ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಆನ್ಲೈನ್ ಅರ್ಜಿ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಿ, ಸರ್ಕಾರ ಘೋಷಿಸಿದ ಎಲ್ಲಾ ಸೌಲಭ್ಯಗಳನ್ನು ತಕ್ಷಣ ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ (AIUTUC) ಒತ್ತಾಯಿಸಿದೆ.
ಕೊಪ್ಪಳ ಜಿಲ್ಲಾಡಳಿತ ಭವನದ ಎದುರು ಪ್ರತಿಭಟಿಸಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಪರವಾಗಿ ಹೇಮಂತ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾ ಸಂಚಾಲಕ ಶರಣು ಗಡ್ಡಿ ಮಾತನಾಡಿ, “ಹೊಸ ಸಾಫ್ಟ್ವೇರ್ನ ತಾಂತ್ರಿಕ ದೋಷಗಳಿಂದ ಕಾರ್ಮಿಕರು ಅರ್ಜಿ, ನೋಂದಣಿ, ರಿನಿವಲ್ ಮಾಡಲು ಸಾಧ್ಯವಾಗದೆ ಸೌಲಭ್ಯಗಳಿಂದ ವಂಚಿತರಾಗುತ್ತಿರುವ ಬಗ್ಗೆ ಗಂಭೀರ ಆರೋಪವಿದೆ. ಇಲಾಖೆಯ ವಿಳಂಬ, ಅರ್ಜಿಗಳ ಅನಾವಶ್ಯಕ ತಿರಸ್ಕಾರ ಮತ್ತು ಸಹಾಯಧನಗಳ ವಿತರಣೆಯಲ್ಲಿ ಅವ್ಯವಸ್ಥೆ ನಿಲ್ಲಿಸಬೇಕು” ಎಂದು ಒತ್ತಾಯಿಸಿದರು.
“ಶೈಕ್ಷಣಿಕ, ಮದುವೆ, ಆರೋಗ್ಯ, ಹೆರಿಗೆ ಹಾಗೂ ಇತರ ಸಹಾಯಧನಗಳನ್ನು ಅರ್ಹ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ನೀಡಬೇಕು. ಕಿಟ್ಗಳ ವಿತರಣೆಯಲ್ಲಿ ನಡೆದಿರುವ ಅವ್ಯವಹಾರಗಳಿಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ಕೊಪ್ಪಳ | ಪಟ್ಟಣಕ್ಕೆ ಹೊಂದಿಕೊಂಡ ಹಳ್ಳದ ಸ್ವಚ್ಛತೆಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹ
ಕಾರ್ಮಿಕರು ಮತ್ತು ಸಂಘದ ಮುಖಂಡ ನಾಗರಾಜ್ ಹುಲಿಗಿ, ರಾಮಲಿಂಗ ಶಾಸ್ತ್ರಿ, ಶರಣಪ್ಪ, ಶಬ್ಬೀರ್ ಕುಲಿಮಿ, ರಾಜೇಶ್, ಸಿದ್ದಪ್ಪ, ಯಲ್ಲಪ್ಪ ಬೋಚನಹಳ್ಳಿ, ಗಂಗಮ್ಮ, ಹುಸೇನ್ ಭಾಷಾ, ರಾಮಣ್ಣ, ಕಟ್ಟೆಪ್ಪ ಭಾಗ್ಯನಗರ, ಹಾಗೂ ಇತರರು ಇದ್ದರು.





