ಕೊಪ್ಪಳ ನಗರದ ಜಿಲ್ಲಾ ಕೌಟುಂಬಿಕ ನ್ಯಾಯಾಲದಲ್ಲಿ ವೈವಾಹಿಕ ವಿಚ್ಛೇದನದ ಸಂಬಂಧಿತವಾಗಿ ವ್ಯಾಜ್ಯ ನಡೆದಿದ್ದು, ಪತಿಯೊಬ್ಬ ತನ್ನ ಪತ್ನಿ, ಅತ್ತೆ ಹಾಗೂ ಮಾವನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ನಡೆದಿದೆ.
ನ್ಯಾಯಾಲಯದ ಮಧ್ಯಸ್ಥಿಕೆದಾರರ ಕೇಂದ್ರದಲ್ಲಿ ಕೌನ್ಸಿಲಿಂಗ್ ಮುನ್ನ ಈ ಘಟನೆ ನಡೆದಿದೆ.
ಕಾರಟಗಿ ತಾಲೂಕು ಸಿದ್ದಾಪುರದ ಚಿರಂಜೀವಿ ಭೋವಿ ಎಂಬಾತ ಕೊಪ್ಪಳ ತಾಲೂಕಿನ ಹಳೆ ಕುಮಟಾದ ತನ್ನ ಪತ್ನಿ ರೋಜಾ , ಅತ್ತೆ ಶಾಂತಮ್ಮ ಹಾಗೂ ಮಾವ ಶಂಕ್ರಪ್ಪ ಇವರಿಗೆ ಹಿಂದಿನಿಂದ ಬಂದು ಪೆಟ್ರೋಲ್ ಸುರುವಿ ಬೆಂಕಿ ಹಚ್ಚಲು ಯತ್ನಿಸಿದ್ದಾನೆ.
12 ವರ್ಷದ ಹಿಂದೆ ಪ್ರೀತಿಸಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಕಾಲಕ್ರಮೇಣ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು. ಪತ್ನಿಯ ಮೇಲೆ ಸಂಶಯ ಪಡುತ್ತಿದ್ದುದ್ದರಿಂದ ಹಲ್ಲೆ ಮಾಡಿರುವುದಲ್ಲದೆ, ಮಾನಸಿಕ ಕಿರುಕುಳ ಕೊಡುತ್ತಿದ್ದ ಕಾರಣ ಪತ್ನಿ ರೋಜಾ ವಿಚ್ಛೇದನಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದರು. ಇಂದು ನ್ಯಾಯಾಲಯ ಮಧ್ಯಸ್ಥಿಕೆದಾರರ ಕೇಂದ್ರದಲ್ಲಿ ವಿಚಾರಣೆ ನಡೆದಿತ್ತು.



ಇದನ್ನೂ ಓದಿ: ಕೊಪ್ಪಳ | ಮಠಾಧೀಶರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು: ತೋಂಟದಾರ್ಯ ಶ್ರೀ
ಈ ಸಂದರ್ಭ ಒಳ ಬಂದಿದ್ದ ಚಿರಂಜೀವಿ ಬ್ಯಾಗಿನಲ್ಲಿ ಪೆಟ್ರೋಲ್ ಬಾಟಲಿ ಇಟ್ಟುಕೊಂಡು ಬಂದಿದ್ಧು, ಪತ್ನಿ, ಅತ್ತೆ ಮತ್ತು ಮಾವರಿಗೆ ಹಿಂದಿನಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದಾಗ ಅಲ್ಲೇ ಇದ್ದ ವಕೀಲರು ರಕ್ಷಿಣೆ ಮಾಡಿದ್ದಾರೆ. ಆರೋಪಿ ಚಿರಂಜೀವಿಯನ್ನು ಕೊಪ್ಪಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.





