ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ರಾಕೇಶ್ ಕಿಶೋರ್ ಎಂಬ ವಕೀಲ ವಿಚಾರಣೆ ನಡೆಯುವ ಸಂದರ್ಭದಲ್ಲಿಯೇ ನ್ಯಾಯಾಲಯದ ಆವರಣದಲ್ಲಿ ಶೂ ಎಸೆದು ಅವಮಾನ ಮಾಡಿ ವಕೀಲ ವೃತ್ತಿಗೇ ಧಕ್ಕೆ ತಂದಿದ್ದಾನೆ. ಈತನ ವಿರುದ್ಧ ಕಠಿಣ ಕ್ರಮ ಕೈಗೊಂಡು ಅವನನ್ನು ಗಡಿಪಾರು ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದ್ದು, ಕೊಪ್ಪಳದ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದೆ.
“ಕೊಪ್ಪಳ ಜಿಲ್ಲೆಯ ಕಾನೂನು ಪ್ರಜ್ಞಾವಂತ ನಾಗರಿಕರು ಹಾಗೂ ಸಂವಿಧಾನ ಪಾಲಕರು, ಅಕ್ಟೋಬರ್ 6ರಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಗವಾಯಿಯವರ ಮೇಲೆ ನಡೆದ ಅಪಮಾನ ಆಗುವಂತ ಘಟನೆಯನ್ನು ಅತ್ಯಂತ ತೀವ್ರವಾಗಿ ಖಂಡಿಸುತ್ತೇವೆ. ಘಟನೆ ಕೇವಲ ಒಬ್ಬ ವ್ಯಕ್ತಿಯ ಮೇಲೆ ನಡೆದ ಹಲ್ಲೆಯಲ್ಲ; ಅದು ಭಾರತದ ಸಂವಿಧಾನದ ಗೌರವ, ನ್ಯಾಯಾಂಗದ ಸ್ವಾತಂತ್ರ್ಯ ಹಾಗೂ ಕಾನೂನಿನ ಆಳ್ವಿಕೆಗೆ ಧಿಕ್ಕಾರ ನೀಡುವ ಕೃತ್ಯವಾಗಿದೆ. ದೇಶದ ಉನ್ನತ ನ್ಯಾಯಾಂಗದ ಮುಖ್ಯಸ್ಥರ ಮೇಲೆ ಹಲ್ಲೆ ನಡೆಸುವುದು ರಾಷ್ಟ್ರದ ಸಂವಿಧಾನಾತ್ಮಕ ವ್ಯವಸ್ಥೆಯ ಮೇಲೆ ದಾಳಿ ಮಾಡಿದಂತಾಗಿದೆ” ಎಂದು ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೊಪ್ಪಳ | ದಶಕದ ಹಿಂದಿನ ಯಲ್ಲಾಲಿಂಗನ ಕೊಲೆ ಪ್ರಕರಣ: 9 ಆರೋಪಿಗಳ ಖುಲಾಸೆ
ಈ ವೇಳೆ ನಿಂಗಪ್ಪ ಜಿಎಸ್ ಬೆಣಕಲ್, ಶಶಿಕಲಾ ಮಠದ, ಸಲ್ಮಾ ಜಾನ್, ಕರಿಯಪ್ಪ ಬಿ ಮನ್ನಿನವರ, ಮೈಲಪ್ಪ ಮಾದೇನೂರು, ಯಮನೂರು ಬಣಕಾರ್, ಶ್ರೀಕಾಂತ ಹೊಸಮನಿ, ದುರ್ಗಮ್ಮ ಬೆಟಗೇರಿ, ಮಾಂತೇಶ್ ಮ್ಯಾಗಲಮನಿ, ಮುತ್ತು ಅರಕೇರಿ, ಭೀಮೇಶ್ ಮಂಡಲಗೇರಿ,ಅರ್ಜುನ ಬೆಣಕಲ, ವೀರೇಶ್, ವೀರೇಶ ವೀರಾಪುರ್ ಹಾಗೂ ಇತರರು ಉಪಸ್ಥಿತರಿದ್ದರು.





