಯೋಜನೆಯಿಂದ ಇಲ್ಲಿಯವರೆಗೂ ಒಂದು ಬೊಗಸೆ ಕುಡಿಯುವ ನೀರು ಪೂರೈಸಲಾಗಿಲ್ಲ. ಅಲ್ಲದೆ, ಅಂತರ್ಜಲ ಮರುಪೂರಣ ಮಾಡುವ ನೆಪದಲ್ಲಿ ಬೆಂಗಳೂರು ನಗರದ ಅರೆಸಂಸ್ಕರಿತ ತ್ಯಾಜ್ಯ ನೀರನ್ನು ಕೆಲವು ಆಯ್ದ ಕೆರೆಗಳಿಗೆ ಹರಿಸುತ್ತಿರುವುದರಿಂದ ಕುಡಿಯುವ ನೀರಿನ ಮೂಲಗಳು ಕಲುಷಿತಗೊಳ್ಳುತ್ತಿವೆ” ಎಂದು ಹೋರಾಟ ಸಮಿತಿ ವಿವರಿಸಿದೆ.
“ನಗರ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಮರುಬಳಕೆ ಮಾಡಿಕೊಳ್ಳಲು 2013ರಲ್ಲಿ, ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯ, ಕೇಂದ್ರ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಎಂಜಿನಿಯರಿಂಗ್ ಸಂಸ್ಥೆ (CPHEEO), ನವದೆಹಲಿ ಮತ್ತು ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (JICA) ಜಂಟಿಯಾಗಿ ಕೇಂದ್ರಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಕರ್ನಾಟಕ ಸರ್ಕಾರವು ಪಾಲಿಸದೆ ಸಂಪೂರ್ಣವಾಗಿ ಉಲ್ಲಂಘಿಸಿ, ಬೆಂಗಳೂರಿನ ಹೆಬ್ಬಾಳ ನಾಗವಾರ ಕಣಿವೆ (ಎಚ್ಎನ್ ವ್ಯಾಲಿ) ಮತ್ತು ಕೋರಮಂಗಲ-ಚೆಲ್ಲಘಟ್ಟ ವ್ಯಾಲಿ (ಜೆಸಿ ವ್ಯಾಲಿ) ಮತ್ತು ವೃಷಭಾವತಿ ವ್ಯಾಲಿಗಳಿಂದ ಎರಡೇ ಹಂತಗಳಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೆಲವು ಆಯ್ದ ನೀರಾವರಿ ಕೆರೆಗಳಿಗೆ ಹರಿಸುತ್ತಿದೆ. ಇದರಿಂದ ಅಂತರ್ಜಲ ವಿಷಪೂರಿತವಾಗಿ ಜನ ಮತ್ತು ಜಾನುವಾರುಗಳ ಜೀವಕ್ಕೆ ಸಂಚಕಾರ ಉಂಟಾಗಲಿದೆ” ಎಂದು ತಿಳಿಸಿದೆ.
“ಕೃಷ್ಣಾ-ಪೆನ್ನಾರ್ ಜೋಡಿಸುವ ಮೂಲಕ ಕೃಷ್ಣಾ ನದಿ ನೀರನ್ನು ಬಯಲು ಸೀಮೆಗೆ ತಂದು, ಬರಪೀಡಿತ ಜಿಲ್ಲೆಗಳ ನೀರಿನ ಬವಣೆಯನ್ನು ಶಾಶ್ವತವಾಗಿ ಪರಿಹರಿಸಬಹುದಾದರೂ ಸರ್ಕಾರಗಳು ಅದರ ಕಡೆ ಗಮನಹರಿಸುತ್ತಿಲ್ಲ” ಎಂದು ಆರೋಪಿಸಿದೆ.




