ಕೋಲಾರದ ಇತಿಹಾಸವಿರುವ ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆ ಕೋಲಾರದ ಜೀವಾಳವಾಗಿದೆಯೆಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಶ್ರೀಮಂತರು ಹಣ ಖರ್ಚು ಮಾಡಿ ಒಳ್ಳೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ಬಡವರು ಹಾಗೂ ಮಧ್ಯಮ ವರ್ಗದ ಜನರು ತಮಗೆ ಏನಾದರೂ ಆರೋಗ್ಯ ಸಮಸ್ಯೆ ಉಂಟಾದರೆ ಅವರು ನೇರವಾಗಿ ಹೋಗುವುದೇ ಸರ್ಕಾರಿ ಆಸ್ಪತ್ರೆಗಳಿಗೆ. ಅಲ್ಲಿ ಸರಿಯಾದ ರೀತಿಯಲ್ಲಿ ಚಿಕಿತ್ಸೆ ದೊರೆತರೆ ಬಡವರು ನೋವಿನಲ್ಲಿಯೂ ಬಹಳ ಸಂತೋಷಪಡುತ್ತಾರೆ. ಇದೇ ನಿಟ್ಟಿನಲ್ಲಿ ಕೋಲಾರ ಜಿಲ್ಲಾ ಆಸ್ಪತ್ರೆಯಲ್ಲಿ ಸುಮಾರು 16 ಕೋಟಿ ಅನುದಾನದಲ್ಲಿ ಸರ್ಕಾರ ಸುಮಾರು 50 ಹಾಸಿಗೆ ವ್ಯವಸ್ಥೆಯ ತೀವ್ರ ನಿಗಾ ಘಟಕ ನಿರ್ಮಾಣ ಮಾಡಿದ್ದು ಜನರಿಗೆ ಬಹಳ ಅನುಕೂಲವಾಗಲಿದೆ. ಇದರ ಜತೆಗೆ ಯಾವುದೇ ರೀತಿಯ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತೆ ಡಯಾಲಿಸಿಸ್ ಘಟಕವನ್ನೂ ಪ್ರಾರಂಭ ಮಾಡಿರುವುದು ಬಹಳ ಒಳ್ಳೆಯ ಬೆಳವಣಿಗೆ ಎಂದೇ ಹೇಳಬಹುದು.
ಸಾಮಾನ್ಯ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡುವುದಷ್ಟೇ ಅಲ್ಲದೆ, ಎಲ್ಲ ರೀತಿಯ ರೋಗಗಳಿಗೂ ಚಿಕಿತ್ಸೆ ದೊರೆಯುತ್ತದೆ. ಉದಾಹರಣೆಗೆ ಹೇಳುವುದಾದರೆ ಡಯಾಲಿಸಿಸ್, ಹೆರಿಗೆ, ಕಾನ್ಸರ್, ಸಿಟಿ ಸ್ಕ್ಯಾನ್, ಐಸಿಯು ಸೌಲಭ್ಯ, ವೆಂಟಿಲೇಟರ್ ಸೌಲಭ್ಯ, ಲ್ಯಾಬ್, ವಿಶೇಷವಾಗಿ ಮಕ್ಕಳ ಆಸ್ಪತ್ರೆ, ತುರ್ತು ಚಿಕಿತ್ಸಾ ಘಟಕ, ಎಕೋ, ಎಂಡೊಸ್ಕೋಪಿಯೊ ಈ ರೀತಿಯಲ್ಲಿ ಇನ್ನೂ ಹಲವಾರು ಸೌಲಭ್ಯಗಳು ಇಲ್ಲಿ ಸಿಗಲಿದ್ದು, ಪ್ರತಿದಿನ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಜನ ಉಚಿತವಾಗಿ ಚಿಕಿತ್ಸೆ ಪಡೆಯುತ್ತಾರೆ.
ಕೋಲಾರ ಜಿಲ್ಲಾ ಆಸ್ಪತ್ರೆ ಅಭಿವೃದ್ಧಿ ಮಾಡಲು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸಹಕಾರ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಒಳ್ಳೆಯ ಕೆಲಸ ಮಾಡಲಿಕ್ಕೆ ಸಾಧ್ಯವಾಯಿತು. ಕೋಲಾರ ಶಾಸಕ ಕೊತ್ತೂರ್ ಮಂಜುನಾಥ್ ಅವರು ಮೊದಲಿನಿಂದಲೂ ಆರೋಗ್ಯ ಕ್ಷೇತ್ರದ ಬಗ್ಗೆ ಹೆಚ್ಚು ಆದ್ಯತೆ ವಹಿಸಿ, ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಎರಡೂವರೆ ವರ್ಷದಲ್ಲಿ 100 ಕೋಟಿಗೂ ಹೆಚ್ಚು ಅನುದಾನ ತಂದು ಅಭಿವೃದ್ದಿ ಮಾಡುತ್ತಿದ್ದಾರೆ. ಬಡ ಜನರಿಗೆ ಇದರಿಂದ ಬಹಳ ಅನುಕೂಲವಾಗಿದೆ.

ಕೋಲಾರ ಜಿಲ್ಲಾ ಆಸ್ಪತ್ರೆಯಲ್ಲಿ ಮೊದಲಿನಿಂದಲೂ ಈಗ ಹೆಚ್ಚು ಸೌಲಭ್ಯದೊಂದಿಗೆ ಇಲ್ಲಿ ಹಲವಾರು ರೀತಿಯ ಚಿಕಿತ್ಸೆ ದೊರೆಯುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಈವರೆಗೂ ಸರ್ಕಾರಿ ಮೆಡಿಕಲ್ ಕಾಲೇಜು ಇಲ್ಲದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಾಗಿ ಜಿಲ್ಲಾ ಆಸ್ಪತ್ರೆಯ ಮೇಲೆಯೇ ಅವಲಂಬಿತರಾಗಿದ್ದಾರೆ.
ಕೋಲಾರ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ ಜಗದೀಶ್ ಅವರು ಈ ದಿನ.ಕಾಮ್ಗೆ ಪ್ರತಿಕ್ರಿಯೆ ನೀಡಿದ್ದು, “ಕೆಲವು ದಿನಗಳ ಹಿಂದೆ ಕೋಲಾರ ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ, ಡಯಾಲಿಸಿಸ್, ಎಕೋ ಮತ್ತು ಎಂಡೊಸ್ಕೊಪಿಯೊ ವಿಭಾಗಗಳನ್ನು ಪ್ರಾರಂಭ ಮಾಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್, ಕೋಲಾರ ಶಾಸಕ ಕೊತ್ತೂರ್ ಮಂಜುನಾಥ್ ಹಾಗೂ ಜನಪ್ರತಿನಿಧಿಗಳು ಸೇರಿ ಜನವರಿ 20ರಂದು ಈ ಎಲ್ಲ ವಿಭಾಗಗಳನ್ನು ಉದ್ಘಾಟನೆ ಮಾಡಿದ್ದಾರೆ” ಎಂದರು.

“ಹೊಸದಾಗಿ ಪ್ರಾರಂಭ ಮಾಡಿರುವ ತೀವ್ರ ನಿಗಾ ಘಟಕದಲ್ಲಿ ಸುಮಾರು 50 ಬೆಡಡ್ಗಳ ವ್ಯವಸ್ಥೆಯಿದ್ದು, ಇಲ್ಲಿ ಸುಮಾರು ನಾಲ್ಕು ವಿಭಾಗಗಳನ್ನು ಪ್ರಾರಂಭಿಸಿ ಜನರಿಗೆ ಚಿಕಿತ್ಸೆ ನೀಡಲು ಯೋಜನೆ ಮಾಡಿಕೊಂಡಿದ್ದೇವೆ. ಸರ್ಕಾರ ಸುಮಾರು 16 ಕೋಟಿಗೂ ಹೆಚ್ಚು ಅನುದಾನ ನೀಡಿ ತೀವ್ರ ನಿಗಾ ಘಟಕವನ್ನು ಪ್ರಾರಂಭಿಸಿದೆ. ಅದರ ಜತೆಗೆ ನಮ್ಮ ಜಿಲ್ಲಾ ಆಸ್ಪತ್ರೆಯಲ್ಲಿ ಈವರೆಗೂ ಕೇವಲ 12 ಹಾಸಿಗೆಗಳ ಡಯಾಲಿಸಿಸ್ ಸೌಲಭ್ಯ ಇತ್ತು. ಈಗ ಅಪ್ಡೇಟ್ ಮಾಡಿ ಅನುಮತಿ ಪಡೆದು 20 ಡಯಾಲಿಸಿಸ್ ಹಾಸಿಗೆ ವ್ಯವಸ್ಥೆ ಮಾಡಿದ್ದೇವೆ. ಡಯಾಲಿಸಿಸ್ ಬಿಲ್ಡಿಂಂಗ್ಗೆ ವಿಶೇಷವಾಗಿ ಸ್ಥಳೀಯ ಶಾಸಕ ಕೊತ್ತೂರ್ ಮಂಜುನಾಥ್, ಸಂಸದ ಮಲ್ಲೇಶ್ ಬಾಬು, ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್, ಅನಿಲ್ ಕುಮಾರ್, ಇಂಚರ ಗೊವಿಂದರಾಜು ಅವರ ನಿಧಿಯಿಂದ ನೀಡಿದ ಅನುದಾನದಲ್ಲಿ 20 ಹಾಸಿಗೆಗಳ ಡಯಾಲಿಸಿಸ್ ವ್ಯವಸ್ಥೆ ಮಾಡಿದ್ದೇವೆ. ಇಲ್ಲಿ ಡಯಾಲಿಸಿಸ್ ರೋಗಿಗಳಿಗೆ ನಿತ್ಯವೂ ಸೇವೆ ನೀಡುತ್ತೇವೆ. ಎಲ್ಲರೂ ಕೂಡ ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ತಿಳಿಸಿದರು.
“ಸುಮಾರು ಐದು ವರ್ಷಗಳ ಹಿಂದೆ ಕೋಲಾರ ಜಿಲ್ಲಾ ಆಸ್ಪತ್ರೆಗೆ ಎಕೊ ಮಿಷನ್ ಸರಬರಾಜಾಗಿತ್ತು. ಆದರೆ ಅದನ್ನು ಉಪಯೋಗ ಮಾಡುತ್ತಿರಲಿಲ್ಲ. ಜಿಲ್ಲಾ ಅಧಿಕಾರಿಗಳು ಸಭೆ ನಡೆಸಿ ನಮಗೆ ಎಕೊ ಮಿಷನ್ ಪ್ರಾರಂಭಿಸಲು ಅನುಮತಿ ನೀಡಿದ್ದು ಎಕೊ ಟೆಕ್ನಿಷಿಯನ್ ನೇಮಕ ಮಾಡಿ ಮತ್ತು ಜಯದೇವ ಆಸ್ಪತ್ರೆಯಲ್ಲಿ ತರಬೇತಿ ಪಡೆದ ಇಬ್ಬರು ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಎಲ್ಲರ ಸಹಕಾರದಿಂದ ಎಕೊ ವಿಭಾಗ ಪ್ರಾರಂಭ ಮಾಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಈ ಚಿಕಿತ್ಸೆಗೆ ₹1500-₹2000 ಖರ್ಚು ಬರುತ್ತದೆ. ಆದರೆ ಜಿಲ್ಲಾ ಆಸ್ಪತ್ರೆಯಲ್ಲಿ ನಾವು ಉಚಿತವಾಗಿ ಸೇವೆ ನೀಡುತ್ತಿದ್ದೇವೆ” ಎಂದು ಹೇಳಿದರು.
“ಕೋಲಾರ ಜಿಲ್ಲಾ ಆಸ್ಪತ್ರೆಯಲ್ಲಿ ಒಳ್ಳೆಯ ರೀತಿಯಲ್ಲಿ ಚಿಕಿತ್ಸೆ ನೀಡುತ್ತಾರೆ. ಒಳ್ಳೆಯ ವೈದ್ಯರು ಕೂಡ ಇದ್ದಾರೆ. ಹಲವಾರು ಕಾಯಿಲೆಗಳಿಗೆ ಇಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಕೋಲಾರ ಜಿಲ್ಲೆಯ ಎಲ್ಲ ಜನರೂ ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಸ್ಥಳೀಯ ನಿವಾಸಿ ಮೊಹಮ್ಮದ್ ರಫಿ ಅಭಿಪ್ರಾಯ ವ್ಯಕ್ತಪಡಿಸಿದರು.

ಎಕೊ ಮಿಷನ್ನಂತೆ ಎಂಡೊಸ್ಕೊಪಿಯೊ ಮಿಷನ್ ಕೂಡ ಹಲವಾರು ವರ್ಷಗಳಿಂದ ಕಾರ್ಯನಿರ್ವಸಿಸದೆ ಹೀಗೆಯೇ ಇತ್ತು. ಈ ಕುರಿತು ಬೆಂಗಳೂರಿನಲ್ಲಿ ವೈದ್ಯರಿಗೆ ತರಬೇತಿ ನೀಡಿದ್ದು, ಎಕೋಸ್ಕೋಪಿಯೊ ಚಿಕಿತ್ಸೆ ಪ್ರಾರಂಭ ಮಾಡಲಾಗುತ್ತಿದೆ. ಈ ರೀತಿ ಎಲ್ಲ ಸೇವೆಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಉತ್ತಮವಾಗಿ ನೀಡುವುದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತದೆ. 24/7 ಎಲ್ಲ ತುರ್ತು ಸೇವೆಗಳನ್ನು ನೀಡಲಾಗುತ್ತಿದ್ದು, ಕೋಲಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಐಸಿಯು ಸೇವೆ, ಡಯಾಲಿಸಿಸ್, ವೆಂಟಿಲೇಟರ್, ಲ್ಯಾಬ್, ಸಿಟಿ ಸ್ಕ್ಯಾನ್, ಎಂಆರ್ಐ, ಎಕ್ಸ್ರೇ, ಹೆರಿಗೆ ವ್ಯವಸ್ಥೆ, ಮಕ್ಕಳಿಗೆ ವಿಶೇಷವಾದ ಸೇವೆ ಹಾಗೂ ಇತರೆ ಹಲವಾರು ಸೇವೆಗಳನ್ನು ಒದಗಿಸುತ್ತಿದೆ.
ನಿತ್ಯವೂ 15ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಲಾಗುತ್ತಿದ್ದು, ಕಡಿಮೆ ತೂಕ ಇರುವ ಮಕ್ಕಳಿಗೆ ವಿಶೇಷವಾದ ಚಿಕಿತ್ಸೆ ನೀಡಿ ಆರೋಗ್ಯ ಕಾಪಾಡಲಾಗುತ್ತಿದೆ. ಎಲ್ಲ ರೀತಿಯ ಆರೋಗ್ಯ ಸೇವೆಗಳು ಆರಂಭವಾಗಿರುವುದರಿಂದ ಜಿಲ್ಲಾ ಆಸ್ಪತ್ರೆಗೆ ನಿತ್ಯವೂ ಸುಮಾರು 1200 ರಿಂದ 1600 ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಲಾರ ಜಿಲ್ಲೆಯಲ್ಲದೆ ಅಕ್ಕಪಕ್ಕದ ಜಿಲ್ಲೆಯವರೂ ಕೂಡ ಇಲ್ಲಿನ ಸೇವೆಗಳನ್ನು ಪಡೆಯುತ್ತಿದ್ದಾರೆ.
ಡೇ ಕೇರ್ ಕಿಮೋಥೆರಪಿ ಪ್ರಾರಂಭ ಮಾಡಿ ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ಸೇವೆ ಒದಗಿಸಲಾಗುತ್ತಿದೆ. ಈ ರೀತಿ ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಂಪೂರ್ಣವಾಗಿ ಉಚಿತ ಸೇವೆ ನೀಡಲಾಗುತ್ತಿದೆ.

ಕೋಲಾರ ಜಿಲ್ಲಾ ಎಸ್ ಎನ್ ಆರ್ ಆಸ್ಪತ್ರೆಯಲ್ಲಿ ಈ ಹಿಂದೆ ಡಯಾಲಿಸಿಸ್ಗೆ ಹೆಚ್ಚು ಸೌಕರ್ಯಗಳು ಇರಲಿಲ್ಲ. ಸರ್ಕಾರ 16 ಕೋಟಿಗೂ ಅಧಿಕ ಅನುದಾನ ನೀಡಿ ಖಾಸಗಿ ಆಸ್ಪತ್ರೆಗಿಂತ ಹೆಚ್ಚಿನ ಸೌಲಭ್ಯದೊಂದಿಗೆ ತೀವ್ರ ನಿಗಾ ಘಟಕವನ್ನು ನಿರ್ಮಾಣ ಮಾಡಿದ್ದು, ಸಾರ್ವಜನಿಕರಿಗೆ ಇದರಿಂದ ಹೆಚ್ಚು ಅನುಕೂಲವಾಗುತ್ತದೆ. ಕೋಲಾರ ಜಿಲ್ಲೆಗೆ ಎಸ್ ಎನ್ ಆರ್ ಆಸ್ಪತ್ರೆ ಈಗ ನಂಬರ್ ಒನ್ ಆಸ್ಪತ್ರೆಯಾಗಿದೆ. ಇಲ್ಲಿ ಚಿಕಿತ್ಸೆ ಪಡೆಯಲು ಕೇವಲ ಕೋಲಾರದಿಂದ ಮಾತ್ರವಲ್ಲದೆ ಮಾಲೂರು, ಬಂಗಾರಪೇಟೆ, ಕೆಜಿಎಫ್, ಮುಳಬಾಗಿಲು, ಶ್ರೀನಿವಾಸಪುರ ಹಾಗೂ ಪಕ್ಕದ ಜಿಲ್ಲೆಗಳಿಂದಲೂ ಸಾವಿರಾರು ಜನರು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋಲಾರದ ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆಯು ಜಿಲ್ಲೆಯ ಆರೋಗ್ಯ ವ್ಯವಸ್ಥೆಯ ಜೀವಾಳವಾಗಿ ನಿಲ್ಲುವುದರಲ್ಲಿ ಸಂದೇಹವಿಲ್ಲ. ಬಡವರು ಮತ್ತು ಮಧ್ಯಮ ವರ್ಗದವರು ಸರ್ಕಾರಿ ಆಸ್ಪತ್ರೆಗಳ ಮೇಲೆಯೇ ಅವಲಂಬಿತರಾಗಿರುವುದರಿಂದ ಇಲ್ಲಿನ ಸೌಲಭ್ಯಗಳ ಸುಧಾರಣೆಯಾಗಿರುವುದು ನೇರವಾಗಿ ಸಮಾಜದ ದುರ್ಬಲ ವರ್ಗಗಳಿಗೆ ಆಶಾಕಿರಣವಾಗಿದೆ.
ಇದನ್ನೂ ಓದಿದ್ದೀರಾ? ನ್ಯಾಯದ ಹೆಸರಲ್ಲಿ ಮುಸ್ಲಿಮರ ಮೇಲೆ ನಿರಂತರ ಅನ್ಯಾಯ; ಖುಲಾಸೆಗೊಂಡ ಪ್ರಕರಣಗಳೆಷ್ಟು ಗೊತ್ತೇ?
ಈ ಅಭಿವೃದ್ಧಿಗಳು ಕೇವಲ ಕಟ್ಟಡಗಳಷ್ಟೇ ಅಲ್ಲ; ಅವು ಸಾಮಾಜಿಕ ನ್ಯಾಯದ ಪ್ರತೀಕಗಳಾಗಿವೆ. ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಉಚಿತ ಅಥವಾ ಕಡಿಮೆ ವೆಚ್ಚದಲ್ಲಿ ಒದಗಿಸುವ ಮೂಲಕ ಸರ್ಕಾರ ತನ್ನ ಬದ್ಧತೆಯನ್ನು ತೋರಿಸಿದೆ. ಇದರಿಂದ ಕೋಲಾರ ಜಿಲ್ಲೆಯ ಜನತೆಗೆ ಆತ್ಮವಿಶ್ವಾಸ ಮತ್ತು ಭದ್ರತೆಯ ಭಾವನೆ ಹೆಚ್ಚಾಗಲಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ತೀವ್ರ ನಿಗಾ ಮತ್ತು ಡಯಾಲಿಸಿಸ್ ಘಟಕಗಳು ಕೋಲಾರದ ಆರೋಗ್ಯ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ತೆರೆದಿವೆ. ಇದು ಭವಿಷ್ಯದಲ್ಲಿ ಇನ್ನಷ್ಟು ಸುಧಾರಣೆಗಳಿಗೆ ಮಾರ್ಗ ಮಾಡಿಕೊಡುವ ಮಹತ್ವದ ಹೆಜ್ಜೆಯಾಗಿದ್ದು, ಜನರ ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಉನ್ನತೀಕರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಇಂತಹ ಯೋಜನೆಗಳ ಮುಂದುವರಿಕೆಯೇ ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಜನಸ್ನೇಹಿಯಾಗಿ ಮಾಡುವ ನಿಜವಾದ ಉಪಾಯವಾಗಿದೆ.





