“ನಿಮ್ಮ ಆತ್ಮಸಾಕ್ಷಿಗಳಲ್ಲಿ ಹುಳುಕಿರಬೇಕು. ನಿಮ್ಮ ಎದೆಗಳನ್ನು ಮುಟ್ಟಿ ನೋಡಿಕೊಳ್ಳಿ, ಮುಟ್ಟಿ ನೋಡಿ ಹೇಳಿ ನೀವಲ್ಲವೇ ಕೊಂದವರು? ಅಥವಾ ನೀವಲ್ಲವೇ ಕೊಂದವರನ್ನು ಬೆಂಬಲಿಸಿದವರು? ನಿಮ್ಮ ಆತ್ಮಸಾಕ್ಷಿಯನ್ನು ಮುಟ್ಟಿ ನೋಡಿಕೊಳ್ಳಿ” ಎಂದು ಸಾಮಾಜಿಕ ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆ ಹೇಳಿದರು.
ನಿರ್ಭಯ ಪ್ರಕರಣ ನಡೆದ ದಿನವಾದ ಇಂದು (ಡಿಸೆಂಬರ್ 16) ಕರ್ನಾಟಕದಲ್ಲೂ ಮಹಿಳೆಯರ ಮೇಲಿನ ಹಿಂಸಾಚಾರ ಕೊನೆಗೊಂಡು, ಎಲ್ಲ ಶೋಷಿತ, ದಮನಿತ ಮಹಿಳೆಯರಿಗೂ ನ್ಯಾಯ ಮತ್ತು ಘನತೆಯ ಬದುಕು ಖಾತ್ರಿಗೊಳ್ಳಬೇಕೆಂದು ಒತ್ತಾಯಿಸಿ ಧರ್ಮಸ್ಥಳದ ಬೆಳ್ತಂಗಡಿಯಲ್ಲಿ ‘ಮಹಿಳೆಯರ ಮೌನ ಮೆರವಣಿಗೆ ಹಾಗೂ ಮಹಿಳಾ ನ್ಯಾಯ ಸಮಾವೇಶ’ಗಳು ನಡೆದಿವೆ.
ಇದನ್ನು ಓದಿದ್ದೀರಾ? ಕೊಂದವರು ಯಾರು ಆಂದೋಲನದ ನಿಯೋಗದಿಂದ ಮುಖ್ಯಮಂತ್ರಿಗಳ ಭೇಟಿ, ಹಕ್ಕೊತ್ತಾಯ ಪತ್ರ ಸಲ್ಲಿಕೆ
ಮಹಿಳಾ ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾಪರ ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆ, “ನಾವು ಬೇರೆ ಬೇರೆ ಊರುಗಳಿಂದ ಬಂದಿದ್ದೇವೆ. ಆದರೆ ನಮ್ಮೆಲ್ಲರ ಆಗ್ರಹ ಒಂದೇ. ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು ಮತ್ತು ಹೆಣ್ಣು ಮಕ್ಕಳು ಘನತೆಯಿಂದ ಬದುಕುವಂತಾಗಬೇಕು. ಸಂವಿಧಾನ ನಮಗೆ ನೀಡಿದ ಸಮಾನತೆ ನಿಜ ಜೀವನದಲ್ಲೂ ಜಾರಿಯಾಗಬೇಕು” ಎಂದು ಹೇಳಿದರು. ಹಾಗೆಯೇ “ಸಮಾನತೆ ನಮ್ಮ ಹಕ್ಕು ಭಿಕ್ಷೆಯಲ್ಲ” ಎಂದು ಘೋಷಣೆ ಕೂಗಿದರು.

“ಇದು ಒಂದು ಊರಿನ ಒಂದು ಪ್ರಕರಣಕ್ಕೆ ಸಂಬಂಧಪಟ್ಟ ಹೋರಾಟವಲ್ಲ. ನಾವು ಬೆಳ್ತಂಗಡಿಯಲ್ಲಿ ಕೊಂದವರು ಯಾರು ಸಮಾವೇಶ ನಡೆಸಲು ಮುಂದಾದಾಗ ಹಲವು ಪ್ರಶ್ನೆಗಳನ್ನು ನಮಗೆ ಕೇಳಲಾಯಿತು. ಇವೆಲ್ಲವುದಕ್ಕೂ ನಮ್ಮ ಹಕ್ಕೊತ್ತಾಯಗಳು ಉತ್ತರ ನೀಡುತ್ತದೆ. ನಾವು ಕೇವಲ ಬೆಳ್ತಂಗಡಿಗೆ ಬಂದವರಲ್ಲ, ಇಲ್ಲಿಗೆ ಬಂದು ನಮ್ಮ ಹೋರಾಟ ಮುಗಿಯುವುದೂ ಇಲ್ಲ. ಮಹಿಳಾ ಚಳವಳಿಯ ಈ ಪ್ರಯಾಣ ನೂರಾರು ವರ್ಷಗಳ ಹಿಂದೆಯೇ ಆರಂಭವಾಗಿದೆ” ಎಂದು ಹೇಳಿದರು.
“ಬಿಜಾಪುರ ದಲಿತ ಬಾಲಕಿ ಅತ್ಯಾಚಾರ ಪ್ರಕರಣ, ಹಾಸನ ಪ್ರಕರಣದಲ್ಲಿಯೂ ಧ್ವನಿ ಎತ್ತಿದ್ದೇವೆ. ಎಲ್ಲೇ ಮಹಿಳೆಯರಿಗೆ ಅನ್ಯಾಯವಾದಾಗ ನಾವು ಧ್ವನಿ ಎತ್ತಿದ್ದೇವೆ. ಈಗ ಬೆಳ್ತಂಗಡಿಗೆ ಯಾಕೆ ಬರಬಾರದು? ಯಾರು ಇಲ್ಲಿ ಮಹಿಳೆಯರನ್ನು ಕೊಂದವರು ಎಂಬ ಪ್ರಶ್ನೆಯನ್ನು ನಾವು ಯಾಕೆ ಕೇಳಬಾರದು? ಯಾರು ನಮ್ಮನ್ನು ತಡೆಯುವವರು? ಯಾಕೆ ನಮ್ಮನ್ನು ತಡೆಯುತ್ತೀರಿ” ಎಂದು ಮಲ್ಲಿಗೆ ಪ್ರಶ್ನಿಸಿದರು.

“ಸರ್ಕಾರ, ಸಿಎಂ, ಸಚಿವರುಗಳು ಯಾರನ್ನು ಬೆಂಬಲಿಸಬೇಕಾಗಿತ್ತು, ಯಾರನ್ನು ಬೆಂಬಲಿಸುತ್ತಿದ್ದೀರಿ ಎಂದು ಒಮ್ಮೆ ಆತ್ಮಸಾಕ್ಷಿಯನ್ನು ಮುಟ್ಟಿ ಆಲೋಚಿಸಿ. ನಾವು ನೊಂದ ಹೆಣ್ಣು ಮಕ್ಕಳು, ಕುಟುಂಬದ ಕುಡಿಗಳನ್ನು ಕಳೆದುಕೊಂಡ ತಾಯಂದಿರು ನಾವು ಇಲ್ಲೇ ಇದ್ದೇವೆ. ನಮಗೆ ನ್ಯಾಯ ಕೊಡುವವರು ಯಾರು? ನಮಗೆ ನ್ಯಾಯ ದೊರಕಿಸುವುದು ನಿಮ್ಮ ಜವಾಬ್ದಾರಿಯಲ್ಲವೇ” ಎಂದೂ ಕೇಳಿದರು.
ಇದನ್ನು ಓದಿದ್ದೀರಾ? ಕೊಂದವರು ಯಾರು? | ಒಂಟಿ ಮಹಿಳೆ ಹೋರಾಡಿದರೆ ಕಥೆ, ಮಹಿಳೆಯರೆಲ್ಲ ಕೂಡಿ ಹೋರಾಡಿದರೆ ಕ್ರಾಂತಿ: ಡಾ. ನಾಗಲಕ್ಷ್ಮೀ ಚೌಧರಿ
ಇನ್ನು ಈ ಕಾರ್ಯಕ್ರಮದಲ್ಲೇ ಮಾತನಾಡಿದ ರೈತ ಹೋರಾಟಗಾರ್ತಿ ಅನಸೂಯಮ್ಮ ಮಾತನಾಡಿ, “ಎಲ್ಲಿ ಅನ್ಯಾಯ ನಡೆದರೂ ಅದರ ವಿರುದ್ಧ ಹೋರಾಡದಿದ್ದರೆ ಆ ಅನ್ಯಾಯದಲ್ಲಿ ನಾವು ಭಾಗಿಯಾದಂತೆ ಎಂದು ಲೋಹಿಯಾ ಹೇಳುತ್ತಾರೆ. ದೇವರ ವಿಗ್ರಹ ಪೂಜಿಸುತ್ತಾರೆ, ಬದುಕಿರುವ ಜೀವಗಳನ್ನು ನಲುಗಿಸುತ್ತಾರೆ. ಇವರಿಗೆ ಮನುಷ್ಯತ್ವ ಇದೆಯೇ? ಸಂವಿಧಾನ ನಮಗೆಲ್ಲರಿಗೂ ಒಂದೇ ಹಕ್ಕು ನೀಡಿದೆ. ದೇವಾನುದೇವತೆಗಳನ್ನು ಪೂಜಿಸುತ್ತಾರೆ, ಹೆಣ್ಣು ಮಕ್ಕಳನ್ನು ಹಿಸುಕಿಹಾಕುತ್ತಾರೆ. ಇವರು ಮನುಷ್ಯರಾ? ನಮಗೆ ಸಮಾನವಾದ ಹಕ್ಕುಗಳಿವೆಯೇ ಎಂಬುದನ್ನು ಅರ್ಥ ಮಾಡಿಕೊಳ್ಳಿ” ಎಂದು ಹೇಳಿದರು.

“ಅಂಬೇಡ್ಕರ್ ಸಂವಿಧಾನ ರಚಿಸಿದಾಗ ಸಮಾನವಾದ ಹಕ್ಕು ಬೇಕೆಂಬ ಕಾರಣಕ್ಕೆ ಮನುಸ್ಮೃತಿಯನ್ನು ಸುಟ್ಟರು” ಎಂಬುದನ್ನೂ ನೆನಪಿಸಿಕೊಂಡರು. “ಹೆಣ್ಣು ಗಂಡು ಜತೆಯಾಗಿದ್ದರೆ ಸಹಿಸಲ್ಲ, ಹಬ್ಬ ಆಚರಿಸಿದರೆ ಸಹಿಸಲ್ಲ. ಆದರೆ ಒಬ್ಬಳು ಹೆಣ್ಣುಮಗಳನ್ನು ಗಂಡಸು ಅತ್ಯಾಚಾರ ಮಾಡಿದಾಗ ನೋಡಿಯೂ ಸುಮ್ಮನಿದ್ದೀರಲ್ಲಾ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಾಗೆಯೇ ನಮ್ಮ ಹೆಣ್ಣುಮಕ್ಕಳು ದುರ್ಗೆ, ಚಾಮುಂಡಿಗಳಾಗಬೇಕು. ಅವರನ್ನು ಅವರು ಕಾಪಾಡಿಕೊಳ್ಳುವ ಶಕ್ತಿ ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.
“ನಮ್ಮ ಹೆಣ್ಣು ಮಕ್ಕಳ ಮೇಲೆ ಹೇರುತ್ತಿರುವ ಭಯ ‘ಆತಂಕವಾದ’. ಯಾಕೆಂದರೆ ಈ ಆತಂಕವೇ ನಮ್ಮನ್ನು ಮೌನಗೊಳಿಸುವುದು. ನಮ್ಮನ್ನು ಬೈಯುವುದು, ಹೊಡೆಯುವುದು, ಅಶ್ಲೀಲವಾಗಿ ನಿಂದಿಸುವುದು ಆತಂಕವಾದವೇ ಆಗಿದೆ. ಇವೆಲ್ಲವೂ ನಮ್ಮ ಹೆಣ್ಣು ಮಕ್ಕಳನ್ನು ನಿಯಂತ್ರಿಸಲು ಬಳಸುವ ಸಾಧನ. ಇವೆಲ್ಲವೂ ನಮ್ಮ ಸ್ವಾತಂತ್ರ್ಯದ ಹರಣ. ಭಯರಹಿತ ಸಮಾಜದ ನಿರ್ಮಾಣ ನಮ್ಮೆಲ್ಲರ ಕನಸು. ಅದಕ್ಕಾಗಿ ಅಂಬೇಡ್ಕರ್ ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗಬೇಕು” ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಪ್ರೊ. ಆರ್. ಸುನಂದಮ್ಮ ಹೇಳಿದರು.

“ಕತ್ತಲಿರುವ ಜಾಗವನ್ನು ಬೆಳಕು ಮಾಡುವುದು ಆಡಳಿತಗಾರರ ಕರ್ತವ್ಯ. ಬೆಳಕಿಲ್ಲದ ಸಮಯದಲ್ಲಿ ನಾವು ಸುರಕ್ಷಿತರಾಗಿದ್ದೆವು. ಬೆಳಕು ಬಂದ ಮೇಲೆ ಯಾಕೆ ನಮ್ಮ ಮೇಲೆ ಇಷ್ಟೊಂದು ನಿಯಂತ್ರಣ? ನಮ್ಮ ಬಟ್ಟೆ ಮೇಲೆ, ಭಾಷೆ, ನಡವಳಿಕೆ ಮೇಲೆ ಬೊಟ್ಟು ಮಾಡಿ ನಮ್ಮನ್ನು ನಿಯಂತ್ರಿಸಲಾಗುತ್ತಿದೆ. ಗಂಡು ಮಕ್ಕಳು ಓಡಾಡುವಾಗ, ನಮ್ಮನ್ನು ಯಾಕೆ ಶೀಲದ ಪ್ರಶ್ನೆ ಮುಂದಿಟ್ಟು ಕಟ್ಟಿಹಾಕುತ್ತೀರಿ” ಎಂದು ಪ್ರಶ್ನಿಸಿದರು.

ಇನ್ನು ಇದೇ ವೇದಿಕೆಯಲ್ಲಿ ರಂಗಕರ್ಮಿ, ಲೇಖಕಿ, ಕವಯತ್ರಿ ಮತ್ತು ದಲಿತ-ಮಹಿಳಾ ಹೋರಾಟಗಾರ್ತಿ ದು. ಸರಸ್ವತಿ ನಾಟಕ ಪ್ರದರ್ಶಿಸಿದರು. ಬೆಳ್ತಂಗಡಿ ತಾಲೂಕು ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಗಳನ್ನು ಸಲ್ಲಿಸಲಾಯಿತು.





