ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್ ವಿಸ್ತರಣೆ ವಿರೋಧಿಸಿ ಹಾಗೂ ಮುಕುಂದ ಕ್ಷಿಂಡಿಯಾ ಹೊಸ ಕಾರ್ಖಾನೆ ಸ್ಥಾಪನೆಯ ವಿರುದ್ಧದ ಪ್ರತಿಭಟನೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕೊಪ್ಪಳ ಜಿಲ್ಲೆಯ ರಂಗ ಕಲಾವಿದರ ತಂಡ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿವೆ.
ಕೊಪ್ಪಳ ನಗರಸಭೆಯ ಸಂಕೀರ್ಣದಲ್ಲಿ ಬಲ್ಡೋಟಾ ವಿರೋಧಿಸಿ ಪ್ರತಿಭಟನೆ 12ನೇ ದಿನಕ್ಕೆ ಮುಂದುವರೆದಿದ್ದು, ಇಲ್ಲಿಯವರೆಗೂ ವಿವಿಧ ಸಂಘಟನೆಗಳು ಬೆಂಬಲ ಕೊಟ್ಟಿವೆ ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರಂಗಭೂಮಿ ಕಲಾವಿದರು ಬೆಂಬಲ ವ್ಯಕ್ತಪಡಿಸಿದರು.
ಕುಷ್ಟಗಿ ರೈತ ಸಂಘದ ಅಧ್ಯಕ್ಷ ನಜೀರ್ಸಾಬ್ ಮೂಲಿಮನಿ ಮಾತನಾಡಿ, “ಈಗಾಗಲೇ ಕೊಪ್ಪಳ ನಗರದ ಆಣತಿ ದೂರದಲ್ಲಿ ಸುಮಾರು 20ಕ್ಕೂ ಹೆಚ್ಚು ಕಾರ್ಖಾನೆಗಳು ತಮ್ಮ ದೂಳು ಹಾಗೂ ಹೊಗೆಯನ್ನು ಸೂಸುವುದರಿಂದ ಗ್ರಾಮೀಣ ಪ್ರದೇಶದ ಜನರು ಮಾರಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಗವಿ ಶ್ರೀಗಳ ನೇತ್ರತ್ವದಲ್ಲಿ ಬಲ್ಡೋಟಾ ವಿಸ್ತರಣೆ ವಿರುದ್ಧ ಕೊಪ್ಪಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಜನಪ್ರತಿನಿಧಿಗಳಿಗೆ ಕಾರ್ಖಾನೆಗಳ ತೊಲಗಿಸಲು ಸರಕಾರದಿಂದ ಅಧಿಕೃತ ಪತ್ರ ತರಬೇಕೆಂದು ಎಚ್ಚರಿಸಿದ್ದರು. ಆದರೆ, ಶ್ರೀಗಳು ತಮ್ಮ ಮೌನ ಮುರಿದು ಮತ್ತೆ ಕೊಪ್ಪಳದ ಪರಿಸರಕ್ಕೆ ಮಾರಕವಾಗಿರುವ ಕಾರ್ಖಾನೆಗಳ ವಿರುದ್ಧ ಮುಂದಾಳತ್ವ ವಹಿಸಿಕೊಳ್ಳಬೇಕು” ಎಂದು ವಿನಂತಿಸಿಕೊಂಡರು.
ರಂಗಕಲಾವಿದ ಲಕ್ಷ್ಮಣ ಪೀರಗಾರ ಮಾತನಾಡಿ, “ನಗರದ ವಿವಿಧ ಬಡಾವಣೆಗೆ ಕಾರ್ಖಾನೆಗಳು ಸೂಸುವ ಹೊಗೆ ಆವರಿಸಿದೆ. ಕೊಪ್ಪಳದಲ್ಲಿ ಅಲ್ಪ ಪ್ರಮಾಣದಲ್ಲಿದ್ದ ದವಾಖಾನೆಗಳು ಇಂದು ನಾಯಿ ಕೊಡೆಗಳಂತೆ ಬೃಹತ್ ಪ್ರಮಾಣದಲ್ಲಿ ತಲೆಯೆತ್ತಿವೆ ಇದಕ್ಕೆ ಮೂಲ ಕಾರಣ ಕಾರ್ಖಾನೆಗಳ ಹಾವಳಿ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗಳ ವಿರೋಧಿಗಳು ನಾವಲ್ಲ. ಅಭಿವೃದ್ಧಿ ಮತ್ತು ಉದ್ಯೋಗದ ಹೆಸರಲ್ಲಿ ಕೊಪ್ಪಳ ಜಿಲ್ಲೆಯ ಪರಸರದ ಮೇಲೆ ಅತ್ಯಾಚಾರ ಎಸಗುವ ಬಂಡವಾಳಶಾಹಿಗಳ ವಿರೋಧಿಗಳು ನಾವು. ಜಿಲ್ಲೆಯ ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವುಳ್ಳವರು ನಾವು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೊಪ್ಪಳ | ಬಲ್ಡೋಟಾ ಕಾರ್ಖಾನೆಯ ಕಾರ್ಮಿಕ ಕೆಲಸದ ವೇಳೆ ಮೇಲಿನಿಂದ ಬಿದ್ದು ಸಾವು
ಈ ವೇಳೆ ಕೆ ಬಿ ಗೋನಾಳ, ಡಿಎಮ್ ಬಡಿಗೇರ, ಶರಣು ಗಡ್ಡಿ, ಮಂಗಳೇಶ ರಾಠೋಡ್, ಕಾಶ್ಯಪ ಛಲವಾದಿ, ಅಲ್ಲಮಪ್ರಭು ಬೆಟ್ಟದೂರು, ಹುಸೇನ್ ಗೌಡ್ರ, ಹೊನ್ನೂರು ಸಾಬ್, ಯಲ್ಲಪ್ಪ, ವಲಿಸಾಬ್, ಕಾಸಿಂ ಸಾಬ್, ಪೀರ್ಸಾಬ್, ಮಲ್ಲಪ್ಪ, ರಾಜಾಸಾಬ್, ಹನುಮಂತಪ್ಪ, ಖಾಸೀಮ್ ಸಾಬ್ ಬಳ್ಳಾರಿ, ರಂಗಪ್ಪ, ನಾಗಪ್ಪ, ಈರೇಶ ಮೆಸ್ತ್ರಿ, ಪೀರ್ಸಾಬ್ ಬಟರನರಸಾಪುರ, ಪೀರ್ ಸಾಬ್ ಬಳಿಗಾರ, ಮೆಹ್ಬೂಬ್ ಸಾಬ್, ಸುರೇಶ, ಬಸವರಾಜ ರಡ್ಡೆರ, ಸುರೇಶ ಕುರುಬರ ಹಾಗೂ ರೈತರು ರಂಗಭೂಮಿ ಕಲಾವಿದರು ಇದ್ದರು.





