ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೆ ತರುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕೋಲಾರ ಜಿಲ್ಲಾಧ್ಯಕ್ಷ ಮೇಡಿಹಾಳ ಎಂ ಕೆ ರಾಘವೇಂದ್ರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ರಾಘವೇಂದ್ರ, “ತೃತೀಯ ಭಾಷೆ ಹಿಂದಿಯು ರಾಜ್ಯದ ವಿದ್ಯಾರ್ಥಿಗಳಿಗೆ ಅನಗತ್ಯ ಒತ್ತಡ ಆಗಿದ್ದು, 2024ರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 90 ಸಾವಿರಕ್ಕೂ ಹೆಚ್ಚು ಹಾಗೂ 2025ರಲ್ಲಿ 1.20 ಲಕ್ಷ ವಿದ್ಯಾರ್ಥಿಗಳು ಹಿಂದಿ ಭಾಷೆಯಲ್ಲಿ ಅನುತ್ತೀರ್ಣರಾಗಿರುವ ಬಗ್ಗೆ ವರದಿಗಳು ಬಂದಿದ್ದು, ಇದು ಆಘಾತಕಾರಿ ಬೆಳವಣಿಗೆ ಆಗಿರುವುದರಿಂದ ಹಿಂದಿ ಭಾಷೆಯ ಕಡ್ಡಾಯವನ್ನು ರದ್ದುಪಡಿಸಿ ಕನ್ನಡ ಪ್ರಥಮ ಭಾಷೆಯಾಗಿ ಹಾಗೂ ಇಂಗ್ಲೀಷ್ ಭಾಷೆಯನ್ನು ದ್ವಿತೀಯ ಭಾಷೆಯಾಗಿ ಕಡ್ಡಾಯ ಗೊಳಿಸಿ ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕೆಂದು” ಒತ್ತಾಯಿಸಿದರು.
“ತೃತೀಯ ಭಾಷೆಯಾದ ಹಿಂದಿಯನ್ನು ಪಠ್ಯಕ್ರಮದಿಂದ ಹೊರಗಿಡಬೇಕು. ರಾಜ್ಯ ಮತ್ತು ಕೇಂದ್ರೀಯ ಶಿಕ್ಷಣ ವ್ಯವಸ್ಥೆಗಳಾದ ಸಿ.ಬಿ.ಎಸ್ ಮತ್ತು ಇ.ಐ.ಸಿ.ಎಸ್.ಇ ಶಾಲೆಗಳಿಗೆ ಏಕ ರೂಪದ ದ್ವಿಭಾಷಾ ನೀತಿ ಜಾರಿಗೊಳಿಸಬೇಕು. ಸಿ.ಬಿ.ಎಸ್.ಇ ಹಾಗೂ ಐ.ಸಿ.ಎಸ್.ಇ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಕನ್ನಡವನ್ನು ಕಡ್ಡಾಯಗೊಳಿಸಬೇಕು. ಕನ್ನಡ ಮಾಧ್ಯಮ
ಶಾಲೆಗಳನ್ನು ಬಲಪಡಿಸಿ, ಉತ್ತಮ ಗುಣಮಟ್ಟದ ಇಂಗ್ಲಿಷ್ ಶಿಕ್ಷಣ ನೀಡಬೇಕೆಂದು” ಅವರು ಆಗ್ರಹಿಸಿದರು.
“ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳು ದ್ವಿಭಾಷಾ ನೀತಿಯನ್ನು ಅನುಸರಿಸುತ್ತಿದ್ದು,ರಾಜ್ಯದಲ್ಲೂ
ನಮ್ಮ ಮಾತೃಭಾಷೆ ಕನ್ನಡದೊಂದಿಗೆ ಜಾಗತಿಕ ವ್ಯವಹಾರಗಳಿಗೆ ಮತ್ತು ಉನ್ನತ ಶಿಕ್ಷಣ ಮತ್ತು ವೃತ್ತಿ ನಿರ್ವಹಣೆಗೆ ಅಗತ್ಯ ಇರುವ ಇಂಗ್ಲಿಷ್ ಭಾಷೆಯನ್ನು ಕಲಿಸುವುದು ಸೂಕ್ತ. ಹಿಂದಿ ಭಾಷೆ ಕಲಿಕೆಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಯಾವುದೇ ಪ್ರಯೋಜನ ಆಗಲಿ ಉದ್ಯೋಗ ಆಗಲಿ ಸಿಗುವುದಿಲ್ಲ” ಎಂದರು.
ಇದನ್ನೂ ಓದಿ: ಕೋಲಾರ | ಕೋಮುಲ್ ಸರ್ಕಾರಿ ನಾಮ ನಿರ್ದೇಶಕರಾಗಿ ಯೂನುಸ್ ಶರೀಫ್ ನೇಮಕ
ಪ್ರತಿಭಟನೆಯಲ್ಲಿ ಜಿಲ್ಲಾ ಪದಾಧಿಕಾರಿ ವಿ.ಮುನಿರಾಜು, ತಾಲ್ಲೂಕು ಅಧ್ಯಕ್ಷರುಗಳಾದ ಮಾಲೂರು ಎಂ ಶ್ರೀನಾವಾಸ, ಕೋಲಾರ ಶಶಿಕುಮಾರ, ಬಂಗಾರಪೇಟೆ ರಾಮಪ್ರಸಾದ್, ಪದಾಧಿಕಾರಿಗಳಾದ ಮಹಬೂಬ್ ಡಿ.ವಿ ಮಂಜುನಾಥ್, ಹುಸೇನ್, ಲತಾಬಾಯಿ, ಮಾಡಿಕ್, ಜೆ ಜಿ ನೇತ್ರ , ಲೀಲಾವತಿ , ಜಯಮ್ಮ, ಸುಮ, ಅಶ್ವಿನಿ, ಭಾಗ್ಯ ಗಣೇಶ್, ಕೆ. ನವೀನ್, ಮಾಲೂರು ಸಂತೋಷ್, ರಾಮಕ್ರಿಷ್ಣಪ್ಪ, ರಂಜಿತ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.





