ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ರಂಜಾನ್ ಮಾಸದ ಹಿನ್ನೆಲೆಯಲ್ಲಿ ಧಾರ್ಮಿಕ ಭಾವನೆಗಳ ಜೊತೆಗೆ ವ್ಯಾಪಾರ ಚಟುವಟಿಕೆಗಳೂ ಗರಿಗೆದರಿವೆ. ವಿಶೇಷವಾಗಿ ಇಫ್ತಾರ್ ವೇಳೆ ಸೇವಿಸುವ ತಿಂಡಿಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಸಮೋಸಗಳಿಗೆ ಅಪಾರ ಬೇಡಿಕೆ ಕಂಡುಬರುತ್ತಿದೆ. ಸಣ್ಣ ಪಟ್ಟಣವಾಗಿದ್ದರೂ ಪ್ರತಿದಿನ ಸರಾಸರಿ 25 ಸಾವಿರದಿಂದ 30 ಸಾವಿರದವರೆಗೆ ಸಮೋಸಗಳು ಮಾರಾಟವಾಗುತ್ತಿರುವುದು ಗಮನಾರ್ಹವಾಗಿದೆ.
ರಂಜಾನ್ ಮಾಸದಲ್ಲಿ ಮುಸ್ಲಿಂ ಸಮುದಾಯದವರು ಪ್ರಾತಃಕಾಲದಿಂದ ಸೂರ್ಯಾಸ್ತದವರೆಗೆ ಉಪವಾಸ ಆಚರಿಸಿ, ಸಂಜೆ ಮಗರಿಬ್ ನಮಾಜಿನ ಬಳಿಕ ಇಫ್ತಾರ್ ಮೂಲಕ ಉಪವಾಸ ಮುರಿಯುತ್ತಾರೆ. ಖರ್ಜೂರ, ಹಣ್ಣುಹಂಪಲು, ರೂಹ್ ಅಫ್ಜಾ ಪಾನೀಯ, ಗಂಜಿ (ಆಶ್) ಜೊತೆಗೆ ಬಿಸಿ ಬಿಸಿ ಸಮೋಸಗಳು ಇಫ್ತಾರ್ನ ಅವಿಭಾಜ್ಯ ಭಾಗವಾಗಿವೆ. ಉಪವಾಸದ ನಂತರ ಕರಕರೆ, ರುಚಿಕರ ತಿಂಡಿಗೆ ಇರುವ ಆಸಕ್ತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದರಿಂದ ಸಮೋಸಗಳ ಬೇಡಿಕೆಯೂ ಗಣನೀಯವಾಗಿ ಏರಿಕೆಯಾಗಿದೆ.

ಪಟ್ಟಣದ ಆಜಾದ್ ರಸ್ತೆ, ಜಾಮಿಯಾ ಮಸೀದಿ, ಸೂಫಿಯಾ ಮಸೀದಿ, ಜಾಕಿರ್ ಹುಸೇನ್ ಮೊಹಲ್ಲಾ, ಚಿಂತಾಮಣಿ ರಸ್ತೆ ಹಾಗೂ ನೂರಾಣಿ ಮಸೀದಿ ಸುತ್ತಮುತ್ತ ಸಂಜೆ ನಾಲ್ಕು ಗಂಟೆಯಿಂದಲೇ ಸಮೋಸ ಅಂಗಡಿಗಳ ಮುಂದೆ ಗ್ರಾಹಕರ ಸಾಲು ಕಾಣಸಿಗುತ್ತದೆ. ಇಫ್ತಾರ್ ಸಮಯ ಸಮೀಪಿಸುತ್ತಿದ್ದಂತೆ ಜನಸಂದಣಿ ಮತ್ತಷ್ಟು ಹೆಚ್ಚಾಗುತ್ತದೆ. ಕೆಲ ಅಂಗಡಿಗಳಲ್ಲಿ ಕೇವಲ ಒಂದು ಗಂಟೆಯೊಳಗೆ ಸಾವಿರಾರು ಸಮೋಸಗಳು ಮಾರಾಟವಾಗುತ್ತಿರುವುದು ವ್ಯಾಪಾರದ ಜೋರನ್ನು ತೋರಿಸುತ್ತದೆ. ಸುತ್ತಮುತ್ತಲಿನ ಗ್ರಾಮಗಳಿಂದಲೂ ಜನರು ಇಫ್ತಾರ್ ಸಮಯಕ್ಕೆ ಪಟ್ಟಣಕ್ಕೆ ಆಗಮಿಸಿ ಸಮೋಸ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳನ್ನು ಖರೀದಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಸಂಜೆ ವೇಳೆಗೆ ವ್ಯಾಪಾರ ಪ್ರದೇಶಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ವಾಹನ ಸಂಚಾರ ಮತ್ತು ಜನರ ಓಡಾಟ ಹೆಚ್ಚಾಗಿದೆ.
ಪ್ರಸ್ತುತ ಈರುಳ್ಳಿ ಸಮೋಸವನ್ನು ರೂ.10 ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕೆಲವೆಡೆ ಗಾತ್ರ ಮತ್ತು ಮಸಾಲೆಯ ಪ್ರಮಾಣದ ಆಧಾರದ ಮೇಲೆ ದರದಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ, ಗುಣಮಟ್ಟ ಮತ್ತು ತಾಜಾತನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಬಿಸಿ ಬಿಸಿ, ಕರಕರೆ ಸಮೋಸವೇ ನಮ್ಮ ವಿಶೇಷತೆ. ಗ್ರಾಹಕರ ತೃಪ್ತಿಯೇ ನಮ್ಮ ಆದ್ಯತೆ, ಎಂದು ಸ್ಥಳೀಯ ಅಂಗಡಿ ಮಾಲೀಕ ನಿಸಾರ್ ಅಹ್ಮದ್ ಗಬ್ಬಡ್ ತಿಳಿಸಿದ್ದಾರೆ.
ಸಮೋಸ ತಯಾರಿಕೆಗೆ ಬೇಕಾದ ಸಿದ್ಧತೆಗಳು ಬೆಳಿಗ್ಗೆಯಿಂದಲೇ ಆರಂಭವಾಗುತ್ತವೆ. ಈರುಳ್ಳಿ ಕತ್ತರಿಸುವುದು, ಮಸಾಲೆ ಸಿದ್ಧಪಡಿಸುವುದು, ಹಿಟ್ಟನ್ನು ಕಲಸುವುದು, ಪಪ್ಪಡ್ ತಯಾರಿಸುವುದು ಸೇರಿದಂತೆ ಎಲ್ಲಾ ಹಂತಗಳು ಕ್ರಮಬದ್ಧವಾಗಿ ನಡೆಯುತ್ತವೆ. ಮಧ್ಯಾಹ್ನ ವೇಳೆಗೆ ಪ್ರಾಥಮಿಕ ಸಿದ್ಧತೆ ಪೂರ್ಣಗೊಂಡು, ಸಂಜೆ ನಾಲ್ಕು ಗಂಟೆಯ ಬಳಿಕ ನಿರಂತರ ಕರಿಯುವ ಕಾರ್ಯ ಆರಂಭವಾಗುತ್ತದೆ. ಕೆಲವು ಅಂಗಡಿಗಳಲ್ಲಿ ಒಂದೇ ವೇಳೆ ನಾಲ್ಕು–ಐದು ದೊಡ್ಡ ಕಡಾಯಿಗಳಲ್ಲಿ ಸಮೋಸ ಕರಿಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ವ್ಯಾಪಾರಿಗಳ ಪ್ರಕಾರ, ಸಾಮಾನ್ಯ ದಿನಗಳಲ್ಲಿ ಸಾವಿರದೊಳಗಿನ ಮಾರಾಟವಾಗುತ್ತಿದ್ದರೆ, ರಂಜಾನ್ ಅವಧಿಯಲ್ಲಿ ಅದು ಹಲವು ಪಟ್ಟು ಹೆಚ್ಚಾಗಿದೆ. ಗ್ರಾಹಕರಿಗೆ ಇಫ್ತಾರ್ ಸಮಯಕ್ಕೆ ತಡವಾಗದಂತೆ ಸಮಯಪಾಲನೆಗೆ ವಿಶೇಷ ಗಮನ ನೀಡಲಾಗುತ್ತಿದೆ.
ಈ ಸಮೋಸ ವ್ಯಾಪಾರದಿಂದ ಅಂಗಡಿ ಮಾಲೀಕರಿಗೆ ಮಾತ್ರವಲ್ಲದೆ ಅನೇಕ ಪರೋಕ್ಷ ವೃತ್ತಿಗಳಿಗೂ ಲಾಭವಾಗುತ್ತಿದೆ. ಎಣ್ಣೆ, ಹಿಟ್ಟು, ಈರುಳ್ಳಿ, ಬಟಾಣಿ, ಕೊತ್ತಂಬರಿ ಬೆಳೆಗಾರರು, ಮಸಾಲಾ ವ್ಯಾಪಾರಿಗಳು, ಪ್ಯಾಕಿಂಗ್ ಸಾಮಗ್ರಿ ಮಾರಾಟಗಾರರು ಉತ್ತಮ ಆದಾಯ ಗಳಿಸುತ್ತಿದ್ದಾರೆ. ದಿನಗೂಲಿ ಕಾರ್ಮಿಕರು, ಸಹಾಯಕರು, ಪ್ಯಾಕಿಂಗ್ ಕೆಲಸಗಾರರಿಗೆ ಹೆಚ್ಚುವರಿ ಉದ್ಯೋಗಾವಕಾಶಗಳು ದೊರಕುತ್ತಿವೆ.
ವಿಶೇಷವಾಗಿ ಯುವಕರು ಹಾಗೂ ವಿದ್ಯಾರ್ಥಿಗಳು ಸಂಜೆ ವೇಳೆಯಲ್ಲಿ ಭಾಗಕಾಲಿಕವಾಗಿ ಕೆಲಸ ಮಾಡಿಕೊಂಡು ತಮ್ಮ ಖರ್ಚುಗಳನ್ನು ನಿರ್ವಹಿಸುತ್ತಿರುವುದು ಗಮನಾರ್ಹವಾಗಿದೆ. ಕೆಲವರು ತಾತ್ಕಾಲಿಕವಾಗಿ ಸಮೋಸ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡು ತಮ್ಮ ಕುಟುಂಬದ ಆರ್ಥಿಕತೆಗೆ ನೆರವಾಗುತ್ತಿದ್ದಾರೆ.


ರಂಜಾನ್ ಮಾಸವು ಸಾಮಾನ್ಯವಾಗಿ 29 ರಿಂದ 30 ದಿನಗಳವರೆಗೆ ನಡೆಯುತ್ತದೆ. ದಿನಕ್ಕೆ ಸರಾಸರಿ 25 – 35 ಸಾವಿರ ಸಮೋಸಗಳು ಮಾರಾಟವಾದರೆ, ತಿಂಗಳ ಅಂತ್ಯದ ವೇಳೆಗೆ ಒಟ್ಟು ಮಾರಾಟ 8 ರಿಂದ 9 ಲಕ್ಷದವರೆಗೆ ತಲುಪುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ. ಇದು ಪಟ್ಟಣದ ಸಣ್ಣ ವ್ಯಾಪಾರ ವಲಯಕ್ಕೆ ಮಹತ್ವದ ಆರ್ಥಿಕ ಚೈತನ್ಯ ನೀಡುತ್ತಿದೆ.
ಧಾರ್ಮಿಕ ಮಹತ್ವವೂ ಅಪಾರ
ರಂಜಾನ್ ಮಾಸವು ಕೇವಲ ವ್ಯಾಪಾರ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಈ ಪವಿತ್ರ ತಿಂಗಳಲ್ಲಿ ಕುರಾನ್ ಶರೀಫ್ ಅವತರಿಸಿದುದಾಗಿ ಮುಸ್ಲಿಂ ಸಮುದಾಯ ನಂಬುತ್ತದೆ. ಉಪವಾಸವು ಇಸ್ಲಾಂನ ಐದು ಕಂಬಗಳಲ್ಲಿ ಒಂದಾಗಿದ್ದು, ಆತ್ಮನಿಯಂತ್ರಣ, ಶಿಸ್ತಿನ ಜೀವನ ಮತ್ತು ಸಹಾನುಭೂತಿಯನ್ನು ಉತ್ತೇಜಿಸುತ್ತದೆ. ದಿನವಿಡೀ ಉಪವಾಸದಿಂದ ಬಡವರ ಕಷ್ಟ ಅರಿವಾಗುತ್ತದೆ ಎಂಬ ಸಂದೇಶವನ್ನು ರಂಜಾನ್ ಸಾರುತ್ತದೆ. ದಾನ, ಸಹೋದರತ್ವ ಮತ್ತು ಪರಸ್ಪರ ಸಹಾಯದ ಮನೋಭಾವ ಈ ಅವಧಿಯಲ್ಲಿ ಹೆಚ್ಚಾಗುತ್ತದೆ.
ಒಟ್ಟಿನಲ್ಲಿ, ರಂಜಾನ್ ಮಾಸವು ಧಾರ್ಮಿಕ ಭಾವನೆಗಳ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳನ್ನೂ ಉತ್ತೇಜಿಸುತ್ತಿದೆ. ಶ್ರೀನಿವಾಸಪುರದಲ್ಲಿ ಸಮೋಸಗಳ ಭಾರೀ ಮಾರಾಟವು ಇದಕ್ಕೆ ಜೀವಂತ ಉದಾಹರಣೆಯಾಗಿದೆ. ಉಪವಾಸದ ಆಚರಣೆಯ ನಡುವೆ ವ್ಯಾಪಾರ ಚಟುವಟಿಕೆಗಳು ಗರಿಗೆದರಿದ್ದು, ಸಣ್ಣ ಪಟ್ಟಣದ ಆರ್ಥಿಕ ಚಕ್ರಕ್ಕೆ ಹೊಸ ಚೈತನ್ಯ ತುಂಬುತ್ತಿದೆ. ಧಾರ್ಮಿಕ ಆಚರಣೆ ಮತ್ತು ಸ್ಥಳೀಯ ವ್ಯಾಪಾರ ಇವೆರಡೂ ಕೈ ಕೈ ಜೋಡಿಸಿದಾಗ ಸಮಾಜದಲ್ಲಿ ಸಮಗ್ರ ಚೈತನ್ಯ ಮೂಡುತ್ತದೆ ಎಂಬುದನ್ನು ಶ್ರೀನಿವಾಸಪುರದ ಈ ಸಮೋಸ ಕರವಾರ್ ಸ್ಪಷ್ಟವಾಗಿ ತೋರಿಸಿದೆ.
ವರದಿ: ಶಬ್ಬೀರ್ ಅಹ್ಮದ್





