ಕೋಲಾರ ತಾಲೂಕಿನ ಹುತ್ತೂರು ಹೋಬಳಿಯ ಅಜ್ಜಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಗೆ ಬುಧವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮುನಿಸ್ವಾಮಿ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿ ಬಾಹ್ಯ ಬೆಂಬಲದೊಂದಿಗೆ ಕಾಂತರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಮಾತ್ರವೇ ಎರಡೂ ಸ್ಥಾನಗಳಿಗೆ ಒಬ್ಬೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ, ಅವಿರೋಧ ಆಯ್ಕೆ ಸುಗಮವಾಯಿತು. ಚುನಾವಣಾಧಿಕಾರಿ ಇಬ್ಬರು ಅವಿರೋಧವಾಗಿ ಆಯ್ಕೆಯಾದವರನ್ನು ಘೋಷಿಸಿದ್ದಾರೆ. ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರು ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸೀಸಂದ್ರ ಗೋಪಾಲಗೌಡ, “ಎಲ್ಲಿ ಹಾಲು ಉತ್ಪಾದಕರ ಸಹಕಾರವಿತ್ತದೆಯೋ ಅಲ್ಲಿ ಮಾತ್ರ ಸಂಘ ಮತ್ತು ಹಾಲು ಉತ್ಪಾದಕರು ಆರ್ಥಿಕವಾಗಿ ಪ್ರಗತಿ ಕಾಣಲು ಸಾಧ್ಯ. ಹಾಲು ಉತ್ಪಾದಕರಿಗೆ ಮತ್ತಷ್ಟು ಸಾಲ ಸೌಲಭ್ಯ ಕಲ್ಪಿಸಿ ಹೈನುಗಾರಿಕೆ ನಂಬಿರುವವರಿಗೆ ನೆರವಾಗಿ ನಿಲ್ಲಲು ನೂತನ ಆಡಳಿತ ಮಂಡಳಿ ಮುಂದಾಗಲಿ. ಜೊತೆಗೆ ರಾಸುಗಳಿಗೆ ವಿಮೆ, ಹಾಲು ಉತ್ಪಾದಕರಿಗೆ ಆರೋಗ್ಯ ವಿಮೆ, ಸಕಾಲದಲ್ಲಿ ಬೋನಸ್ ವಿತರಣೆ ಸೇರಿದಂತೆ ಸಂಘ ಮತ್ತು ಹೈನುಗಾರರ ಪ್ರಗತಿಗಾಗಿ ಶ್ರಮಿಸಲಿ” ಎಂದು ಹಾರೈಸಿದರು.
ಇದನ್ನೂ ಓದಿ: ಕೋಲಾರ | ಗಾಂಧಿನಗರ-ಗದ್ದೆಕಣ್ಣೂರು ರಸ್ತೆ ಒತ್ತುವರಿ; ಕ್ರಮಕ್ಕೆ ಸ್ಥಳೀಯರ ಒತ್ತಾಯ
ಈ ಸಂದರ್ಭದಲ್ಲಿ ಅಜ್ಜಪ್ಪನಹಳ್ಳಿ ಡೇರಿ ನಿರ್ದೇಶಕ ವೀರಭದ್ರ, ಚಿಕ್ಕಣ್ಣ, ಲಕ್ಷ್ಮಮ್ಮ, ಮುನಿಸ್ವಾಮಿ, ವೆಂಕಟಮ್ನ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಪ್ಪ, ಮುಖಂಡರಾದ ನಾಗರಾಜ್, ನವೀನ್, ಮಂಜುನಾಥ್, ರಾಮಸ್ವಾಮಿ ಹಾಗೂ ಮುಂತಾದವರು ಇದ್ದರು.





