ಕೇವಲ ಹಣ ಮಾಡುವ ಮನಸ್ಸಿರುವರು ಹುಡುಗಾಟಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬರಬೇಡಿ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಬದ್ದತೆಯಿಂದ ಬನ್ನಿ. ಗಂಭೀರತೆ ಇರಲಿ. ಬದುಕು,ಕನಸುಗಳನ್ನು ಅಡವಿಟ್ಟು ಗೆಲ್ಲುವ ಸಂಕಲ್ಪದಿಂದ ಅಧ್ಯಯನ ಮಾಡಿ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕರೆ ನೀಡಿದರು.
ಕೋಲಾರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಶ್ರೀ ದ್ಯಾವರಪ್ಪ ರತ್ನಮ್ಮ ಎಜುಕೇಷನ್ ಸೊಸೈಟಿ ಆಶ್ರಯದಲ್ಲಿ ಹಾಗೂ ಜಿಲ್ಲಾಡಳಿತ, ಡಿ.ಎಂ.ಆರ್. ಸ್ವರ್ಧಾತ್ಮಕ ಪರೀಕ್ಷಾ ತರಭೇತಿ ಸಂಸ್ಥೆಯಿಂದ ಆಯೋಜಿಸಿದ್ದ ಉನ್ನತ ಸ್ವರ್ಧಾತ್ಮಕ ಪರೀಕ್ಷೆಯ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಡಿಸಿಪಿ ದೇವರಾಜ್ ಅವರು, ತಮ್ಮ ಊರು, ಯುವಕರಿಗಾಗಿ ಏನಾದರು ಮಾಡಬೇಕು ಎಂದು ಸಂಸ್ಥೆ ಕಟ್ಟಿ ಆದರ್ಶಪ್ರಾಯರಾಗಿದ್ದಾರೆ, ತಮ್ಮ ಜನ್ಮ ಭೂಮಿಯ ಋಣ ತೀರಿಸಿಕೊಳ್ಳಲು ತಮ್ಮ ತಂದೆ ತಾಯಿಯ ಹೆಸರಿನಲ್ಲಿ ಈ ಸಂಸ್ಥೆಯನ್ನು ಪ್ರಾರಂಭಿಸಿ ಅನೇಕ ಪ್ರತಿಭೆಗಳನ್ನು ನಮ್ಮ ದೇಶಕ್ಕೆ ನಮ್ಮ ರಾಜ್ಯಕ್ಕೆ ಕೊಡುಗೆಯಾಗಿ ನೀಡುತ್ತಿರುವುದು ಅಭಿನಂದನೀಯ ಎಂದರು.
ಇಂತಹ ಸಂಸ್ಥೆಯಲ್ಲಿ ಉಚಿತವಾಗಿ ತರಬೇತಿ ಪಡೆಯುವ ನೀವೆಲ್ಲಾ ನಿಜಕ್ಕೂ ಅಧೃಷ್ಟವಂತರು ಎಂದ ಅವರು ಉನ್ನತ ಪರೀಕ್ಷೆಗಳಲ್ಲಿ ಗೆದ್ದವರು ಹೆಚ್ಚು ಕೋಲಾರದವರು ಈ ದೇಶದ ಆಸ್ತಿಗಳಾಗಿ ಹೊರ ಹೊಮ್ಮಿದ್ದಾರೆ. ಐಎಎಸ್, ಐಪಿಎಸ್ ಅಧಿಕಾರಿ ಆದರೆ ಏನೋ ಮಾಡಬಹುದು ಅಂದಕೊಂಡಿದ್ದಾರೆ. ಆಸಕ್ತಿಯನ್ನು ಈಡೇರಿಸಿಕೊಳ್ಳಲು ಕ್ರಿಯಾಯೋಜನೆ ತಯಾರಿಸಿಕೊಳ್ಳಬೇಕು. ಆಸಕ್ತಿ ಜತೆಗೆ ಇಚ್ಛಾಶಕ್ತಿಯಿರಬೇಕು, ಕೌಶಲ್ಯ, ಗುಣಮಟ್ಟವು ತಯಾರಿಗೆ ಆಸಕ್ತಿ ತೋರುತ್ತದೆ. ಇದ್ಯಾವುದನ್ನು ಪದವಿ ಹಂತದಲ್ಲಿ ಕಾಣಲು ಸಾಧ್ಯವಿಲ್ಲ, ಇಂತಹ ಪರೀಕ್ಷೆಗಳನ್ನು ಬರೆಯುವಾಗ ಹಿಂಜರಿಕೆಬೇಕಿಲ್ಲ ಎಂದು ಕಿವಿಮಾತು ಹೇಳಿದರು.

ಅಧಿಕಾರ ಸಿಕ್ಕ ಮೇಲೆ ಅಹಂಕಾರದಿಂದ ವರ್ತಿಸುವುದು ಬೇಡ. ದುಡ್ಡು ಸಿಗುತ್ತದೆ ಎಂಬ ಉದ್ದೇಶದಿಂದ ಯುಪಿಎಸ್ಸಿ ಪರೀಕ್ಷೆ ಬರೆಯಬೇಡಿ, ಹಣಕ್ಕಾಗಿ ಸಾವಿರಾರು ಅವಕಾಶಗಳು ಇವೆ. ಭ್ರಮೆಗಳನ್ನು ಬಿಟ್ಟು ಪರೀಕ್ಷೆಗಳನ್ನು ಬರೆಯಿರಿ ಎಂದ ಅವರು, ಯುವಜನಾಂಗ ಬದುಕು ರೂಪಿಸಿಕೊಳ್ಳುವಾಗ ಎಡವುತ್ತಿದ್ದಾರೆ ಎಂದು ವಿಷಾದಿಸಿದರು.
ಬೆಂಗಳೂರಿನ ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ಮಾತನಾಡಿ, ಇತಿಹಾಸ ಅರಿಯದವರು ಇತಿಹಾಸವನ್ನು ಸೃಷ್ಟಿಸಲಾರರು, ಯಾವುದೇ ಸಾಧನೆ ಮಾಡಲು ಸಾಧ್ಯವಾಗದು. ಟೀಕೆ ಟಿಪ್ಪಣಿಗಳಿಗೆ ಕಿವಿಗೊಡದೇ ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.
ಬಡತನದಿಂದಾಗಿ ಉನ್ನತ ಮಟ್ಟದ ಸ್ವರ್ಧಾತ್ಮಕ ಪರೀಕ್ಷೆಗಳನ್ನು ಪಡೆಯಲು ಅನೇಕ ಪ್ರತಿಭೆಗಳಗೆ ತರಬೇತಿ ಪಡೆಯಲು ಬೆಂಗಳೂರು ದುಬಾರಿಯಾಗಿದ್ದು, ಎಲೆಮರೆಯ ಕಾಯಂತೆ ಬೆಳಕಿಗೆ ಬಾರದೆ ಇರುವವರಿಗೆ ಅತಿಕಡಿಮೆ ವೆಚ್ಚದಲ್ಲಿ ಜಿಲ್ಲಾ ಕೇಂದ್ರದಲ್ಲಿ ತರಬೇತಿ ನೀಡುವ ಮೂಲಕ ಪ್ರತಿಭೆಗಳನ್ನು ಬೆಳಕಿಗೆ ತರುವ ದಿಸೆಯಲ್ಲಿ ಡಿಎಂಆರ್ ಎಜುಕೇಷನ್ ಫೌಂಡೇಷನ್ ಕೋಲಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವುದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಮ್ಮ ಸಂಸ್ಥೆಯಲ್ಲಿ ತರಭೇತಿ ಪಡೆದವರು ಕೆ.ಎ.ಎಸ್. ಐ.ಆರ್.ಎಸ್. ಪರೀಕ್ಷೆಗಳನ್ನು ಬರೆದು ಡಿ.ಸಿ. ಎ.ಸಿ. ತಹಶೀಲ್ದಾರ್ ಸೇರಿದಂತೆ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಪೊಲೀಸ್ ಇಲಾಖೆಯ ಎಸ್.ಐ.ಗೆ ಆಯ್ಕೆಯಾಗಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಉತ್ತಮ ಗುಣಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.
ಇದೇ ಸಂದರ್ಭಧಲ್ಲಿ ತಮ್ಮ ಗುರುಗಳಾದ ನಿವೃತ್ತ ಐಪಿಎಸ್ ಅಧಿಕಾರಿ ರಾಘವೇಂದ್ರ ರಾವ್ ಅವರ ಶಿಷ್ಯರು ಈ ರಾಷ್ಟ್ರದ ಪ್ರತಿಯೊಂದು ರಾಜ್ಯದಲ್ಲಿ ಇದ್ದಾರೆ. ಅವರ ಬಳಿ ತರಬೇತಿ ಪಡೆದ ತಾನು ಇಂದು ನಿಮ್ಮ ಮುಂದೆ ಡಿ.ಸಿ.ಪಿ. ಆಗಿ ನಿಲ್ಲಲು ಸಾಧ್ಯವಾಯಿತು. ಅವರು ಓರ್ವ ಅಧಿಕಾರಿಯಾಗಿ ಅಲ್ಲ ಅಧ್ಯಯನ ಶೀಲರು, ಚಿಂತಕರು ಆಗಿದ್ದು ಬಹುಮುಖದ ಪ್ರತಿಭೆಗಳನ್ನು ಬೆಳೆಸಿದಂತಹ ಗುರುಗಳಾಗಿದ್ದಾರೆ. ಅವರ ಉಪನ್ಯಾಸ ಕೇಳಲು ನೀವೆಲ್ಲಾ ಅದೃಷ್ಟ ಮಾಡಿರುವಿರಿ ಎಂದು ಶ್ಲಾಘಿಸಿದರು.
ಇದನ್ನು ಓದಿದ್ದೀರಾ? ಹಾಸನ | ಬಂಡವಾಳಶಾಹಿಗಳಿಗೆ ಪರ್ಯಾಯ ಶಕ್ತಿಯಾಗಿ ದುಡಿಯುವ ಜನತೆ: ಮೀನಾಕ್ಷಿ ಸುಂದರಂ
ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಕೆ.ವಿ.ಶಂಕರಪ್ಪ, ರಾಜ್ಯ ಪತ್ರಕರ್ತರ ಕಾರ್ಯಕಾರಿ ಸಮಿತಿ ಸದಸ್ಯ ವಿ.ಮುನಿರಾಜು, ಸಹ್ಯಾದ್ರಿ ಕಾಲೇಜು ಅಧ್ಯಕ್ಷ ಉದಯ ಕುಮಾರ್, ರವಿ ಕಾಲೇಜಿನ ಸಂಸ್ಥಾಪಕ ಮೂರಂಡಹಳ್ಳಿ ಡಾ.ಇ. ಗೋಪಾಲಪ್ಪ, ಡಾ.ಅರವಿಂದ್, ಡಾ. ಶಂಕರ್, ಡಾ.ಬೀರೇಗೌಡ, ಆರ್.ವಿ. ಕಾಲೇಜಿನ ವೇದಾ, ಕೃಷಿ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪರಮೇಶ್ವರ್, ಡಾ.ಅರಿವು ಶಿವಪ್ಪ,ಪಂಡಿತ್ ಮುನಿವೆಂಕಟಪ್ಪ, ಮುಂತಾದವರು ಉಪಸ್ಥಿತರಿದ್ದರು.





