ಜಗತ್ತಿನಲ್ಲಿ ಸಜ್ಜನರಿಗೆ ಒಳ್ಳೆಯದಾಗಲಿ, ದುರ್ಜನರು ಮನಃಪರಿವರ್ತನೆಗೊಂಡು ಒಳ್ಳೆಯ ಮಾರ್ಗದಲ್ಲಿ ನಡೆಯಲಿ ಎಂಬ ಉದ್ದೇಶದೊಂದಿಗೆ ಕೊಪ್ಪಳದ ಯುವಕನೊಬ್ಬ 1,550 ಕಿ.ಮೀ ಏಕಾಂಗಿ ಪಾದಯಾತ್ರೆ ನಡೆಸಿದ್ದಾರೆ. ಕೊಪ್ಪಳದ ಚನ್ನಬಸವನಗರದ ನಿವಾಸಿ ಹನುಮೇಶ ಕುಲಕರ್ಣಿ ಅವರು ಕೊಪ್ಪಳದಿಂದ ವಾರಣಾಸಿವರೆಗೆ ಪಾದಯಾತ್ರೆ ಮಾಡಿದ್ದಾರೆ.
62 ದಿನಗಳ ಕಾಲ ಪಾದಯಾತ್ರೆ ನಡೆಸಿರುವ ಹುನಮೇಶ ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ, ಮರಳಿ ಬಂದಿದ್ದಾರೆ. ಅವರನ್ನು ಚನ್ನಬಸವನಗರದ ನಿವಾಸಿಗಳು ಮತ್ತು ರಾಘವೇಂದ್ರ ಮಠದ ಅರ್ಚಕರು ಸ್ವಾಗತಿಸಿ, ಸನ್ಮಾನಿಸಿದ್ದಾರೆ.
ತನ್ನ ಪಾದಯಾತ್ರೆಯ ಕುರಿತು ಮಾತನಾಡಿದ ಹನುಮೇಶ, “ಸೆಪ್ಟಂಬರ್ 7ರಂದು ಕೊಪ್ಪಳದಿಂದ ಪಾದಯಾತ್ರೆ ಆರಂಭಿಸಿದೆ. ನವೆಂಬರ್ 7ರಂದು ಕಾಶಿಗೆ ತಲುಪಿದೆ. 62 ದಿನಗಳ ಕಾಲ ಪಾದಯಾತ್ರೆ ನಡೆಸಿದ್ದೇನೆ. ಪ್ರತಿದಿನ 25 ರಿಂದ 30 ಕಿ.ಮೀ. ನಡೆದಿದ್ದೇನೆ. ರಾತ್ರಿ ವೇಳೆ, ದೇವಾಲಯಗಳಲ್ಲಿ ಉಳಿದುಕೊಳ್ಳುತ್ತಿದ್ದೆ” ಎಂದು ಹೇಳಿದ್ದಾರೆ.
“ನಾನು ನನ್ನ ವೈಯ್ಯಕ್ತಿಕ ಹರಕೆಗಳಿಗಾಗಿ ಪಾದಯಾತ್ರೆ ನಡೆಸಿಲ್ಲ. ಜಗತ್ತಿನ ಸಜ್ಜನರಿಗೆ ಒಳ್ಳೆಯದಾಗಬೇಕು. ದುರ್ಜನರು ಮನಃಪರಿವರ್ತನೆಗೊಂಡು ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು ಎಂಬ ಉದ್ದೇಶದಿಂದ ಈ ಯಾತ್ರೆ ನಡೆಸಿದ್ದೇನೆ” ಎಂದು ತಿಳಿಸಿದ್ದಾರೆ.




