ಭಾರತದಲ್ಲಿ ಸಾವಿರಾರು ರಾಜ ಸಂಸ್ಥಾನಗಳಿದ್ದರೂ ಮೊಟ್ಟಮೊದಲು ಸ್ವಾತಂತ್ರ್ಯದ ಕಿಚ್ಚನ್ನ ಹಚ್ಚಿದ್ದು ಕನ್ನಡದ ಕಿತ್ತೂರು ರಾಣಿ ಚನ್ನಮ್ಮ ಎಂದು ಕೊಪ್ಪಳ ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಅನೇಕ ರಾಜಮನೆತನಗಳು ಭಾಗಿಯಾಗಿರುವುದನ್ನು ನಾವು ಕಾಣಬಹುದು. ಅದರಲ್ಲೂ ತುಂಬಾ ವಿಶೇಷವಾಗಿ ಕಿತ್ತೂರು ಸಂಸ್ಥಾನ ಪ್ರಥಮವಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಮೊದಲ ಯುದ್ದದಲ್ಲಿ ವಿಜಯವನ್ನು ಸಾಧಿಸಿರುವುದನ್ನು ನಾವು ಮರೆಯುವಂತಿಲ್ಲ. ಕಿತ್ತೂರು ರಾಣಿ ಚನ್ನಮ್ಮ ಅವರ ಜೊತೆಗೆ ಅವರ ಬಲಗೈ ಬಂಟನಾದ ಸಂಗೊಳ್ಳಿ ರಾಯಣ್ಣನ ಸಾಹಸವನ್ನು ಸಹ ನಾವು ಸ್ಮರಿಸಬೇಕಿದೆ. ಹಾಗಾಗಿ ನಮ್ಮ ಸರ್ಕಾರ ಕಿತ್ತೂರು ಮತ್ತು ಸಂಗೊಳ್ಳಿ ಅಭಿವೃದ್ಧಿಗಾಗಿ ಸುಮಾರು 34 ಕೋಟಿ ರೂ. ಅನುದಾನ ನೀಡಿದೆ” ಎಂದರು.
“ಕಿತ್ತೂರು ರಾಣಿ ಚನ್ನಮ್ಮ ಒಬ್ಬ ಮಹಿಳೆಯಾಗಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರೂ ಕೆಚ್ಚೆದೆಯಿಂದ ಹೋರಾಡಬಲ್ಲರು ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿ ಕೊಟ್ಟರು. 2017ರಲ್ಲಿ ಸರ್ಕಾರ ರಾಣಿ ಚನ್ನಮ್ಮನ ಜಯಂತಿಯನ್ನು ಆಚರಣೆ ಮಾಡಬೇಕು ಎಂದು ಆದೇಶವನ್ನು ಹೊರಡಿಸಿತು. ಕಿತ್ತೂರು ರಾಣಿ ಚನ್ನಮ್ಮರಂತಹ ಸಾಹಸಿಗರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ, ಬದಲಾಗಿ ಇಡೀ ನಮ್ಮ ದೇಶಕ್ಕೆ ಪ್ರೇರಣೆ” ಎಂದರು.
ಪಂಚಮಸಾಲಿ ಜಗದ್ಗುರು ಪೀಠ ಹರಿಹರದ ವಚನಾನಂದ ಸ್ವಾಮಿ ಮಾತನಾಡಿ, “ಸ್ವಾತಂತ್ಯ ಪೂರ್ವ ನಮ್ಮ ದೇಶದಲ್ಲಿದ್ದ ಸುಮಾರು 500ಕ್ಕೂ ಅಧಿಕ ರಾಜ ಸಂಸ್ಥಾನಗಳಲ್ಲಿ ಬ್ರಿಟಿಷರ ವಿರುದ್ಧ ಮೊದಲು ಹೋರಾಟ ಮಾಡಿದ್ದು ಕಿತ್ತೂರು ರಾಣಿ ಚನ್ನಮ. ಆಗ ಅನೇಕ ರಾಜರುಗಳು ಬ್ರೀಟಿಷರ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ಆದರೆ ಕಿತ್ತೂರು ರಾಣಿ ಚನ್ನಮ್ಮ ಬ್ರಿಟೀಷರೊಂದಿಗೆ ರಾಜಿ ಆಗದೆ, ಸ್ವಾತಂತ್ರ್ಯವನ್ನು ಬಯಸಿ ಅವರ ವಿರುದ್ಧ ಹೋರಾಡಿದರು. ಚನ್ನಮ್ಮನ ಖಡ್ಗ ಹುಡುಕುವ ಕೆಲಸ ಆಗಬೇಕು. ಚನ್ನಮ್ಮನ ಚಿತ್ರವಿರುವ ಸ್ಮಾರಕ ನಾಣ್ಯವಿದ್ದು, ಅದು ಚಲಾವಣೆಯ ನಾಣ್ಯದಲ್ಲೂ ಬರಬೇಕು” ಎಂದರು.

ಮಾಜಿ ಸಂಸದ ಕರಡಿ ಸಂಗಣ್ಣ ಮಾತನಾಡಿ, “ಕಿತ್ತೂರು ರಾಣಿ ಚನ್ನಮ ದೇಶಕ್ಕೆ ಸ್ವಾತಂತ್ರ್ಯ ತರಬೇಕೆಂದು ಮೊದಲಿಗೆ ಧ್ವನಿ ಎತ್ತಿದವರು. ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪಿಸಬೇಕು ಹಾಗೂ ಮೀಸಲಾತಿ ಕುರಿತಂತೆ ಇರುವ ಸಮಾಜದ ಬೇಡಿಕೆಯನ್ನು ಈಡೇರಿಸಲು ಶಾಸಕರು ನಮ್ಮ ಸಮಾಜದ ಪರವಾಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಬೇಕು” ಎಂದು ಹೇಳಿದರು.
ಜಿಲ್ಲೆಯ ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪೂರ ಅವರು ಕಿತ್ತೂರ ಚನ್ನಮ್ಮರ ಕುರಿತು ವಿಶೇಷ ಉಪನ್ಯಾಸ ನೀಡಿ ಮತನಾಡಿ, ಯಾರಾದರೂ ಮಹಿಳೆ ಅಥವಾ ಹುಡುಗಿ ಸಾಹಸದ ಕೆಲಸ ಮಾಡಿದಾಗ ಜನ ಸಾಮಾನ್ಯವಾಗಿ ಬರುವ ಮಾತು, ‘ಕಿತ್ತೂರು ಚನ್ನಮ್ಮ ಆಗೀಯೇನು’ ಎಂಬುವುದು. ಕನ್ನಡ ನಾಡಿನ ವೀರ, ಸಾಧಕ ಮಹಿಳೆಯರ ಪಟ್ಟಿ ಮಾಡಿದಾಗ ಮೊದಲು ಕೇಳಿ ಬರುವ ಹೆಸರು ಕಿತ್ತೂರ ಚನ್ನಮ್ಮ. ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಅಂದ್ರೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮೊದಲು ಬ್ರಿಟಿಷರ ವಿರುದ್ಧ ದೇಶದಾದ್ಯಂತ ಸ್ವಾತಂತ್ರ್ಯ ಚಳವಳಿಗೆ ಓಂನಾಮ ಅಕ್ಷರ ಹಾಕಿದ್ದು, ವೀರರಾಣಿ ಚನ್ನಮ್ಮ ಅವರಾಗಿದ್ದಾರೆ. ಈ ಮೊದಲು ಚನ್ನಮ್ಮನ ಪತಿ ಮಲ್ಲಸರ್ಜ ಎಂದರೆ ತಪ್ಪಾಗಲಿಕ್ಕಿಲ್ಲ. ವೀರರಾಣಿ ಚನ್ನಮ್ಮನ ಇತಿಹಾಸವು ಪುಸ್ತಕದ ದಾಖಲೆಗಳಗಿಂತ ಜನಪದ ಹಾಡುಗಳಲ್ಲಿ, ಕಥೆಗಳು ದಾಖಲಾಗಿ ಎಲ್ಲಾ ಜನಾಂಗ, ಎಲ್ಲಾ ವರ್ಗದವರ ಮನೆ ಮಾತಾಗಿರುವುದು ಕಿತ್ತೂರ ಚನ್ನಮ್ಮ. ಇಲ್ಲಿ ಜಾತಿ ಮತ ಭೇದವಿಲ್ಲದೆ ಎಲ್ಲರೂ ಚನ್ನಮ್ಮನನ್ನು ಆರಾಧಿಸುತ್ತಿದ್ದಾರೆ. ವೀರರಾಣಿ ಕಿತ್ತೂರ ಚನ್ನಮ್ಮ ಅಕ್ಟೋಬರ್ 23 ರಂದು ಬ್ರಿಟೀಷ ಅಧಿಕಾರಿಯನ್ನು ಕೊಂದು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ ತಕ್ಷಣವೇ ವಿಜಯೋತ್ಸವ ಆಚರಿಸಿದ್ದರು” ಎಂದರು.
ಇದನ್ನೂ ಓದಿ: ಕೊಪ್ಪಳ | ಕುಡಿಯುವ ನೀರಿಗಾಗಿ ಪರದಾಟ; ಸಮಸ್ಯೆಯ ಶೀಘ್ರ ಪರಿಹಾರಕ್ಕೆ ಆಗ್ರಹ
“1857 ಪ್ರಥಮ ಸ್ವತಂತ್ರ ಸಂಗ್ರಾಮ ಆರಂಭವಾಗುತ್ತದೆ. ಸ್ವತಂತ್ರ ಸಂಗ್ರಾಮದ ಮುನ್ನ 33 ವರ್ಷದ ಹಿಂದೆ ಬ್ರಿಟಿಷರಿಂದ ಮುಕ್ತಿ ಪಡೆಯಲು ಚನ್ನಮ್ಮ ಹೋರಾಟ ಮಾಡಿದರು. ಅವರು ಹಾಕಿಕೊಟ್ಟ ಹಾದಿ ಮುಂದೆ ದೊಡ್ಡ ಹೋರಾಟಕ್ಕೆ ನಾಂದಿಯಾಯಿತು. ಸ್ವಾತಂತ್ರ್ಯ ಸಂಗ್ರಾಮ ಅವಧಿಯಲ್ಲಿ ದೇಶದ ಜನತೆ ಝಾನ್ಸಿ ರಾಣಿ ಲಕ್ಷ್ಮಿಬಾಯಿಯನ್ನು ಗುರುತಿಸುತ್ತಾರೆ ಆದರೆ ಈ ಮೊದಲು ಹೋರಾಟ ಮಾಡಿದ ಚನ್ನಮ್ಮ ಕನ್ನಡ ನಾಡಿಗೆ ಮಾತ್ರ ಸೀಮಿತವಾಗಿದ್ದಾರೆ. ಇದಕ್ಕೆ ಕಾರಣ ಚನ್ನಮ್ಮ ಇತಿಹಾಸ ಕನ್ನಡ ನಾಡಿನ ಹೊರಗಡೆ ಪ್ರಚಾರವಾಗದೆ ಇರುವುದು. ಕಿತ್ತೂರು ಚನ್ನಮ್ಮ ಸೇರಿ ನಾಡಿನ ಎಲ್ಲಾ ಇತಿಹಾಸ ಪುರುಷರು, ದಾರ್ಶನಿಕರನ್ನು ಒಂದೊಂದು ಸಮಾಜ, ವರ್ಗ ಜಾತಿಗೆ ಮೀಸಲಿಡುವುದು ಸಂಕುಚಿತ ಭಾವನೆಯಾಗುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ನಗರಸಭೆ ಸದಸ್ಯ ಮುತ್ತುರಾಜ ಕುಷ್ಟಗಿ, ಉಪ ತಹಶಿಲ್ದಾರ ಗವಿಸಿದ್ದಪ್ಪ ಮಣ್ಣೂರ, ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ, ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ, ಕೊಪ್ಪಳ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಸವನಗೌಡ ತೊಂಡಿಹಾಳ, ಮುಖಂಡರಾದ ಡಾ. ಬಸವರಾಜ ಕ್ಯಾವಡ್ಕರ್, ಕರಿಯಪ್ಪ ಮೇಟಿ, ಸುಮಂಗಲ ಹಂಚಿನಾಳ, ಪ್ರತಿಮಾ ಪಟ್ಟಣಶೆಟ್ಟಿ, ಸುಜಾತ ಪಟ್ಟಣಶೆಟ್ಟಿ, ಬಿ.ಎಸ್.ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.





