ಗಂಗಾವತಿಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಗದ್ವಾಲ್ ಕ್ಯಾಂಪ್ ಚರ್ಚ್ನಲ್ಲಿ ಅಪ್ರಾಪ್ತೆಯ ವಿವಾಹ(ಬಾಲ್ಯವಿವಾಹ) ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ 2 ವರ್ಷ ಜೈಲು ಹಾಗೂ 10 ಸಾವಿರ ದಂಡ ಸಹಿತ ಜೈಲು ಶಿಕ್ಷೆ ವಿಧಿಸಿ ಗಂಗಾವತಿಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾ. ನಾಗೇಶ ಪಾಟೀಲ ಅವರು ತೀರ್ಪು ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಗದ್ವಾಲ್ ಕ್ಯಾಂಪ್ ಚರ್ಚ್ನಲ್ಲಿ 2020ರ ಮೇ 22ರಂದು ಅಪ್ರಾಪ್ತೆಗೆ ವಿವಾಹ ಮಾಡಲಾಗಿತ್ತು. ಆದ್ದರಿಂದ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವರ ಕುರುಪಣ್ಣ, ವರನ ತಂದೆ ಆನಂದ, ತಾಯಿ ಆಶೀರ್ವಾದಮ್ಮ, ವಧುವಿನ ತಂದೆ ಯೇಸು, ತಾಯಿ ಶಾಂತಮ್ಮ ಚರ್ಚ್ನ ಫಾದರ್ ಅಬ್ರಹಾಂ ಡಿ ಶಿಕ್ಷೆಗೆ ಗುರಿಯಾದವರು.
14 ವರ್ಷದ ಅಪ್ರಾಪ್ತೆಯ ಪೋಷಕ ಆರೋಪಿಗಳು ತಮ್ಮ ಮಗಳ ಮದುವೆಯನ್ನು ಗದ್ವಾಲ್ ಕ್ಯಾಂಪ್ ಗ್ರಾಮದ ಚರ್ಚ್ನಲ್ಲಿ 2020ರ ಮೇ 22ರಂದು ಫಾದರ್ ಅವರ ನೇತೃತ್ವದಲ್ಲಿ ಬಾಲ್ಯವಿವಾಹ ಮಾಡಿದ್ದರು. ಆರೋಪಿತರೆಲ್ಲರೂ ಬಾಲ್ಯವಿವಾಹ ನಿಷೇಧ ಕಾಯ್ದೆ 2006ರ ಕಲಂ 9, 10, 11ರ ಅಡಿ ಅಪರಾಧ ಮಾಡಿದ್ದು, ಸಾಬೀತಾದ ಹಿನ್ನೆಲೆಯಲ್ಲಿ ಅಂದಿನ ತನಿಖಾಧಿಕಾರಿಯಾಗಿದ್ದ ಪಿಎಸ್ಐ ದೊಡ್ಡಪ್ಪ ಜೆ ಅಪರಾಧಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಕೆದಿಲ-ಪನಡ್ಕ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಅಶೋಕ್ ರೈ: 12 ವರ್ಷಗಳ ಹೋರಾಟಕ್ಕೆ ಕೊನೆಗೂ ಜಯ
ಇಂತಹದೇ ಒಂದು ಪ್ರಕರಣದಲ್ಲಿ 2017ರ ಏಪ್ರಿಲ್ 2ರಂದು ಗಂಗಾವತಿಯ ಶಾದಿಮಹಲ್ನಲ್ಲಿ ನಡೆದ ಬಾಲ್ಯವಿವಾಹ ಪ್ರಕರಣದಲ್ಲೂ ಗಂಗಾವತಿಯ ಪ್ರಧಾನ ದಿವಾಣಿ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಸೆ.22ರಂದು ಇಂಥದ್ದೇ ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ನಕಲಿ ವರ್ಗಾವಣೆ ಪ್ರಮಾಣ ಪತ್ರ ಸೃಷ್ಟಿಸಿ, ಬಾಲಕಿಯ ವಯಸ್ಸು ಮರೆಮಾಚಿ, ಬಾಲ್ಯವಿವಾಹ ಮಾಡಲಾಗಿತ್ತು. ಈ ಪ್ರಕರಣದಲ್ಲಿ ವರ ಖಾಜಾ ಪಾಷಾ ಖಾದ್ರಿ, ವರನ ತಂದೆ ಮೈನುದ್ದೀನ್ ಖಾದ್ರಿ, ತಾಯಿ ಖತೂನ್ ಬೀ ಹಾಗೂ ಬಾಲಕಿಯ ತಂದೆ ಮಕ್ಯುಲ್ ಪೀರಾ ಖಾದ್ರಿ, ತಾಯಿ ಕುಸುಮಾಬೀ ಅವರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ ತಲಾ 10,000 ರೂ. ದಂಡ ವಿಧಿಸಲಾಗಿದೆ.





