ಅನುದಾನ ಬಂದ ಕೂಡಲೇ ನೀವು ಹೇಳಿದ ಕೆಲಸ ಮಾಡುತ್ತೇನೆ. ರಸ್ತೆ ದುರಸ್ತಿ ಹಾಗೂ ಮಕ್ಕಳ ಉದ್ಯಾನವನದಂಥ ನಿರ್ಮಾಣ ಕಾಮಗಾರಿಗಳನ್ನು ಮಾಡಿಸುವೆ. ನಿಮ್ಮ ವಿಶ್ವಾಸಕ್ಕೆ ಧಕ್ಕೆ ತರಲಾರೆ. ಕಲ್ಯಾಣನಗರದ ಅಭಿವೃದ್ಧಿ ಕೆಲಸ ಮಾಡುವೆ ಎಂದು ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಭರವಸೆ ನೀಡಿದರು.
ಕೊಪ್ಪಳದ ಕಲ್ಯಾಣ ನಗರದಲ್ಲಿ ದೀಪಾವಳಿ ಹಬ್ಬದಂದು ಮಾರುತಿ ಗುಡಿ ಸಮೀಪ ಎತ್ತರದ ದೀಪಸ್ತಂಭ(ಹೈಮ್ಯಾಕ್ಸ್)ವನ್ನು ಉದ್ಘಾಟಿಸಿ ಮಾತನಾಡಿದರು.
“ಕಲ್ಯಾಣನಗರ ನನ್ನನ್ನು ಬಹಳ ಗೌರವಯುತವಾಗಿ ನಡೆಸಿಕೊಂಡಿದೆ. ಈ ನಗರದವರು ತುಂಬಾ ಸೌಜನ್ಯದಿಂದ ಕೆಲಸದ ಬೇಡಿಕೆ ಇಟ್ಟು ಈಡೇರಿಸಿಕೊಳ್ಳುತ್ತಿದ್ದೀರಿ. ನಗರದ ಹಲವು ಅಭಿವೃದ್ಧಿ ಕೆಲಸಗಳು ಅಗಬೇಕು. ಅದನ್ನು ನಾನು ಅಧ್ಯಕ್ಷನಾಗಿರಲಿ, ಇಲ್ಲದಿರಲಿ ಕೆಲಸ ಮಾಡುತ್ತೇನೆ” ಎಂದು ವಿಶ್ವಾಸ ಮೂಡಿಸಿದರು.
ಕಲ್ಯಾಣ ನಗರದ ಹಿರಿಯ ಮುಖಂಡ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, “ಕಲ್ಯಾಣ ನಗರದಲ್ಲಿ ರಸ್ತೆಗಳನ್ನು ಸರಿಪಡಬೇಕು. ಒಳ ಚರಂಡಿಗಳ ವ್ಯವಸ್ತೆಯಾಗಬೇಕು, ಕಲ್ಯಾಣ ನಗರದ ಉದ್ಯಾನದಲ್ಲಿ ಮಕ್ಕಳಿಗೆ ಆಟದ ಸಾಮಗ್ರಿಗಳನ್ನು ಹಾಕಿಸಬೇಕು. ಸಮುದಾಯ ಭವನ ಕಟ್ಟಿಸಬೇಕು. ಬೀದಿ ದೀಪಗಳನ್ನು ಹಾಕಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಪ್ರೀತಿ ವಂಚಿತ ಮಕ್ಕಳೊಂದಿಗೆ ಸರಳ ದೀಪಾವಳಿ
“ಎಂಎಸ್ಪಿಎಲ್ ಕಾರ್ಖಾನೆ ಮತ್ತು ಇತರ ಕಾರ್ಖಾನೆಗಳು ಪರಿಸರ ನಾಶ ಮಾಡುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 1ರ ರಾಜ್ಯೋತ್ಸವ ದಿನದಂದು ಅಶೋಕ ವೃತ್ತದಲ್ಲಿ ನಡೆಯುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ನಗರದ ಪ್ರಮುಖರು, ನಾಗರಿಕರೆಲ್ಲರೂ ಭಾಗವಹಿಸುತ್ತೇವೆ” ಎಂದು ಬೆಂಬಲ ವ್ಯಕ್ತಪಡಿಸಿದರು.
ದೀಪಸ್ತಂಭ ಉದ್ಘಾಟನೆ ಬಳಿಕ ಕಲ್ಯಾಣ ನಗರದ ಆಂಜನೇಯ ಸಮಿತಿಯಿಂದ ಅಧ್ಯಕ್ಷ ಹನುಮಂತಪ್ಪ ಗೊಂದಿಯವರನ್ನು ಸನ್ಮಾನಿಸಲಾಯಿತು.





